Headlines

‘ನೆಹರೂ, ಇಂದಿರಾ ಕಾಲದಲ್ಲಿ ವಿದೇಶೀ ಗುಪ್ತಚರರ ಕೈಲಿತ್ತು ಭಾರತ’: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು; ಸುಧಾಂಶು ತ್ರಿವೇದಿ ಸರಣಿ ಟ್ವೀಟ್ – Kannada News | India was allegedly compromised and sold to US and Soviet’s spies, says Sudhanshu Trivedi

ನವದೆಹಲಿ, ಫೆಬ್ರುವರಿ 25: ಜವಾಹಾರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಆಡಳಿತದ ವೇಳೆ ಭಾರತದ ಪೂರ್ಣ ನಿಯಂತ್ರಣವು ಅಮೆರಿಕ ಹಾಗೂ ರಷ್ಯನ್ ಗುಪ್ತಚರ ಸಂಸ್ಥೆಗಳ ಕೈಯಲ್ಲಿತ್ತು. ವಿದೇಶೀ ಬೇಹುಗಾರರಿಗೆ ದೇಶವನ್ನೇ ಮಾರಿಬಿಟ್ಟಿದ್ದರು ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಿಕೊಂಡು ಭಾರತದ ಹಿತಾಸಕ್ತಿಯನ್ನು ಬಲಿಕೊಡಲಾಗಿದೆ. ಅಮೆರಿಕಕ್ಕೆ ಪ್ರಧಾನಿಗಳು ಶರಣಾಗಿದ್ದಾರೆ. ಒಪ್ಪಂದದ ಮೂಲಕ ಭಾರತೀಯ ರೈತರಿಗೆ ಮರಣ ಶಾಸನ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಬಾರಿ ಬಾರಿ ಮಾಡುತ್ತಿರುವ ಆರೋಪಗಳಿಗೆ ಬಿಜೆಪಿ ವಕ್ತಾರರು ತಿರುಗೇಟು ಕೊಟ್ಟಂತಿದೆ.

ಎಕ್ಸ್​ನಲ್ಲಿ ಸರಣಿ ಪೋಸ್ಟ್​ಗಳನ್ನು ಹಾಕಿರುವ ಸುಧಾಂಶು ತ್ರಿವೇದಿ, ನೆಹರೂ, ಇಂದಿರಾ ಕಾಲದಲ್ಲಿ ದೇಶದ ಭದ್ರತೆಯನ್ನು ಅದೆಷ್ಟರಮಟ್ಟಿಗೆ ರಾಜಿ ಮಾಡಿಕೊಳ್ಳಲಾಗಿತ್ತು ಎನ್ನುವ ವಿವರವನ್ನು ಬಿಚ್ಚಿಟ್ಟಿದ್ದಾರೆ.

ಭಾರತ ಆಲಿಪ್ತ ನೀತಿ ಹೊಂದಿದ್ದರೂ ಅಮೆರಿಕದ ಸಿಐಎ ಹಾಗೂ ಸೋವಿಯತ್​ನ ಕೆಜಿಬಿ ನಿಯಂತ್ರಣದಲ್ಲಿ ವ್ಯವಸ್ಥೆ ಇತ್ತು. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿರಲಿಲ್ಲ, ಶರಣಾಗತಿಯಾಗಿತ್ತು ಎಂದು ಬಿಜೆಪಿ ವಕ್ತಾರರು ತಮ್ಮ ಏಳು ಟ್ವೀಟ್​ಗಳ ಸರಣಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ: ಶಾಲಾ ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯ ಕುರಿತು ಸುಪ್ರೀಂ ಗರಂ

‘ನೆಹರೂ ಅವರ ಪ್ರಧಾನಿ ಕಾರ್ಯಾಲಯವು ಸಿಐಎ ಪಾಲಿಗೆ ಓಪನ್ ಬುಕ್ ಆಗಿತ್ತು. ಅವರ ವಿಶೇಷ ಸಹಾಯಕರಾದ ಎಂ.ಒ. ಮಥಾಯ್ ಅವರು ಅಮೆರಿಕದ ಆಸ್ತಿಯಾಗಿದ್ದರು. ಪ್ರತಿಯೊಂದು ದಾಖಲೆಯನ್ನೂ ಲ್ಯಾಂಗ್ಲೇಗೆ (ಸಿಐಎ ಮುಖ್ಯ ಕಚೇರಿ) ನಕಲು ಮಾಡಿ ಕಳುಹಿಸಲಾಗುತ್ತಿತ್ತು. ಭಾರತದ ಯಾವುದೇ ದಾಖಲೆ ಬೇಕೆಂದರೂ ತೆಗೆಯಬಲ್ಲೆವು ಎಂದು ಅಮೆರಿಕದ ರಾಜತಾಂತ್ರಿಕರು ಹೇಳಿಕೊಳ್ಳುತ್ತಿದ್ದುಂಟು. ಭಾರತದ ಹೃದಯಭಾಗವೇ ಅಮೆರಿಕದ ಆಸ್ತಿಯಾಗಿತ್ತು’ ಎಂದು ಡಾ| ಸುಧಾಂಶು ತ್ರಿವೇದಿ ತಿಳಿಸಿದ್ದಾರೆ.

ಅಮೆರಿಕದವು ನೆಹರೂ ಪ್ರಧಾನಿ ಕಾರ್ಯಾಲಯದ ಮೇಲೆ ಕಣ್ಣಿಟ್ಟಿದ್ದರೆ, ರಷ್ಯಾದವರೇನು ಹಿಂದುಳಿದಿರಲಿಲ್ಲ. ರಷ್ಯಾದ ಕೆಜಿಬಿ (ಗುಪ್ತಚರ ಏಜೆನ್ಸಿ) ಭಾರತೀಯ ಸರ್ಕಾರದ ಪ್ರತಿಯೊಂದು ವಿಭಾಗದಲ್ಲೂ ಜನರನ್ನು ಇಟ್ಟಿತ್ತು. ಟ್ರೇಡ್ ಮಿಷನ್, ಸಾಂಸ್ಕೃತಿಕ ಸಂಬಂಧ ಇವೆಲ್ಲವೂ ಹೊರಗೆ ಕಾಣಿಸಲು ಇದ್ದ ಮುಖವಾಡ. ರಷ್ಯಾಗೆ ಬೇಹುಗಾರರು ಬೇಕಿರಲಿಲ್ಲ. ಇಡೀ ಸಿಸ್ಟಂ ಅನ್ನೇ ಅವರು ಕೊಂಡುಕೊಂಡಿದ್ದರು ಎಂದು ಬಿಜೆಪಿ ವಕ್ತಾರರು ಆಪಾದಿಸಿದ್ದಾರೆ.

ಇಂದಿರಾ ಅವಧಿಯಲ್ಲಿ ಸಿಐಎ ಪ್ರತೀ ಮೂಲೆಯನ್ನೂ ಹೊಕ್ಕಿತ್ತು. ಸಿಐಎಯಿಂದ ಹಣ ಪಡೆಯುತ್ತಿದ್ದರು. ಕಾಂಗ್ರೆಸ್ಸಿಗೆ ಕೋಟಿಗಟ್ಟಲೆ ಹಣ ಹರಿದು ಹೋಗುತ್ತಿತ್ತು. ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಇಂದಿರಾ ಗಾಂಧಿಗೆ ಒಂದು ಬಂಡಲ್ ಹೋಗಿ ತಲುಪಿತ್ತು. ವಿದೇಶೀ ಲಂಚಕ್ಕಾಗಿ ದೇಶವನ್ನು ಮಾರಿದ್ದರು ಎಂದು ರಾಜ್ಯಸಭಾ ಸಂಸದರೂ ಆಗಿರುವ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಎಂಟನೇ ತರಗತಿಯ ಹೊಸ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ

1976ರಲ್ಲಿ ಸೋವಿಯತ್​ಗೆ ಸಹಾಯವಾಗುವಂತೆ ರುಬಲ್ ಎದುರು ರುಪಾಯಿ ಮೌಲ್ಯವನ್ನು ಬದಲಿಸಿದ್ದರು ಇಂದಿರಾ ಗಾಂಧಿ. ಇದು ನೆಹರೂ ಹಾಗೂ ಇಂದಿರಾ ಆಡಳಿತದಲ್ಲಿ ದೇಶದ ಹಿತಾಸಕ್ತಿ ಬಲಿಕೊಟ್ಟ ಕಥೆ ಎಂದು ಡಾ. ಸುಧಾಂಶು ತ್ರಿವೇದಿ ವಿವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *