
ಬೆಂಗಳೂರು, ಮಾರ್ಚ್ 13: ಇತ್ತೀಚೆಗೆ ಸೈಬರ್ ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಸದನದಲ್ಲಿಯೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಏನೋ ತಿಳಿಸಿದ್ದಾರೆ. 2023ರಲ್ಲಿ ರಾಜ್ಯದಲ್ಲಿದ್ದ 22,225 ಪ್ರಕರಣಗಳ ಸಂಖ್ಯೆ 2025ರ ವೇಳೆಗೆ 14,899ಕ್ಕೆ ಇಳಿಕೆಯಾಗಿವೆ. ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ ಫಲಕೊಟ್ಟಿರೋದಾಗಿ ಹೇಳಿದ್ದಾರೆ. ಆದ್ರೆ ಖದೀಮರು ಮಾತ್ರ ಜನರಿಗೆ ವಂಚನೆ ಮಾಡಲು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ. ಖಾಕಿ ಚಾಪೆ ಕೆಳಗೆ ತೂರಿದರೆ ಇವರು ರಂಗೋಲಿ ಕೆಳಗೇ ತೂರುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಿದೆ ಬೆಂಗಳೂರಲ್ಲಿ ನಡೆದಿರುವ ಈ ಘಟನೆ.
ಸೈಬರ್ ಖದೀಮರ ಆಟ ಈಗ ನೆಕ್ಸ್ಟ್ ಲೆವೆಲ್ಗೆ ಹೋಗಿದೆ. ಇಷ್ಟು ದಿನ ಬೇರೆ ರಾಜ್ಯದ ಪೊಲೀಸರ ಹೆಸರಲ್ಲಿ ಹೆದರಿಸ್ತಿದ್ದವರು,ಈಗ ಲೋಕಲ್ ಪೊಲೀಸರ ಹೆಸರನ್ನೇ ಬಳಸುತ್ತಿದ್ದಾರೆ. ಬೆಂಗಳೂರಿನ ಮಹಿಳೆಯೊಬ್ಬರಿಗೆ ಬಂದ ಒಂದು ಕರೆ ಚಾಲಾಕಿಗಳ ನಾಟಕ ಬಟಾಬಯಲು ಮಾಡಿದೆ. ಹೌದು, ನಯನಾ ಪ್ರಕಾಶ್ ಎಂಬುವರ ಹೆಸರಲ್ಲಿ ದಾಖಲೆ ಸೃಷ್ಟಿಸಿದ್ದ ಕಿಲಾಡಿಗಳು ಮಹಿಳೆಗೆ ಕರೆ ಮಾಡಿದ್ದಾರೆ. ಮೊದಲು ಆಡಿಯೋ ಕಾಲ್ ಮಾಡಿ, ನಿಮ್ಮ ತಾಯಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೆದರಿಸಿದ್ದಾರೆ. ನಂತರ ಕರೆಯನ್ನ ವಿಡಿಯೋ ಕಾಲ್ಗೆ ಕನ್ವರ್ಟ್ ಮಾಡಿ ತನಿಖೆ ಮಾಡಬೇಕು ಅಂತಾ ದಬಾಯಿಸಿದ್ದಾರೆ. ಈ ಖದೀಮರ ಧೈರ್ಯ ಎಷ್ಟಿದೆ ಅಂದ್ರೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನಕಲಿ ಸೀಲ್ ಮತ್ತು ಸಹಿಯನ್ನೇ ಬಳಸಿದ್ದಾರೆ. ಸಾಲದ್ದಕ್ಕೆ ಕರ್ನಾಟಕ ಸಿಐಡಿ ಹೆಸರಲ್ಲಿ ಅರೆಸ್ಟ್ ವಾರಂಟ್ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ಆದೇಶ ಅಂತಾ ನಕಲಿ ದಾಖಲೆ ಕಳಿಸಿ, ನಿಮ್ಮ ಮನೆ ಲೊಕೇಶನ್ ಕಳಿಸಿ ನಾವು ಬರ್ತೀವಿ ಅಂತಾ ಮಹಿಳೆಯನ್ನ ಟೆನ್ಶನ್ ಗೆ ತಳ್ಳಿದ್ದಾರೆ.
ಇದನ್ನೂ ಓದಿ: ನಿಮ್ಮ ಫೋನ್ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಇದರಿಂದ ಏನು ಪ್ರಯೋಜನ?
ಆದರೆ ದಾಖಲೆಗಳನ್ನ ನೋಡಿ ಅನುಮಾನಗೊಂಡ ಮಹಿಳೆ ಅಂಜದೆ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಅಧಿಕೃತ ಮೇಲ್ ಐಡಿಗೆ ದೂರು ನೀಡಿದ್ದಾರೆ. ಜೊತೆಗೆ ಸೈಬರ್ ಕ್ರೈಂ ಪೋರ್ಟಲ್ನಲ್ಲೂ ಕಂಪ್ಲೇಂಟ್ ರಿಜಿಸ್ಟರ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ರಾಜಾ ಇಮಾಮ್ ಖಾಸಿಂ, ಪೊಲೀಸರು ಯಾವತ್ತೂ ಡಿಜಿಟಲ್ ಅರೆಸ್ಟ್ ಮಾಡಲ್ಲ. ವಿಡಿಯೋ ಕಾಲ್ ಮೂಲಕ ತನಿಖೆ ನಡೆಸಿ ಹಣ ಕೇಳಲ್ಲ. ಇಂತಹ ನಕಲಿ ಆದೇಶ ಪತ್ರಗಳಿಗೆ ಸಾರ್ವಜನಿಕರು ಮರುಳಾಗಬಾರದು. ಅನುಮಾನ ಬಂದರೆ ಕೂಡಲೇ 1930 ಗೆ ಕರೆ ಮಾಡಿ ದೂರು ಕೊಡಿ ಎಂದಿದ್ದಾರೆ. ಒಟ್ಟಿನಲ್ಲಿ ಇಂತಹ ಜಾಲಕ್ಕೆ ಬೆದರಿ ಅನೇಕ ಮಂದಿ ಈಗಾಗಲೇ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ನಡುವೆ ಪೊಲೀಸರ ಹೆಸರಲ್ಲೇ ವಂಚನೆ ಮಾಡೋಕೆ ಹೊರಟಿರುವ ಸೈಬರ್ ಖದೀಮರ ಬಗ್ಗೆ ಸಾರ್ವಜನಿಕರು ಇನ್ನಷ್ಟು ಜಾಗ್ರತೆ ವಹಿಸಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.