
ಬೆಂಗಳೂರು, ಮಾರ್ಚ್ 19: ರಾಜ್ಯದಲ್ಲಿ ಕಮರ್ಷಿಯಲ್ ಸಿಲಿಂಡರ್ಗಳ ಅಭಾವದಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಹಲವು ರೆಸ್ಟೋರೆಂಟ್ಗಳು ಈಗಾಗಲೇ ಬಂದ್ ಆಗಿವೆ. ಪರಿಣಾಮ ಅದನ್ನೇ ನಂಬಿಕೊಂಡಿದ್ದ ಲಕ್ಷಾಂತರ ಕಾರ್ಮಿಕರು ಮತ್ತು ಕುಟುಂಬ ಬೀದಿಗೆ ಬಿದ್ದಿದೆ. ಹೀಗಾಗಿ ಸಿಲಿಂಡರ್ಗಳ ಪೂರೈಕೆಗೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅದಾಗಲೇ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಅಸೋಸಿಯೇಷನ್ ಪತ್ರ ಬರೆದಿದ್ದು, ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತದಿಂದ ಉದ್ಭವಿಸಿರುವ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ ಮತ್ತು ಭೇಟಿಗೆ ಸಮಯ ನೀಡುವಂತೆ ಪತ್ರದಲ್ಲಿ ಆಗ್ರಹಿಸಲಾಗಿದೆ.
ಪ್ರಧಾನಿ ಮೋದಿಗೆ ಬರೆದಿರುವ ಪತ್ರದ ಸಾರಾಂಶ
ಬೆಂಗಳೂರು ನಗರದಲ್ಲೇ 40,000ಕ್ಕೂ ಹೆಚ್ಚು ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿವೆ. ನಾವು ಅಗತ್ಯ ಸೇವೆಗಳ ವಿಭಾಗಕ್ಕೆ ಸೇರಿದ್ದು, ಪ್ರಸ್ತುತ ವಾಣಿಜ್ಯ LPG ಸಿಲಿಂಡರ್ಗಳ ಕೊರತೆ ಮತ್ತು ಸರಬರಾಜಿನ ವ್ಯತ್ಯಯದಿಂದ ನಾವು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಈ ತುರ್ತು ಪರಿಸ್ಥಿತಿಯಲ್ಲಿ, ದಯವಿಟ್ಟು ಪೆಟ್ರೋಲಿಯಂ ಸಚಿವರಿಗೆ ಸೂಚನೆ ನೀಡಿ ನಮ್ಮ ದೈನಂದಿನ LPG ಅಗತ್ಯದ ಕನಿಷ್ಠ ಶೇ.50ರಷ್ಟು ಸರಬರಾಜು ಮಾಡಲು ಸಹಕರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ ಹೋಟೆಲ್ಗಳು ಮತ್ತು ಉಪಾಹಾರ ಮಂದಿರಗಳು ಸಾಮಾನ್ಯ ಜನರಿಗೆ ಪ್ರತಿದಿನದ ಆಹಾರವನ್ನು ಒದಗಿಸುತ್ತವೆ. ಇದರಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರು, ಆನ್ಲೈನ್ ಡೆಲಿವರಿ ಕೆಲಸಗಾರರು, ನಿರ್ಮಾಣ ಕಾರ್ಮಿಕರು, ಆಸ್ಪತ್ರೆಯ ರೋಗಿಗಳು, ಬ್ಯಾಚುಲರ್ಗಳು, ಹಿರಿಯ ನಾಗರಿಕರು ಮತ್ತು ಪಿಜಿ ವಸತಿಯಲ್ಲಿ ವಾಸಿಸುವವರು ಸೇರಿದ್ದಾರೆ ಎಂಬ ಅಂಶವನ್ನು ಪ್ರಧಾನಿಯವರ ಗಮನಕ್ಕೆ ತರಲಾಗಿದೆ.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್; ರಿಟ್ ಅರ್ಜಿ ಸಲ್ಲಿಕೆ
ವಾಣಿಜ್ಯ LPG ಸರಬರಾಜು ಸಂಪೂರ್ಣವಾಗಿ ನಿಂತಿರುವುದು ಸುಮಾರು 40,000 ಸ್ವಯಂ ಉದ್ಯೋಗ ಹೊಂದಿರುವ ಹೋಟೆಲ್ ಮಾಲೀಕರಿಗೂ ಮತ್ತು ಈ ಕ್ಷೇತ್ರದ ಮೇಲೆ ಅವಲಂಬಿತವಾಗಿರುವ 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಭಾರೀ ಹೊಡೆತವಾಗಿದೆ. ಇದಲ್ಲದೆ, ನಮ್ಮ ಅಡುಗೆಮನೆಗಳಲ್ಲಿ ಬಳಕೆಯಾಗುವ ಹಾಲು, ಹಣ್ಣುಗಳು ಮತ್ತು ತರಕಾರಿಗಳಂತಹ ಕೃಷಿ ಉತ್ಪನ್ನಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಜೊತೆಗೆ, ನಾವು ಪ್ರತಿದಿನ ಸಾಮಾನ್ಯ ಜನರಿಗೆ ಉಚಿತ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನೂ ಒದಗಿಸುತ್ತೇವೆ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ, ಪ್ರಸ್ತುತ ವಾಣಿಜ್ಯ LPG ಸಮಸ್ಯೆಗಳು ಮತ್ತು ನಮ್ಮ ಆತಂಕಗಳ ಬಗ್ಗೆ ಚರ್ಚಿಸಲು ನಿಮ್ಮೊಂದಿಗೆ ಭೇಟಿಗೆ ಅವಕಾಶ ನೀಡುವಂತೆ ಕೋರುವುದಾಗಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.