
ಉಡುಪಿ, ಮಾರ್ಚ್ 18: ತಮಿಳುನಾಡಿನ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಜರಸ್ (Mohan C. Lazarus) ನೇತೃತ್ವದಲ್ಲಿ ನಗರದ ಮಿಷನ್ ಕಾಂಪೌಂಡ್ ಪರಿಸರದಲ್ಲಿ ಮಾರ್ಚ್ 20, 21, 22 ರಂದು ಸಮಾಧಾನ ಮಹೋತ್ಸವ ಆಯೋಜಿಸಲಾಗಿದೆ. ಸದ್ಯ ಈ ಕಾರ್ಯಕ್ರಮದ ವಿರುದ್ಧ ಮತಾಂತರ ಆರೋಪ ಕೇಳಿಬಂದಿದ್ದು, ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ತಕ್ಷಣ ಜಿಲ್ಲಾಡಳಿತ ತಡೆ ನೀಡಬೇಕೆಂದು ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿ ಒತ್ತಾಯಿಸಿದ್ದಾರೆ.
ಮಾರ್ಚ್ 20,21 ಮತ್ತು 22ರಂದು ತಮಿಳುನಾಡಿನ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಜರಸ್ ಎಂಬುವರು ನಡೆಸಿಕೊಡುವ ಸಮಾಧಾನ ಮಹೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ. ಉಡುಪಿಯಲ್ಲಿ ಮತಾಂತರ ಪ್ರಚೋದಿತ ಸಮಾಧಾನ ಮಹೋತ್ಸವ ಎಂದು ಗಂಭೀರ ಆರೋಪ ಮಾಡಿದೆ.
ಇದನ್ನೂ ಓದಿ: ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಯತ್ನಿಸಿದವರ ಹೆಡೆಮುರಿ ಕಟ್ಟಿದ ಪೊಲೀಸರು
ಮೋಹನ್ ಸಿ. ಲಾಜರಸ್ ಮೇಲೆ ಗಂಭೀರ ಆಪರೂಪಗಳಿವೆ. ಪವಾಡದ ನೆಪದಲ್ಲಿ ಮತಾಂತರಗೊಳಿಸುತ್ತಾರೆ. ಈ ಹಿಂದೆ ಹಿಂದೂ ದೇವಾಲಯಗಳನ್ನು ಸೈತಾನನ ನೆಲೆಗಳು ಎಂದು ಕರೆದಿದ್ದರು. ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ದ್ವೇಷಪೂರಿತ ಭಾಷಣಗಳಿಗೆ ತಮಿಳುನಾಡಿನ ವಿವಿಧ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ವಿದೇಶಿ ಹಣ ದುರುಪಯೋಗ ಮಾಡಿರುವ ಆರೋಪ ಇದೆ.
ಜೀಸಸ್ ರಿಡೀಮ್ಸ್ ಸಂಸ್ಥೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿದ ಆರೋಪ ಹೊತ್ತಿದೆ. ಕೇಂದ್ರ ಗೃಹ ಸಚಿವಾಲಯ ಇತ್ತೀಚಿಗೆ ಸಂಸ್ಥೆಯ ಲೈಸೆನ್ಸ್ ಅಮಾನತುಗೊಳಿಸಿದೆ. ಕೋಮು ಸೌಹಾರ್ದ ಕೆಡಿಸುವ ಕೆಲಸಕ್ಕೆ ಹಣ ಬಳಕೆ ಎಂಬ ಗಂಭೀರ ಆರೋಪವಿದೆ. ಮುಗ್ಧ ಜನರನ್ನು ಸೇರಿಸಿ ರೋಗವಾಸಿ ಮಾಡುವ ಅಥವಾ ಆಮಿಷ ಒಡ್ಡುವ ಮೂಲಕ ಮತಾಂತರ ನಡೆಸುವ ಸಂಶಯವಿದೆ.
ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್ ನಡುವೆ ಧ್ವಜ ದಂಗಲ್: ಉಡುಪಿ ಡಿಸಿ ನಡೆ ಬಗ್ಗೆ ಪರ-ವಿರೋಧ ಚರ್ಚೆ
ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆ ಕೇಳಿದ ನಂತರ ಕೆಲವು ಪ್ರಕರಣ ರದ್ದುಗೊಳಿಸಲಾಗಿದೆ. ಉಡುಪಿ ಅಂತಹ ಪವಿತ್ರ ಕ್ಷೇತ್ರದಲ್ಲಿ ಧಾರ್ಮಿಕ ಅಶಾಂತಿ ಮೂಡುವ ಸಾಧ್ಯತೆ ಇದೆ. ವಿವಾದಾತ್ಮಕ ವ್ಯಕ್ತಿಗಳು ಪ್ರವೇಶ ಮಾಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಒಂದು ವೇಳೆ ಮೋಹನ್ ಸಿ. ಲಾಜರಸ್ ಜಿಲ್ಲೆಗೆ ಪ್ರವೇಶಿಸಿದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೂಡ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.