Mental Health Tips for Overseas Students by Dr. Kritishree
ಅಮೆರಿಕದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಯ ಸಾವು ನಮ್ಮ ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕುವುದು ಸಹಜ. ಎಷ್ಟೇ ಮೇಧಾವಿಯಾಗಿದ್ದರೂ ತನ್ನದಲ್ಲದ, ತನ್ನವರಿಲ್ಲದ ಪ್ರದೇಶದಲ್ಲಿ ವಾಸ ಮಾಡುವುದು ಸುಲಭವಲ್ಲ. ಆದರೆ ಕನಸನ್ನು ನನಸಾಗಿಸಿಕೊಳ್ಳುವ ಹಂಬಲ ಎಷ್ಟೇ ಕಷ್ಟವಿದ್ದರೂ ನಿಭಾಯಿಸುವ ಹಂತಕ್ಕೆ ಹೋಗಿಬಿಡುತ್ತವೆ. ಆದರೆ ಎಲ್ಲರಿಗೂ ಹೀಗಾಗುವುದಿಲ್ಲ. ಅದರಲ್ಲಿಯೂ ಸಾಕೇತ್ ಶ್ರೀನಿವಾಸಯ್ಯ ಸಾವು ವಿದೇಶಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಹಾಗಾಗಿ ಬೇರೆ ಬೇರೆ ದೇಶಗಳಿಗೆ ತಮ್ಮ ಕನಸು ಕಟ್ಟಿಕೊಳ್ಳಲು ಹೋಗುವವರು ಕೆಲವು ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇಂತಹ ಘಟನೆಗಳನ್ನು ಕೇಳಿದಾಗ ಸಾಮಾಜಿಕ ವ್ಯವಸ್ಥೆಯನ್ನು ದೂಷಿಸಿ ನಂತರ ಕೆಲವೇ ಸಮಯದಲ್ಲಿ ಮರೆತುಬಿಡುತ್ತೇವೆ ಮತ್ತೆ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆದರೆ ಹಾಗಾಗಬಾರದು. ಅದಕ್ಕಾಗಿಯೇ ಈ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್, ಡಾ. ಕೃತಿಶ್ರೀ ಸೋಮಣ್ಣ (Dr. Krithishree S.S.) ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.
ಡಾ. ಕೃತಿಶ್ರೀ ಹೇಳುವ ಪ್ರಕಾರ, ಖಿನ್ನತೆಯು ಸಾಮಾನ್ಯವಾಗಿ ಅನುಭವವಾಗುವ ʻಬೇಸರʼಕ್ಕಿಂತ ಭಿನ್ನವಾಗಿರುತ್ತದೆ. ಸಾಮಾನ್ಯ ಬೇಸರವು ತಾತ್ಕಾಲಿಕ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಉಂಟಾಗುವ ಭಾವನೆಯಾಗಿದ್ದು, ಪರಿಸ್ಥಿತಿ ಸುಧಾರಿಸಿದಂತೆ ಮಾಯವಾಗುತ್ತದೆ. ಆದರೆ, ‘ತೀವ್ರ ಮಟ್ಟದ ಖಿನ್ನತೆ’ (Major Depressive Disorder) ಹೊಂದಿರುವವರು ನಕಾರಾತ್ಮಕ ಭಾವನೆಗಳಿಂದ ಹೊರಬರಲು ಕಷ್ಟಪಡುತ್ತಾರೆ. ಇದು ದೀರ್ಘಕಾಲದ ವರೆಗೆ ಇರುತ್ತದೆ. ಎಷ್ಟೋ ಜನರು ತಮ್ಮ ನಡವಳಿಕೆಯಲ್ಲಿನ ಬದಲಾವಣೆಯನ್ನು ಗುರುತಿಸದೇ ಕಡೆಗಣಿಸುತ್ತಾರೆ, ಇದೇ ಮುಂದೆ ಮಾನಸಿಕ ಸಮಸ್ಯೆಯಾಗಿ ಮುಂದುವರೆಯುತ್ತದೆ.
ಹೊರ ದೇಶಕ್ಕೆ ಹೋದಾಗ, ಹೊಸ ಪದ್ದತಿ ಮತ್ತು ಅಲ್ಲಿನ ವಾತಾವರಣಕ್ಕೆ ಹೊಂದುಕೊಳ್ಳಲು ಸಮಯ ಹಿಡಿಯುತ್ತದೆ, ಆ ಹಂತದಲ್ಲಿ ನಮ್ಮ ಮನಸ್ಥಿತಿಯಲ್ಲಿ ಆಗುವ ಬದಲಾವಣೆಯನ್ನು ಗುರುತಿಸಬೇಕು, ಇಲ್ಲಿ ಆತ್ಮಾವಲೋಕನ, ನಮ್ಮ ನಡವಳಿಕೆಯ ಬದಲಾವಣೆಯನ್ನು ಸ್ವತಃ ಗುರುತಿಸುವುದು ಅತ್ಯಗತ್ಯ, ಇದು ಮುಂದುವರೆದ ಮಾನಸಿಕ ಸಮಸ್ಯೆ ಖಿನ್ನತೆ ಒಳಗಾಗುವುದನ್ನು ತಡೆಯಬಹುದು, ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದರಿಂದ ರಕ್ಷಿಸಬಹುದು.
ಜೊತೆಗಿರುವವರ ಕರ್ತವ್ಯ ಬಹಳ ಮುಖ್ಯ:
ನಮ್ಮ ಸುತ್ತ ಇರುವವರ ನಡೆವಳಿಕೆಯಲ್ಲಿನ ಬದಲಾವಣೆಯನ್ನು ಕೂಡ ಗುರುತಿಸಬೇಕು. ತೀವ್ರ ಮಟ್ಟದಲ್ಲಿ ನಡವಳಿಕೆಯಲ್ಲಿ ಅಸಹಜತೆ ಕಂಡು ಬಂದಾಗ ಅಂತಹವರ ನೆರವಿಗೆ ಧಾವಿಸುವುದು ಮುಖ್ಯ. ಇಂತಹ ಸಂದರ್ಭದಲ್ಲಿ ಅವರ ಜೊತೆಗಿದ್ದವರ ಪಾತ್ರ ಬಹಳ ಮುಖ್ಯವಾಗುತ್ತದೆ. ದೈಹಿಕ ಆರೋಗ್ಯ ಸಮಸ್ಯೆಯಂತೆ ಮಾನಸಿಕ ಆರೋಗ್ಯ ಕೂಡ ಚಿಕಿತ್ಸೆ ಪಡೆಯಬೇಕಾದ ಅಗತ್ಯತೆಯನ್ನು ಹೊಂದಿದೆ. ಜೀವನದಲ್ಲಿ ಏನು ಇಲ್ಲ ಎಂಬ ಭಾವ, ನಿರಾಸಕ್ತಿ, ಅಸಹಜ ನಡವಳಿಕೆ, ಆಹಾರ ಪದ್ದತಿಯಲ್ಲಿ, ಜೀವನಶೈಲಿಯಲ್ಲಿ ತೀವ್ರಮಟ್ಟದ ಅಸಹಜತೆ, ಅಸಹಾಯಕತೆ ಇದನ್ನು ‘ಕಾಗ್ನಿಟಿವ್ ಟ್ರಯಾಡ್’ ಎಂದು ಪರಿಗಣಿಸಲಾಗುತ್ತದೆ. ಇವು ಮಾನಸಿಕ ಆರೋಗ್ಯ ತುರ್ತು ಪರಿಸ್ಥಿಯನ್ನು ತೋರಿಸುತ್ತದೆ. ಕೇವಲ ಫೋನ್ನಲ್ಲಿ ಮಾತನಾಡಿ ಸಲಹೆ ಪಡೆಯುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ವೈದ್ಯರ ಜೊತೆ ನೇರ ಮಾತುಕತೆ ಅಗತ್ಯವಿರುತ್ತದೆ. ಆಪ್ತಸಮಾಲೋಚನೆಯ ಜೊತೆಗೆ ಔಷಧೋಪಚಾರಗಳು ಪ್ರಮುಖ ಪಾತ್ರವಹಿಸುತ್ತವೆ. ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಶಮನಕಾರಿ ಔಷಧಗಳು (Antidepressants) ಸುರಕ್ಷಿತವಾಗಿದ್ದು, ಇವು ಅಂತಹ ಆಲೋಚನೆಗಳ ತೀವ್ರತೆಯನ್ನು ಶೀಘ್ರವಾಗಿ ಕಡಿಮೆ ಮಾಡಲು ಸಹಾಯವಾಗುತ್ತದೆ. ಇದೆಲ್ಲದರ ಜೊತೆಗೆ ವಿದೇಶಿ ವಿಶ್ವವಿದ್ಯಾಲಯಗಳು ಕೂಡ ಹೊರಗಿನಿಂದ ಮಕ್ಕಳಿಗೆ ಹೆಚ್ಚು ಸಹಾಯ ಮಾಡಬೇಕು.
ಇದನ್ನೂ ಓದಿ: ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ ಆರೋಗ್ಯ ಇಲಾಖೆ: ಸಿಟಿ ಜನರಲ್ಲಿ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ ಸಮಸ್ಯೆ
ಆತ್ಮಹತ್ಯೆಯ ಅಪಾಯ ಕಡಿಮೆ ಮಾಡುವ ವಿಧಾನಗಳು:
ಎಲೆಕ್ಟ್ರೋ ಕಾನ್ವಲ್ಸಿವ್ ಥೆರಪಿ (ECT) ಮತ್ತು ರಿಪಿಟಿಟಿವ್ ಟ್ರಾನ್ಸ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಶನ್ (rTMS) ನಂತಹ ಮೆದುಳಿನ ಉತ್ತೇಜನ ವಿಧಾನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆಯುಧಗಳ ಲಭ್ಯತೆಯ ಮೇಲೆ ನಿರ್ಬಂಧ ಹೇರುವುದು, ವಿಷಕಾರಿ ವಸ್ತುಗಳು ಅಥವಾ ಔಷಧಿಗಳ ಸುಲಭ ಲಭ್ಯತೆಯನ್ನು ಸೀಮಿತಗೊಳಿಸುವುದು, ಆತ್ಮಹತ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಈ ಎಚ್ಚರಿಕೆ ಸೂಚನೆಗಳನ್ನು ಕಡೆಗಣಿಸಬಾರದು;
ಹಠಾತ್ ಏಕಾಂಗಿ ವರ್ತನೆ, ಒಂದೇ ಪದದ ಉತ್ತರಗಳು, ಸ್ವಚ್ಛತೆಯನ್ನು ಕಡೆಗಣಿಸುವುದು, ಸರಿಯಾಗಿ ಊಟ ಮಾಡದಿರುವುದು, ನಿದ್ರೆಯಲ್ಲಿ ವ್ಯತ್ಯಾಸ, ನಿರಾಶೆಯ ಮಾತುಗಳು ಇವು ಸಾಮಾನ್ಯ ಹೊಂದಾಣಿಕೆ ಸಮಸ್ಯೆಗಳು ಮಾತ್ರವಲ್ಲ; ಆತಂಕ ಅಥವಾ ಹತಾಶೆಯ ಲಕ್ಷಣಗಳಾಗಿರಬಹುದು. ಹಾಗಾಗಿ ನಿಮ್ಮ ಸ್ನೇಹಿತರಲ್ಲಿ ಈ ರೀತಿಯ ಸಮಸ್ಯೆ ಕಂಡುಬಂದಾಗ ನಿರ್ಲಕ್ಷ್ಯ ಮಾಡಬೇಡಿ.
ಹೊರದೇಶಕ್ಕೆ ಹೋಗಿರುವ ಹರ್ಷಿತ್ ಹೆಗಡೆಯವರ ಕಿವಿಮಾತು!
ನಮ್ಮ ದೇಶ ಬಿಟ್ಟು ಹೊರಗಡೆ ಹೋಗಿ ಓದುವಾಗ ಅಥವಾ ಕೆಲಸ ಹುಡುಕುವಾಗ ಭಯ, ಆತಂಕವಾಗೋದು ಸಹಜ ಏಕೆಂದರೆ ನಾವು ಹೊಂದಿಕೊಂಡಿದ್ದ ವ್ಯವಸ್ಥೆಯನ್ನು ಬಿಟ್ಟು ಬಂದಿರುತ್ತೇವೆ. ಇದನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. ಹೊರ ದೇಶದಲ್ಲಿ ಶಿಕ್ಷಣ, ಆಹಾರ ಪದ್ದತಿ, ಜೀವನ ಪದ್ದತಿ ಎಲ್ಲವೂ ಭಾರತಕ್ಕಿಂತ ಭಿನ್ನವಾಗಿ ಇರುವುದರಿಂದ ಅಲ್ಲಿಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕು. ಹೊರ ದೇಶದಲ್ಲೂ ಭಾರತದ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ, ಕೆಲವು ಸಮುದಾಯಗಳಿವೆ ಅವರ ಜೊತೆಗೆ ಗೆಳೆತನ ಮಾಡಬೇಕು ಇದರಿಂದ ನಮ್ಮ ಜೊತೆ ನಮ್ಮವರು ಇದ್ದಾರೆ ಎಂಬ ಧೈರ್ಯ ಸಿಗುತ್ತದೆ. ಸೋಷಿಯಲ್ ಮೀಡಿಯಾ ಮೂಲಕ ಈಗ ಸುಲಭವಾಗಿ ಕಾಂಟ್ಯಾಕ್ಟ್ ಪಡೆಯಬಹುದು. ಜೊತೆಗೆ ನಿತ್ಯ ಕುಟುಂಬದವರ ಜೊತೆ, ಹಳೆ ಗೆಳೆಯರ ಜೊತೆ ಮಾತುಕತೆಯಲ್ಲಿದ್ದರೆ ಒಂದು ಸಮಾಧಾನವಿರುತ್ತದೆ. ಎಲ್ಲದಕ್ಕೂ ತಾಳ್ಮೆ ಮತ್ತು ಆತ್ಮವಿಶ್ವಾಸ ಎರಡೂ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ