ಇದ್ದಕ್ಕಿದ್ದಂತೆ ತೀವ್ರ ತಲೆನೋವಿನ ಜೊತೆಗೆ ಆತಂಕವಾದರೆ ಯಾರಿಗಾದರೂ ಭಯವಾಗುವುದು ಸಹಜ. ಈ ರೀತಿಯಾಗುವುದು ಗಂಭೀರ ಮೆದುಳಿನ ಅಸ್ವಸ್ಥತೆಯ ಸಂಕೇತವಾಗಿರಬಹುದು. ಸಾಮಾನ್ಯವಾಗಿ ಇಂತಹ ಲಕ್ಷಣಗಳು ಇದ್ದಕ್ಕಿದ್ದಂತೆ ಕಂಡುಬರುತ್ತದೆ, ವ್ಯಕ್ತಿಯಲ್ಲಿ ಆತಂಕ (Anxiety) ಉಂಟುಮಾಡಿ, ವಿಚಲಿತಗೊಳಿಸಿ, ಭಯಭೀತರನ್ನಾಗಿ ಮಾಡುತ್ತವೆ. ಆದರೆ ಈ ರೀತಿ ಬರುವ ಎಲ್ಲಾ ತಲೆನೋವು (Headache) ಅಥವಾ ಆತಂಕ ಮೆದುಳಿನ ಕಾಯಿಲೆಯನ್ನು ಸೂಚಿಸುವುದಿಲ್ಲ, ಆದರೆ ಅದನ್ನು ನಿರ್ಲಕ್ಷಿಸುವುದು ಸಹ ಸೂಕ್ತವಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದರಿಂದ ಅನಗತ್ಯ ಭಯವನ್ನು ಕಡಿಮೆ ಮಾಡಬಹುದು. ಇಂತಹ ಸಂದರ್ಭದಲ್ಲಿ, ಈ ಸ್ಥಿತಿ ಎಷ್ಟು ಗಂಭೀರವಾಗಬಹುದು, ಅದನ್ನು ಹೇಗೆ ತಡೆಯುವುದು ಮತ್ತು ಯಾವಾಗ ವೈದ್ಯರನ್ನು ಸಂಪರ್ಕಿಸುವುದು ಎಂಬುದರ ಬಗ್ಗೆ ತಿಳಿದಿದ್ದಲ್ಲಿ ಇಂತಹ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬಹುದು.
ತಕ್ಷಣ ಬರುವ ತಲೆನೋವು ಮತ್ತು ಆತಂಕವು ಮೆದುಳಿನ ಅಸ್ವಸ್ಥತೆಯೇ?
ದೆಹಲಿಯ ನರವಿಜ್ಞಾನಿ ಡಾ. ರಾಜೇಶ್ ಕುಮಾರ್ ಹೇಳುವ ಪ್ರಕಾರ ತೀವ್ರ ತಲೆನೋವು ಮತ್ತು ಆತಂಕ ಉಂಟಾಗುವುದಕ್ಕೆ ಹಲವಾರು ಕಾರಣಗಳಿರಬಹುದು, ಆದರೆ ಇದು ಯಾವಾಗಲೂ ಗಂಭೀರ ಮೆದುಳಿನ ಅಸ್ವಸ್ಥತೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಇದು ಒತ್ತಡ, ಚಿಂತೆ ಅಥವಾ ಮಾನಸಿಕ ಒತ್ತಡ ಉಂಟಾದಾಗಲೂ ಕೂಡ ಅನುಭವಕ್ಕೆ ಬರುತ್ತದೆ. ಆದರೆ ನಿದ್ರೆಯ ಕೊರತೆ ಅಥವಾ ನಿರಂತರ ಆಯಾಸವು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ, ಇದು ಹಠಾತ್ ತೀವ್ರ ತಲೆನೋವು ಮತ್ತು ಚಡಪಡಿಕೆಗೆ ಕಾರಣವಾಗಬಹುದು. ಜೊತೆಗೆ ನಿರ್ಜಲೀಕರಣವು ತಲೆಯನ್ನು ಭಾರವಾಗಿಸುತ್ತದೆ ಮತ್ತು ಆತಂಕವನ್ನು ಹೆಚ್ಚಿಸುತ್ತದೆ.
ಅದೇ ರೀತಿ, ರಕ್ತದೊತ್ತಡ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಏರಿಳಿತಗಳು ಸಾಮಾನ್ಯವಾಗಿ ತ್ವರಿತ ಹೃದಯ ಬಡಿತ, ಬೆವರುವುದು ಮತ್ತು ತಲೆನೋವಿಗೆ ಕಾರಣವಾಗಬಹುದು. ಪ್ಯಾನಿಕ್ ಅಟ್ಯಾಕ್ ಸಮಯದಲ್ಲಿ ತಲೆನೋವಿನ ಜೊತೆಗೆ ಕೆಲವರಿಗೆ ತೀವ್ರ ಆತಂಕ ಕೂಡ ಉಂಟಾಗುತ್ತದೆ. ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು ಸಹ ಈ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೆ, ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ಗಳ ದೀರ್ಘಕಾಲದ ಬಳಕೆಯು ಮೆದುಳು ಮತ್ತು ಕಣ್ಣುಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಆಗ ಇಂತಹ ಲಕ್ಷಣಗಳು ಪ್ರಚೋದಿಸಲ್ಪಡುತ್ತದೆ.
ಇದನ್ನೂ ಓದಿ: ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗಿರುವ ವ್ಯತ್ಯಾಸವೇನು? ಇದನ್ನು ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್
ತಡೆಯುವುದು ಹೇಗೆ?
ಇಂತಹ ಸಮಸ್ಯೆಗಳನ್ನು ತಡೆಗಟ್ಟಲು, ದೈನಂದಿನ ಅಭ್ಯಾಸಗಳ ಕಡೆ ಗಮನ ಕೊಡುವುದು ಬಹಳ ಮುಖ್ಯ. ಸಾಕಷ್ಟು ನಿದ್ರೆ ಮಾಡಬೇಕು. ದೇಹವು ದುರ್ಬಲವಾಗದಂತೆ ದಿನವಿಡೀ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಿ ಕಣ್ಣು ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಬೇಕು. ಪ್ರತಿನಿತ್ಯ ಆಳವಾದ ಉಸಿರಾಟ, ಲಘು ವ್ಯಾಯಾಮ ಅಥವಾ ಧ್ಯಾನ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಇದೆಲ್ಲದರ ಜೊತೆಗೆ ದೀರ್ಘಕಾಲದವರೆಗೆ ಹಸಿವಿನಿಂದ ಇರುವುದನ್ನು ತಪ್ಪಿಸಿ. ಕೆಲಸದ ನಡುವೆ ವಿರಾಮ ತೆಗೆದುಕೊಳ್ಳಬೇಕು.
ತಲೆನೋವು ತೀವ್ರವಾಗಿದ್ದರೆ, ಹಿಂದೆಂದೂ ಆ ರೀತಿ ಆಗದಿದ್ದರೆ ಅಥವಾ ನೋವು ನಿರಂತರವಾಗಿ ಹೆಚ್ಚುತ್ತಿದ್ದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಆತಂಕ, ಗೊಂದಲ, ಮಾತನಾಡಲು ತೊಂದರೆ, ಕೈ ಅಥವಾ ಕಾಲುಗಳಲ್ಲಿ ದೌರ್ಬಲ್ಯ ಅಥವಾ ಮಸುಕಾದ ದೃಷ್ಟಿಯೊಂದಿಗೆ ಮೂರ್ಛೆ ಹೋಗುವುದು ಗಂಭೀರ ಲಕ್ಷಣಗಳಾಗಿರಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ