ಯಾದಗಿರಿ: ಗಲ್ಫ್​ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಹಿನ್ನಲೆ ಅಕ್ಕಿ ರಫ್ತುಗೂ ಬಿತ್ತು ಬ್ರೇಕ್​​: ಉದ್ಯಮಿಗಳು ಕಂಗಾಲು

ಯಾದಗಿರಿ: ಗಲ್ಫ್​ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಹಿನ್ನಲೆ ಅಕ್ಕಿ ರಫ್ತುಗೂ ಬಿತ್ತು ಬ್ರೇಕ್​​: ಉದ್ಯಮಿಗಳು ಕಂಗಾಲು

ಯಾದಗಿರಿ, ಮಾರ್ಚ್​​ 14: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಗಲ್ಫ್​ ರಾಷ್ಟ್ರಗಳ ಮೇಲಷ್ಟೇ ಅಲ್ಲ, ಯಾದಗಿರಿ (Yadagiri) ಜಿಲ್ಲೆಯ ವ್ಯಾಪಾರ ವಹಿವಾಟಿನ ಮೇಲೂ ಬೀರಲು ಆರಂಭಿಸಿದೆ. ಮೊಟ್ಟೆ ಉದ್ಯಮ, ಅಕ್ಕಿ ರಫ್ತು ಹಾಗೂ ಹೋಟೆಲ್ ಉದ್ಯಮಕ್ಕೂ ಯುದ್ಧದ ಎಫೆಕ್ಟ್ ತಟ್ಟಿದ್ದು, ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೊಟ್ಟೆ ದರ ಕುಸಿತ

ಯಾದಗಿರಿ ಜಿಲ್ಲೆಯಿಂದ ಗಲ್ಫ್​​ ರಾಷ್ಟ್ರಗಳಿಗೆ ಲಕ್ಷಾಂತರ ಮೊಟ್ಟೆಗಳನ್ನು ರಫ್ತು ಮಾಡಲಾಗುತ್ತಿತ್ತು. ಕತಾರ್, ಕುವೈತ್, ಸೌದಿ ಅರೇಬಿಯಾ ಹಾಗೂ ದುಬೈ ಸೇರಿದಂತೆ ಹಲವು ದೇಶಗಳಿಗೆ ವ್ಯಾಪಾರಸ್ಥರು ಕೋಳಿ ಫಾರ್ಮ್‌ಗಳಿಂದ ಮೊಟ್ಟೆ ಖರೀದಿಸಿ ವಿದೇಶಕ್ಕೆ ಕಳುಹಿಸುತ್ತಿದ್ದರು. ಆದರೆ ಯುದ್ಧದ ಪರಿಣಾಮ ರಫ್ತು ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಮೊಟ್ಟೆ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ. ಮೊದಲು 6 ರೂಪಾಯಿಗೆ ಒಂದು ಮಾರಾಟವಾಗುತ್ತಿದ್ದ ಮೊಟ್ಟೆ ಈಗ ಕೇವಲ 4 ರೂಪಾಯಿಗೆ ಮಾರಾಟವಾಗುತ್ತಿದೆ. ಹೀಗಾಗಿ ವ್ಯಾಪಾರಸ್ಥರು ಸ್ಥಳೀಯ ಮಾರುಕಟ್ಟೆಯಲ್ಲೇ ಕಡಿಮೆ ದರಕ್ಕೆ ಮೊಟ್ಟೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ; ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ಮಣ್ಣುಪಾಲು!

ಇನ್ನೊಂದೆಡೆ ಯುದ್ಧದ ಪರಿಣಾಮ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಕೂಡ ಎದುರಾಗಿದೆ. ಯಾದಗಿರಿ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಗುರುಮೂರ್ತಿ ಖಾನಾವಳಿ ಸಿಲಿಂಡರ್ ಸಿಗದೆ ಬಂದ್ ಆಗಿದೆ. ಕಳೆದ ಎರಡು ದಿನಗಳಿಂದ ಖಾನಾವಳಿಯ ಶೆಟರ್ ಹಾಕಿದ್ದು, ದಿನಕ್ಕೆ ಸುಮಾರು 300ಕ್ಕೂ ಹೆಚ್ಚು ಜನ ಊಟ ಮಾಡುತ್ತಿದ್ದ ಹೋಟೆಲ್ ಈಗ ಸ್ಥಗಿತಗೊಂಡಿದೆ. ದುಪ್ಪಟ್ಟು ಹಣ ಕೊಡ್ತೀವಿ ಅಂದ್ರೂ ಸಿಲಿಂಡರ್ ಸಿಗ್ತಿಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ. ಇದರ ಪರಿಣಾಮ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ನೀಡುವುದೂ ಕಷ್ಟವಾಗಿದೆ ಎನ್ನುತ್ತಿದ್ದಾರೆ.

ಅಕ್ಕಿ ರಫ್ತುಗೂ ಬಿತ್ತು ಬ್ರೇಕ್

ಇನ್ನೊಂದು ಕಡೆ ಯುದ್ಧದ ಪರಿಣಾಮ ಯಾದಗಿರಿಯ ಅಕ್ಕಿ ಉದ್ಯಮಕ್ಕೂ ತಟ್ಟಿದೆ. ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಸೋನಾ ಮಸೂರಿ ಅಕ್ಕಿ ವ್ಯಾಪಾರ ಸ್ಥಗಿತಗೊಂಡ ಹಿನ್ನೆಲೆ ಜಿಲ್ಲೆಯ ಹಲವು ರೈಸ್ ಮಿಲ್‌ಗಳು ಬಂದ್ ಆಗಿವೆ. ಜಿಲ್ಲೆಯಲ್ಲಿ ಒಟ್ಟು 28 ರೈಸ್ ಮಿಲ್‌ಗಳಿಂದ ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಅಕ್ಕಿ ಗುಜರಾತ್ ಹಾಗೂ ಮಹಾರಾಷ್ಟ್ರ ಮೂಲಕ ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಿಲ್‌ಗಳು ಬಂದ್ ಆಗಿದ್ದು, ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ವಿದ್ಯುತ್ ಬಿಲ್, ಬ್ಯಾಂಕ್ ಸಾಲ ಹಾಗೂ ರೈತರಿಗೆ ನೀಡಬೇಕಾದ ಹಣ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ.

ಇದನ್ನೂ ಓದಿ: Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!

ಒಟ್ಟಿನಲ್ಲಿ ಇರಾನ್ ಮತ್ತು ಇಸ್ರೇಲ್ ಯುದ್ಧದ ಪರಿಣಾಮ ದೂರದ ಯಾದಗಿರಿ ಜಿಲ್ಲೆಯ ವ್ಯಾಪಾರ ವಹಿವಾಟಿನ ಮೇಲೂ ದೊಡ್ಡ ಹೊಡೆತ ಬಿದ್ದಿದ್ದು, ಮೊಟ್ಟೆ ಉದ್ಯಮ, ಹೋಟೆಲ್ ಉದ್ಯಮ ಹಾಗೂ ಅಕ್ಕಿ ರಫ್ತು ಕ್ಷೇತ್ರದಲ್ಲಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಉದ್ಯಮಿಗಳು ಮತ್ತಷ್ಟು ನಷ್ಟ ಅನುಭವಿಸುವ ಭೀತಿ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *