‘ಧುರಂಧರ್’ (Dhurandhar) ಸಿನಿಮಾ 2025ರ ವರ್ಷದ ಅತಿದೊಡ್ಡ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಈ ಸಿನಿಮಾ ಕೂಡ ಒಂದಾಗಿದೆ. ಇದೀಗ ಪ್ರಶಸ್ತಿ ಪ್ರದಾನ ಸಮಾರಂಭವೊಂದರ ಕಾರಣದಿಂದಾಗಿ ‘ಧುರಂಧರ್’ ಸಿನಿಮಾ ಮತ್ತೆ ಭಾರೀ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ನಡೆದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಿತ್ರತಂಡ ಗೈರಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಸಿನಿಮಾ ಪತ್ರಿಕೋದ್ಯಮದಲ್ಲಿ ಪ್ರಮುಖ ಮಾಧ್ಯಮ ಸಂಸ್ಥೆ ಎನಿಸಿಕೊಂಡಿರುವ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಆಯೋಜಿಸಿದ್ದ ಇತ್ತೀಚಿನ ಪ್ರಶಸ್ತಿ ಸಮಾರಂಭದಲ್ಲಿ ‘ಧುರಂಧರ್’ ಚಿತ್ರಕ್ಕೆ ಪ್ರಶಸ್ತಿ ಘೋಷಿಸಲಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಮಾಡಿದ ಅದ್ಭುತ ಸಾಧನೆಗಾಗಿ ಈ ಗೌರವವನ್ನು ನೀಡಲಾಗಿತ್ತು. ಆದರೆ, ಅಚ್ಚರಿಯೆಂಬಂತೆ ಚಿತ್ರತಂಡದ ಯಾವೊಬ್ಬ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಮತ್ತು ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆ ಏರಲಿಲ್ಲ!
ಚಿತ್ರತಂಡದ ಗೈರಿಗೆ ಕಾರಣವೇನು? ಚಿತ್ರತಂಡದ ಈ ನಡೆಯ ಹಿಂದೆ ಅಚ್ಚರಿಯ ಹಿನ್ನೆಲೆಯೊಂದಿದೆ. ಚಿತ್ರ ಬಿಡುಗಡೆಯಾದ ಸಮಯದಲ್ಲಿ ‘ಹಾಲಿವುಡ್ ರಿಪೋರ್ಟರ್’ನ ಪ್ರಮುಖ ವಿಮರ್ಶಕಿ ಅನುಪಮಾ ಚೋಪ್ರಾ ಅವರು ಈ ಚಿತ್ರದ ಬಗ್ಗೆ ವಿವಾದಾತ್ಮಕ ವಿಮರ್ಶೆ ಮಾಡಿದ್ದರು. ‘ಧುರಂಧರ್ ಚಿತ್ರವು ಉದ್ದೇಶಪೂರ್ವಕವಾಗಿ ಪಾಕಿಸ್ತಾನ ವಿರೋಧಿ ನಿರೂಪಣೆಯನ್ನು ಹೊಂದಿದೆ’ ಎಂದು ಅವರು ಟೀಕಿಸಿದ್ದರು.
ವಿಮರ್ಶಕಿಯ ಈ ಮಾತುಗಳು ಚಿತ್ರತಂಡದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ, ತಮ್ಮ ಸಿನಿಮಾವನ್ನ ಟೀಕಿಸಿದ ಅದೇ ಮಾಧ್ಯಮ ಸಂಸ್ಥೆ ನೀಡಿದ ಪ್ರಶಸ್ತಿಯನ್ನು ಬಹಿಷ್ಕರಿಸುವ ಮೂಲಕ ‘ಧುರಂಧರ್’ ತಂಡವು ಅಂದಿನ ವಿಮರ್ಶೆಗೆ ತಕ್ಕ ತಿರುಗೇಟು ನೀಡಿದೆ. ಪ್ರಶಸ್ತಿ ಸಮಾರಂಭವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವ ಮೂಲಕ ಚಿತ್ರತಂಡವು ಮಾಧ್ಯಮ ಸಂಸ್ಥೆಗೆ ತಕ್ಕ ಪ್ರತ್ಯುತ್ತರ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಧುರಂಧರ್ 2 Vs ಟಾಕ್ಸಿಕ್: 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ
‘ಧುರಂಧರ್’ ಚಿತ್ರದ ಭಾರಿ ಯಶಸ್ಸಿನ ಬಳಿಕ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಲಿದೆ. ಹಾಗಾದರೆ ‘ಧುರಂಧರ್ 2’ ಸಿನಿಮಾಗೆ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಯಾವ ರೀತಿ ವಿಮರ್ಶೆ ನೀಡಲಿದೆ ಎಂಬ ಕುತೂಹಲ ಸಿನಿಪ್ರಿಯರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.