Headlines

IPL 2026: ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ; ಈ ದಿನದಿಂದ 19ನೇ ಸೀಸನ್ ಆರಂಭ – Kannada News | IPL 2026 Schedule Update: New Start Date March 28, Elections Delay Announcement

2026 ರಟಿ20 ವಿಶ್ವಕಪ್ ಮುಕ್ತಾಯಗೊಳ್ಳಲು ಇನ್ನೂ ಕೆಲವೇ ಪಂದ್ಯಗಳು ಬಾಕಿ ಇವೆ. ಮಾರ್ಚ್ 8 ರಂದು ಫೈನಲ್ ಪಂದ್ಯ ನಡೆಯಲಿದ್ದು, ಯಾರಿಗೆ ಚಾಂಪಿಯನ್ ಪಟ್ಟ ಒಲಿಯಲಿದೆ ಎಂಬುದು ಅಲ್ಲಿ ಖಚಿತವಾಗಲಿದೆ. ಭಾರತದಲ್ಲಿ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ 19ನೇ ಆವೃತ್ತಿಯ ಐಪಿಎಲ್​ಗೂ ಚಾಲನೆ ಸಿಗಲಿದೆ. 2026 ರ ಐಪಿಎಲ್ (IPL 2026) ವೇಳಾಪಟ್ಟಿ ಇದುವರೆಗೂ ಪ್ರಕಟವಾಗಿಲ್ಲ. ಆದಾಗ್ಯೂ ಮಾರ್ಚ್​ ತಿಂಗಳ ಕೊನೆಯ ವಾರದಲ್ಲಿ ಈ ಟೂರ್ನಿಗೆ ಚಾಲನೆ ಸಿಗಲಿದೆ ಎಂಬುದು ಖಚಿತವಾಗಿದೆ. ಇದುವರೆಗೆ ಮಾರ್ಚ್​ 26 ರಿಂದ ಟೂರ್ನಿ ಆರಂಭವಾಗಲಿದೆ ಎನ್ನಲಾಗುತ್ತಿತ್ತು. ಆದರೀಗ ಮಾರ್ಚ್ 26 ರ ಬದಲಿಗೆ ಮಾರ್ಚ್ 28 ರಂದು ಐಪಿಎಲ್​ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.

ವಾಸ್ತವವಾಗಿ 2025 ರ ಡಿಸೆಂಬರ್​ನಲ್ಲಿ ಅಬುಧಾಬಿಯಲ್ಲಿ ನಡೆದ ಆಟಗಾರರ ಹರಾಜಿನ ಸಂದರ್ಭದಲ್ಲಿ, ಬಿಸಿಸಿಐ ಐಪಿಎಲ್ 2026 ಸೀಸನ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ ಎಂದು ಘೋಷಿಸಿತ್ತು. ಆದರೀಗ ಮಾರ್ಚ್ 28 ರಿಂದ ಪಂದ್ಯಾವಳಿಯನ್ನು ಪ್ರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಆರಂಭದ ದಿನಾಂಕದಲ್ಲಿ ಬದಲಾವಣೆಯಾದರೂ, ಫೈನಲ್ ಪಂದ್ಯ ಮಾತ್ರ ಈ ಮೊದಲೇ ನಿರ್ಧರಿಸಿದಂತೆ ಮೇ 31 ರಂದು ನಡೆಯಲಿದೆ. ಇಎಸ್‌ಪಿಎನ್-ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಈ ನಿರ್ಧಾರ ಮತ್ತು ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಔಪಚಾರಿಕವಾಗಿ ಅನುಮೋದಿಸಲು ಐಪಿಎಲ್ ಆಡಳಿತ ಮಂಡಳಿ ಮುಂದಿನ ವಾರ ಸಭೆ ಸೇರಲಿದೆ.

ಐಪಿಎಲ್ ವೇಳಾಪಟ್ಟಿ ಏಕೆ ವಿಳಂಬ?

ಬಿಸಿಸಿಐ ಇನ್ನೂ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ ಕಾರಣ, ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು. ಮುಂದಿನ ಕೆಲವು ತಿಂಗಳುಗಳಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇರಳದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ, ಐಪಿಎಲ್ ಪಂದ್ಯಗಳನ್ನು ತಮಿಳುನಾಡು (ಚೆನ್ನೈ), ಪಶ್ಚಿಮ ಬಂಗಾಳ (ಕೋಲ್ಕತ್ತಾ) ಮತ್ತು ಅಸ್ಸಾಂ (ಗುವಾಹಟಿ) ಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಬಿಸಿಸಿಐ, ಚುನಾವಣಾ ಆಯೋಗದಿಂದ ಚುನಾವಣಾ ದಿನಾಂಕಗಳ ಪ್ರಕಟಣೆಗಾಗಿ ಕಾಯುತ್ತಿದೆ. ಅದಕ್ಕಾಗಿಯೇ 2026 ರ ಐಪಿಎಲ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿಲ್ಲ. ಇದರ ಜೊತೆಗೆ ಎರಡು ಹಂತಗಳಲ್ಲಿ ಬಿಸಿಸಿಐ, ಐಪಿಎಲ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.

IPL 2026: 2 ಹಂತಗಳಲ್ಲಿ ಐಪಿಎಲ್ ವೇಳಾಪಟ್ಟಿ ಪ್ರಕಟಿಸಲು ಬಿಸಿಸಿಐ ಚಿಂತನೆ

ಮೊದಲ ಪಂದ್ಯ ಎಲ್ಲಿ ನಡೆಯಲಿದೆ?

ಇದಲ್ಲದೆ, ಪಂದ್ಯಾವಳಿಯ ಮೊದಲ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಕೂಡ ಕುತೂಹಲ ಮೂಡಿಸಿದೆ. ಸಾಂಪ್ರದಾಯಿಕವಾಗಿ, ಹಿಂದಿನ ಆವೃತ್ತಿಯ ಚಾಂಪಿಯನ್ ತಂಡವು ಮೊದಲ ಪಂದ್ಯವನ್ನು ಆಡಲಿದ್ದು, ಆ ಪಂದ್ಯ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ಆಡಲಾಗುತ್ತದೆ. ಆದಾಗ್ಯೂ, ಕಳೆದ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಮರಳುವ ಬಗ್ಗೆ ಪರಿಸ್ಥಿತಿ ಸ್ಪಷ್ಟವಾಗಿಲ್ಲ. ಕಳೆದ ವರ್ಷ, ಆರ್‌ಸಿಬಿ ಗೆಲುವಿನ ನಂತರದ ಆಚರಣೆಯ ಸಮಯದಲ್ಲಿ, ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿ 13 ಮಂದಿ ಅಮಾಯಕರು ಪ್ರಾಣಬಿಟ್ಟಿದ್ದರು. ಪರಿಣಾಮವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *