
ಬೆಂಗಳೂರು, ಮಾರ್ಚ್ 6: ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕರ್ನಾಟಕ ಸರ್ಕಾರವು 2026ರ ಬಜೆಟ್ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದೆ. ಕಚೇರಿಗಳಲ್ಲಿ 72 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಜಿಟಲ್ ಇ ಸ್ಟಾಂಪಿಂಗ್ ಘಟಕಗಳನ್ನು ಸ್ಥಾಪಿಸಲಾಗುವುದು. 50 ಲಕ್ಷಕ್ಕೂ ಹೆಚ್ಚು ಇರುವ ಟಿಪ್ಪಣಿಗಳು ಮತ್ತು ಒಂದು ಕೋಟಿಗೂ ಹೆಚ್ಚು ಅಟ್ಲಾಸ್ಗಳನ್ನು ಜಿಐಎಸ್ ತಂತ್ರಾಂಶದ ಮೂಲಕ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾವೇರಿ ತಂತ್ರಾಂಶದಲ್ಲಿನ ತೊಡಕುಗಳನ್ನು ನಿವಾರಿಸಿ, ನೊಂದಣಿ ವ್ಯವಸ್ಥೆಯನ್ನು ಇನ್ನಷ್ಟು ಸುಗಮಗೊಳಿಸಲು 65 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ಇದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಕಾಗದರಹಿತ ನೊಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಉಪನೊಂದಣಾಧಿಕಾರಿಗಳ ಕಚೇರಿಗಳಿಗೆ ಜನರ ಓಡಾಟವನ್ನು ಕಡಿಮೆ ಮಾಡಲು ‘ನೊಂದಣಿ ಕಾಯ್ದೆ 2025’ಕ್ಕೆ ತಿದ್ದುಪಡಿ ತರಲಾಗಿದ್ದು, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ರಿಮೋಟ್ ನೊಂದಣಿ ಅನುಮತಿಸಲಾಗಿದೆ. ರೇರಾ ಅನುಮೋದಿತ ಯೋಜನೆಗಳ ಖಾಸಗಿ ಸಂಸ್ಥೆಗಳ ರಿಮೋಟ್ ನೊಂದಣಿಗೆ ಕಾಯ್ದೆ ತಿದ್ದುಪಡಿ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗಿದೆ. ಡಿಜಿಟಲ್ ಇ-ಸ್ಟ್ಯಾಂಪಿಂಗ್ ಮತ್ತು ಸಂಪೂರ್ಣ ಕಾಗದರಹಿತ ನೊಂದಣಿಗಾಗಿ ನವೀನ ಪ್ಲಾಟ್ಫಾರ್ಮ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ನೊಂದಣಿ ಇಲಾಖೆಯಲ್ಲಿ 2003ಕ್ಕೂ ಹಿಂದಿನ ಲೆಗಸಿ ದಾಖಲೆಗಳನ್ನು ಸಂರಕ್ಷಿಸಲು 207 ಉಪನೊಂದಣಿ ಕಚೇರಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ನಾಗರಿಕರಿಗೆ ಉತ್ತಮ ಅನುಭವ ನೀಡಲು ಪ್ರತಿ ಜಿಲ್ಲೆಯಲ್ಲಿ ಒಂದು ಕಚೇರಿಯನ್ನು ನೊಂದಣಿ ಖಾತರಿ ಕೇಂದ್ರವನ್ನಾಗಿ ನವೀಕರಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ