ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್ ಪ್ರಸ್ತುತ ಎಲ್ಲರ ಮನೆ ಮಾತಾಗಿದ್ದಾರೆ. ತಮ್ಮ ಅದ್ಭುತ ಬ್ಯಾಟಿಂಗ್ನಿಂದ ಟೀಂ ಇಂಡಿಯಾವನ್ನು ವಿಶ್ವ ಚಾಂಪಿಯನ್ ಮಾಡಿದ ಸಂಜುಗೆ ಸರಣಿಯ ಆಟಗಾರ ಪ್ರಶಸ್ತಿಯೂ ಲಭಿಸಿತು. ಇದರ ಜೊತೆಗೆ ಇದೀಗ ಸಂಜು ಸ್ಯಾಮ್ಸನ್ಗೆ ಭಾರತ ಟಿ20 ತಂಡದ ನಾಯಕರಾತ್ವವನ್ನು ನೀಡಬೇಕೆಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಮೊಹಮ್ಮದ್ ಕೈಫ್, ‘ಸೂರ್ಯಕುಮಾರ್ ಯಾದವ್ ನಾಯಕತ್ವ ತ್ಯಜಿಸಿದರೆ, ತಂಡವನ್ನು ಮುನ್ನಡೆಸಲು ಸಂಜು ಸ್ಯಾಮ್ಸನ್ ಉತ್ತಮ ಆಯ್ಕೆ. ಏಕೆಂದರೆ ಸಂಜು ಬಳಿ ನಾಯಕತ್ವದ ಗುಣಗಳಿವೆ ಎಂದಿದ್ದಾರೆ.
ತಂಡದ ಪ್ರತಿಯೊಬ್ಬ ಆಟಗಾರನ ಮೌಲ್ಯವನ್ನು ಗುರುತಿಸುವ ಮತ್ತು ಫಾರ್ಮ್ನಲ್ಲಿಲ್ಲದ ಆಟಗಾರರನ್ನು ಸಹ ಪ್ರೋತ್ಸಾಹಿಸುವ ನಾಯಕತ್ವವನ್ನು ನಾಯಕ ಹೊಂದಿರಬೇಕು. ವೈಫಲ್ಯವು ಆಟದ ಒಂದು ಭಾಗ ಎಂದು ನಾಯಕ ಅರ್ಥಮಾಡಿಕೊಂಡರೆ ತಂಡಕ್ಕೆ ಲಾಭವಾಗುತ್ತದೆ ಎಂದು ಕೈಫ್ ಹೇಳಿದರು.
ಸೂರ್ಯ ನಾಯಕತ್ವ ತ್ಯಜಿಸಿದರೆ, ಸಂಜು ಉತ್ತಮ ಆಯ್ಕೆ. ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿದ ಅನುಭವವನ್ನೂ ಹೊಂದಿದ್ದಾರೆ. ಅವರು ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದಾರೆ. ಅವರ ಫಾರ್ಮ್ ಉತ್ತಮವಾಗಿದ್ದರೆ ಮತ್ತು ಅವರು ತಮ್ಮ ಫಿಟ್ನೆಸ್ ಅನ್ನು ಉಳಿಸಿಕೊಂಡರೆ, ಅವರು ಖಂಡಿತವಾಗಿಯೂ ನಾಯಕತ್ವ ವಹಿಸಬಹುದು ಎಂದಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರಿಗೆ ಪ್ರಸ್ತುತ 35 ವರ್ಷ. 2028 ರ ಟಿ20 ವಿಶ್ವಕಪ್ ವೇಳೆಗೆ ಅವರಿಗೆ 37 ವರ್ಷ ವಯಸ್ಸಾಗಿರುತ್ತದೆ. ಅವರು 37 ನೇ ವಯಸ್ಸಿನಲ್ಲಿ ತಂಡವನ್ನು ಮುನ್ನಡೆಸುವುದು ಸ್ವಲ್ಪ ಅಸಂಭವ. ಆದಾಗ್ಯೂ, ಇದು ಅವರ ವಯಸ್ಸಿಗಿಂತ ಅವರ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ. ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ, ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆಯಾದರೂ ಆಟಗಾರನಾಗಿ ಸೂಯಘ ಅವರ ಪ್ರದರ್ಶನ ಸಾಧಾರಣವಾಗಿತ್ತು.
ಇಡೀ ಟೂರ್ನಮೆಂಟ್ನಲ್ಲಿ ಯುಎಸ್ಎ ವಿರುದ್ಧ ಮಾತ್ರ ಅರ್ಧಶತಕದ ಇನ್ನಿಂಗ್ಸ್ ಆಡಿದ ಸೂರ್ಯ ಉಳಿದಂತೆ ಸೆಮಿಫೈನಲ್ ಮತ್ತು ಫೈನಲ್ನಲ್ಲಿಯೂ ವಿಫಲರಾದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಅವರು ಗೋಲ್ಡನ್ ಡಕ್ಗೆ ಔಟಾದರು. ಒಟ್ಟಾರೆ ಈ ಟಿ20 ವಿಶ್ವಕಪ್ನಲ್ಲಿ ಸೂರ್ಯ 30.25 ಸರಾಸರಿಯಲ್ಲಿ ಕೇವಲ 242 ರನ್ ಗಳಿಸಿದ್ದು, ಅವರ ಫಾರ್ಮ್ ಉತ್ತಮವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.





