10 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿ: ಗ್ರಾ.ಪಂ. ಮಾಜಿ ಸದಸ್ಯೆ ದಾರುಣ ಸಾವು

10 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿ:  ಗ್ರಾ.ಪಂ. ಮಾಜಿ ಸದಸ್ಯೆ ದಾರುಣ ಸಾವು

ಮಡಿಕೇರಿ, ಮಾರ್ಚ್​​ 09: ಕಾಫಿನಾಡು ಚಿಕ್ಕಮಗಳೂರಿನ ಹಲವೆಡೆ ಕಾಡಾನೆಗಳ ಗ್ಯಾಂಗ್​​ ಜನವಸತಿ ಪ್ರದೇಶಗಲಿಗೆ ನುಗ್ಗಿ ಭಯಬೀಳಿಸುತ್ತಿದ್ದರೆ ಇತ್ತ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆ ಜಲಜಾಕ್ಷಿ(53) ಮೃತ ದುರ್ದೈವಿ. ನಡೆದುಕೊಂಡು ಹೋಗುತ್ತಿದ್ದ ಜಲಜಾಕ್ಷಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡು ಮಹಿಳೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಎಸಿಎಫ್ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ದಾರುಣವಾಗಿ ಬಲಿಯಾಗಿದ್ದಳು. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದ ಕೆಲವೇ ಸೆಕೆಂಡುಗಳಲ್ಲಿ ಕತ್ತಲಿನಲ್ಲಿ ಹಿಂಬದಿಯಿಂದ ಬಂದ ಆನೆ ಭೀಕರ ದಾಳಿ ನಡೆಸಿತ್ತು. ಈ ವೇಳೆ ಆಕೆಯ ಕಿರುಚಾಟ ಕೇಳಿ ತಾಯಿ ಬೊಬ್ಬೆಹೊಡೆದರೂ ಸಲಗದ ಕಾಲಡಿ ಸಿಲುಕಿದ್ದ ಪೂಜ್ಯ ಪ್ರಾಣ ಬಿಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಸಾವು ನಡೆದಿರುವ ಕಾರಣ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ, ಭುಗಿಲೆದ್ದ ಆಕ್ರೋಶ

ಇತ್ತೀಚಿನ ದಿನಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿದ್ದು, ರಾಜ್ಯದ ಹಲವೆಡೆ ಪ್ರಾಣಿ ದಾಳಿಯಿಂದ ನೂರಾರು ಮಂದಿ ಸಾಯುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನಗಳ ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, 32 ಸಾವುಗಳೊಂದಿಗೆ ಕೊಡಗು ಜಿಲ್ಲೆ ಈ ಪಟ್ಟಿಯಲ್ಲಿ ಎರಡನೇಯ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕಾಡು ಪ್ರಾಣಿಗಳ ದಾಳಿಗೆ ಜನರು ಬಲಿಯಾಗ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *