
ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರಕ್ಕೂ ತನ್ನದೇ ಆದ ವಿಶೇಷ ಮಹತ್ವವಿದೆ. ಅದರಲ್ಲೂ ವಿಶೇಷವಾಗಿ ‘ಶನಿವಾರ’ವು ಶನಿ ದೇವನಿಗೆ ಅರ್ಪಿತವಾದ ದಿನ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ಅನುಸರಿಸುವ ಕೆಲವು ಆಚರಣೆಗಳು ನಮ್ಮ ಜೀವನದ ಅದೃಷ್ಟ ಮತ್ತು ದುರದೃಷ್ಟದ ಮೇಲೆ ನೇರ ಪರಿಣಾಮ ಬೀರುತ್ತವೆ. ಹಾಗಾದರೆ, ಈ ದಿನ ಯಾವ ಕೆಲಸಗಳನ್ನು ಮಾಡಬೇಕು? ಯಾವುದನ್ನು ತಪ್ಪಿಸಬೇಕು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಶನಿವಾರ ಈ ಕೆಲಸಗಳನ್ನು ತಪ್ಪಿಸಿ:
ಜ್ಯೋತಿಷ್ಯದ ಪ್ರಕಾರ ಶನಿ ಮತ್ತು ಮಂಗಳ ಗ್ರಹಗಳ ನಡುವೆ ವೈರತ್ವವಿದೆ. ಹೀಗಾಗಿ, ಶನಿವಾರದಂದು ಮಂಗಳನಿಗೆ ಸಂಬಂಧಿಸಿದ ವಸ್ತುಗಳನ್ನು ಅಥವಾ ಆಹಾರವನ್ನು ಸೇವಿಸುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೇ ಮಸಾಲೆಯುಕ್ತ ಪದಾರ್ಥಗಳು, ಒಣ ಮೆಣಸಿನಕಾಯಿ, ಉಪ್ಪಿನಕಾಯಿ ಮತ್ತು ತೊಗರಿಬೇಳೆ ಸೇವಿಸುವುದನ್ನು ಈ ದಿನ ಆದಷ್ಟು ತಪ್ಪಿಸಿ. ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯಂತೆ, ಶನಿವಾರದಂದು ಹೊಸ ಬಟ್ಟೆಗಳನ್ನು ಖರೀದಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
ಅದೃಷ್ಟ ತರುವ ಸರಳ ಆಚರಣೆಗಳು:
ನಿಮ್ಮ ಇಷ್ಟಾರ್ಥಗಳು ಈಡೇರಲು ಮತ್ತು ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಿಸಲು ಈ ಕ್ರಮಗಳನ್ನು ಅನುಸರಿಸಿ. ಶನಿವಾರದಂದು ರವಿ ವೃಕ್ಷಕ್ಕೆ (ಅರಳಿ ಮರ) ಹೋಗಿ ಐದು ಪ್ರದಕ್ಷಿಣೆ ಹಾಕಿ, ಹಳದಿ ದಾರವನ್ನು ಕಟ್ಟುವುದು ವಿಶೇಷ ಫಲ ನೀಡುತ್ತದೆ. ಅಲ್ಲದೆ, ಸಕ್ಕರೆ ಬೆರೆಸಿದ ನೀರನ್ನು ಮರದ ಬುಡಕ್ಕೆ ಸುರಿಯುವುದರಿಂದ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ. ಇದಲ್ಲದೇ ಹಸು, ಮೀನು, ಇರುವೆ ಮತ್ತು ಮಂಗಗಳಿಗೆ ಬೆಲ್ಲ ಮಿಶ್ರಿತ ಆಹಾರವನ್ನು ನೀಡುವುದು ದುರದೃಷ್ಟವನ್ನು ದೂರವಾಗಿಸಿ, ಶುಭವನ್ನು ತರುತ್ತದೆ ಎಂದು ನಂಬಲಾಗಿದೆ.
ಉದ್ಯೋಗ ಸಮಸ್ಯೆಗಳಿಗೆ ಪರಿಹಾರ:
ಉದ್ಯೋಗದಲ್ಲಿ ತೊಂದರೆ ಎದುರಿಸುತ್ತಿರುವವರು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವನಿಗೆ ಬಿಲ್ವಪತ್ರೆ ಅರ್ಪಿಸಿ. ಅಲ್ಲದೆ, ತಿಂಗಳಿಗೊಮ್ಮೆ ಒಂದೂವರೆ ಕೆಜಿ ಅಕ್ಕಿಯನ್ನು ದಾನ ಮಾಡುವುದು ಆರ್ಥಿಕ ಸುಸ್ಥಿರತೆಗೆ ಸಹಕಾರಿ.
ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!
ಶುಭ ಫಲಕ್ಕಾಗಿ ವಿಶೇಷ ಕ್ರಮಗಳು:
- ಉಡುಗೆ-ತೊಡುಗೆ: ಶನಿವಾರದಂದು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶನಿ ದೇವನಿಗೆ ಪ್ರಿಯವಾದದ್ದು. ಇಂದು ಕರ್ಪೂರದಿಂದ ವೆಂಕಟೇಶ್ವರ ಸ್ವಾಮಿಗೆ ಆರತಿ ಬೆಳಗುವುದು ಶ್ರೇಯಸ್ಕರ.
- ಕರ್ಪೂರದ ಪರಿಹಾರ: ಒಂದು ಲೋಟ ನೀರಿನಲ್ಲಿ ಸ್ವಲ್ಪ ಕರ್ಪೂರ ಬೆರೆಸಿ ದೇವರ ಕೋಣೆಯಲ್ಲಿ ಇಡಿ. ಭಾನುವಾರ ಬೆಳಿಗ್ಗೆ ಸ್ನಾನ ಮಾಡಿದ ನಂತರ, ಆ ನೀರನ್ನು ಯಾವುದೇ ಗಿಡದ ಬುಡಕ್ಕೆ ಸುರಿಯಿರಿ. ಇದು ದುರದೃಷ್ಟವನ್ನು ಕಳೆದು ಅದೃಷ್ಟವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ