
ನವದೆಹಲಿ, ಮಾರ್ಚ್ 10: ದೇಶದ ಪಠ್ಯಪುಸ್ತಕಗಳನ್ನು ಪ್ರಕಟಿಸುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ( ಎನ್ಸಿಆರ್ಟಿ) ವಿವಾದಿತ ಅಧ್ಯಾಯದ ಬದಲಾಗಿ ಇಡೀ ಪುಸ್ತಕವನ್ನೇ ಹಿಂಪಡೆದಿದೆ. ಈ ಬಾರಿ 8ನೇ ತರಗತಿಯ ಹೊಸ ಸಮಾಜ ವಿಜ್ಞಾನ(Social Science) ಪುಸ್ತಕದ ಒಂದು ಅಧ್ಯಾಯದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸವಾಲುಗಳ ಬಗ್ಗೆ ಬರೆಯಲಾಗಿದೆ. ಅಲ್ಲದೇ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯವನ್ನು ಉಲ್ಲೇಖಿಸಿರುವುದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತ್ತು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗುವಂತಹ ವಿಷಯವನ್ನು ಮಕ್ಕಳಿಗೆ ಈ ರೀತಿಯಲ್ಲಿ ಕಲಿಸುವುದು ಸರಿಯೇ ಎಂಬ ಪ್ರಶ್ನೆಯೂ ಮೂಡಿತ್ತು. ಇದೀಗ ಎನ್ಸಿಆರ್ಟಿ ಕ್ಷಮೆಯಾಚಿಸುವುದರ ಜತೆ ಅಧ್ಯಾಯವಲ್ಲ ಇಡೀ ಪುಸ್ತಕವನ್ನೇ ಹಿಂಪಡೆದಿದೆ. ಪುಸ್ತಕದಲ್ಲಿರುವ ಕೆಲವು ಮಾಹಿತಿಗಳು ದಾರಿತಪ್ಪಿಸುವಂತಿವೆ ಮತ್ತು ನ್ಯಾಯಾಂಗದ ಹೆಸರು ಕೆಡಿಸುವಂತಿವೆ.
ಈ ಹಿನ್ನೆಲೆಯಲ್ಲಿ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಫೆಬ್ರವರಿ 26ರಂದು 8ನೇ ತರಗತಿಯ ಪಠ್ಯಪುಸ್ತಕವನ್ನು ಸುಪ್ರೀಂಕೋರ್ಟ್ರ ಸಂಪೂರ್ಣ ಬ್ಯಾನ್ ಮಾಡಿತ್ತು. ಅದರ ಎಲ್ಲಾ ಪ್ರತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಅದರ ಡಿಜಿಟಲ್ ಆವೃತ್ತಿಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸಿತ್ತು.ಆದೇಶವನ್ನು ಅನುಸರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದ ನ್ಯಾಯಾಲಯ, ಯಾವುದೇ ರೂಪದಲ್ಲಿ ತನ್ನ ನಿರ್ದೇಶನಗಳನ್ನು ಧಿಕ್ಕರಿಸಿದರೆ ಗಂಭೀರ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿತ್ತು.
ಮತ್ತಷ್ಟು ಓದಿ: ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಇದನ್ನು ಇಲ್ಲಿಗೆ ಬಿಡುವುದಿಲ್ಲ, ಎನ್ಸಿಇಆರ್ಟಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಎನ್ಸಿಇಆರ್ಟಿ ನಿರ್ದೇಶಕರು ಮತ್ತು ಶಾಲಾ ಶಿಕ್ಷಣ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಅಧ್ಯಾಯ ಸೇರ್ಪಡೆಗೆ ಕಾರಣರಾದವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂಬುದರ ಬಗ್ಗೆ ವಿವರಿಸುವಂತೆ ಕೇಳಿತ್ತು.
ಸಾಂಸ್ಥಿಕ ಅಧಿಕಾರವನ್ನು ಹಾಳುಮಾಡಲು ಮತ್ತು ನ್ಯಾಯಾಂಗದ ಘನತೆಗೆ ಚ್ಯುತಿ ತರಲು ಮಾಡಿದ ಪ್ರಯತ್ನದಂತೆ ತೋರುತ್ತಿದೆ. ಇದನ್ನು ತಡೆಯದೆ ಹೋದರೆ, ಸಾರ್ವಜನಿಕರು ಹಾಗೂ ಯುವ ಜನತೆಯ ಮನಸ್ಸಿನಲ್ಲಿ ನ್ಯಾಯಾಂಗ ಕಚೇರಿಯ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತದೆ ಎಂದು ಮುಖ್ಯ ನ್ಯಾಯಮರ್ತಿಗಳು ಅಭಿಪ್ರಾಯಪಟ್ಟಿದ್ದರು. ಮುಂಬರುವ ಶೈಕ್ಷಣಿಕ ಅವಧಿಗೆ ನವೀಕರಿಸಿದ ಪಠ್ಯಕ್ರಮ ಯೋಜನೆಗಳ ಕುರಿತು ಮಂಡಳಿಯಿಂದ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಇನ್ನೂ ಕಾಯಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ