
ತುಮಕೂರು, (ಮಾರ್ಚ್ 11): ನಗರದ ಇಸ್ರಾ ಶಾದಿ ಮಹಲ್ ಬಳಿ ನಡೆದಿದ್ದ ನಜರಾಬಾದ್ ಮುಬಾರಕ್ ಕೊಲೆ ಇಡೀ ತುಮಕೂರನ್ನೇ (Tumakuru) ಬೆಚ್ಚಿ ಬೀಳಿಸಿದ್ದು, ಇದೀಗ ಈ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮರಳೂರು ದಿಣ್ಣೆಯ ಮುಬಾರಕ್ ಎನ್ನುವಾತ ಮಾತನಾಡುವ ನೆಪದಲ್ಲಿ ನಜರಾಬಾದ್ ಮುಬಾರಕ್ ನನ್ನು ಕರೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನು ಘಟನೆ ನಡೆದ 24 ಗಂಟೆಯೊಳಗೆ ಹಂತಕ ಮರಳೂರು ದಿಣ್ಣೆಯ ಮುಬಾರಕ್ ನನ್ನು ಬಂಧಿಸುವಲ್ಲಿ ಪೊಲೀಸರು ಸಹ ಯಶಸ್ವಿಯಾಗಿದ್ದು, ವಾಮಾಚಾರಕ್ಕೆ ಹೆದರಿ ಗೆಳೆಯನನ್ನೇ ಕೊಂದಿದ್ದಾನೆ ಎನ್ನುವುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆದ್ರೆ, ಮೃತನ ಕುಟುಂಬಸ್ಥರು , ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.
ಹೌದು.. ಆರಂಭದಲ್ಲಿ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿತ್ತು. ಕೊಲೆಯಾದ ನಜರಾಬಾದ್ ಮುಬಾರಕ್, ಮರಳೂರು ದಿಣ್ಣೆಯ ಮುಬಾರಕ್ ಬಳಿ ಹಣ ಪಡೆದಿದ್ದ. ವಾಪಾಸ್ ನೀಡದಕ್ಕೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿತ್ತು. ಆದ್ರೆ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ತಿಲಕ್ ಪಾರ್ಕ್ ಪೊಲೀಸರು, ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ ವಾಮಾಚಾರದ ಕಥೆ ಬಿಚ್ಚಿಟ್ಟಿದ್ದಾನೆ.
ಇದನ್ನೂ ಓದಿ: 3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ: ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ
ವಿಚಾರಣೆಯಲ್ಲಿ ಹಂತಕ ಹೇಳಿದ್ದೆನು?
ಮರಳೂರು ದಿಣ್ಣೆ ಮುಬಾರಕ್ ತಂದೆ ತಾಯಿ ನಡುವೆ ಕಳೆದ ಕೆಲ ವರ್ಷಗಳ ಹಿಂದೆ ಗಲಾಟೆಯಾಗಿತ್ತಂತೆ. ಈ ವೇಳೆ ತಂದೆ ತಾಯಿಯನ್ನು ಕೊಂದು ಜೈಲಿಗೆ ಹೋಗಿದ್ದ. ಇದರಿಂದ ಬೇಸರದಲ್ಲಿದ್ದ ಮರಳೂರು ದಿಣ್ಣೆ ಮುಬಾರಕ್ ನಿಗೆ ನಜರಾಬಾದ್ ನ ಮುಬಾರಕ್ ಸಾಂತ್ವಾನ ಹೇಳಿದ್ದ. ಆ ನಂತರ ಕಷ್ಟಗಳೆಲ್ಲ ದೂರವಾಗುತ್ತೆ ಎಂದು ಮರಳೂರು ದಿಣ್ಣೆ ಮುಬಾರಕ್ ನನ್ನು ದರ್ಗಾಗೆ ಕರೆದೊಯ್ದು ನಿಂಬೆಹಣ್ಣು ನೀಡಿ ಜ್ಯೂಸ್ ಮಾಡಿ ಕುಡಿಯುವಂತೆ ಹೇಳಿದ್ದನಂತೆ. ಅದಾದ ಬಳಿಕ ಒಂದೆರೆಡು ಬಾರಿ ಇದೇ ರೀತಿ ಕೆಲ ಪ್ರಕ್ರಿಯೆ ಮಾಡಿಸಿದ್ದ, ಇದರಿಂದ ಮರಳೂರು ದಿಣ್ಣೆ ಮಾನಸಿಕವಾಗಿದ್ದ. ಅಲ್ಲದೇ ಭೂತದ ಅನುಭವ ಆಗುತಿತ್ತಂತೆ. ರಾತ್ರಿ ನಿದ್ದೆ ಮಾಡುವಾಗ ದೆವ್ವ ಬಂದಂತಾಗುತಿತ್ತಂತೆ. ಇದರಿಂದ ಅನುಮಾನಗೊಂಡು ಮರಳೂರು ದಿಣ್ಣೆ ಮುಬಾರಕ್, ನನಗೆ ವಾಮಾಚಾರ ಮಾಡಿಸಿದ್ದಿಯಾ. ಸರಿ ಮಾಡು ಎಂದು ನಜರಾಬಾದ್ ಮುಬಾರಕ್ ಗೆ ಹೇಳಿದ್ದ.
ಆದ್ರೆ, ಇದಕ್ಕೆ ನಜರಾಬಾದ್ ಮುಬಾರಕ್ ಕ್ಯಾರೇ ಎಂದಿಲ್ಲ. ಇದರಿಂದ ಆಕ್ರೋಶಗೊಂಡ ಮರಳೂರು ದಿಣ್ಣೆ ಮುಬಾರಕ್, ನಜರಾಬಾದ್ ಮುಬಾರಕ್ ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಆದ್ರೆ, ಇದನ್ನು ಮೃತ ನಜರಾಬಾದ್ ನ ಮುಬಾರಕ್ ಕುಟುಂಬ ಅಲ್ಲಗೆಳೆದಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಹೀಗಾಗಿ ಗೊಂದಲ ಸೃಷ್ಟಿಯಾಗಿದ್ದು, ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಆತ ಹೇಳುತ್ತಿರುವ ಸಂಗತಿ ನಿಜವೋ ಅಥವಾ ಮೃತನ ಕುಟುಂಬಸ್ಥರು ಹೇಳುವುದು ಸರಿಯೋ ಎನ್ನುವುದು ತನಿಖೆಯಲ್ಲ ಕೊಲೆಯ ಅಸಲಿ ಕಾರಣ ತಿಳಿದು ಬರಲಿದೆ.