ಇರಾನ್ ಅಧ್ಯಕ್ಷರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ; ನೌರುಜ್​ನಲ್ಲಿ ಮೂಲಸೌಕರ್ಯದ ಮೇಲಿನ ದಾಳಿಗೆ ಖಂಡನೆ

ಇರಾನ್ ಅಧ್ಯಕ್ಷರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ; ನೌರುಜ್​ನಲ್ಲಿ ಮೂಲಸೌಕರ್ಯದ ಮೇಲಿನ ದಾಳಿಗೆ ಖಂಡನೆ

ನವದೆಹಲಿ, ಮಾರ್ಚ್ 21: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್‌ ಅವರೊಂದಿಗೆ ಮಾತನಾಡಿದ್ದಾರೆ. ಇರಾನ್‌ನಾದ್ಯಂತ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಮೋದಿ ಖಂಡಿಸಿದ್ದು, ಇದು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಎಕ್ಸ್​​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್‌ ಅವರೊಂದಿಗೆ ಮಾತನಾಡಿದೆ. ಈದ್ ಮತ್ತು ನೌರುಜ್ ಶುಭಾಶಯಗಳನ್ನು ತಿಳಿಸಿದೆ. ಈ ಹಬ್ಬದ ಋತುವು ಪಶ್ಚಿಮ ಏಷ್ಯಾಕ್ಕೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಬರೆದಿದ್ದಾರೆ.

ಇದೇವೇಳೆ ಪ್ರಧಾನಿ ಮೋದಿ ಸಂಚಾರದ ಸ್ವಾತಂತ್ರ್ಯವನ್ನು ರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ಮಧ್ಯೆ ಹಡಗು ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ಕರೆ ನೀಡಿದ್ದಾರೆ. ಇದು ವಿಶ್ವದ ತೈಲ ಮತ್ತು ಗ್ಯಾಸ್ ವ್ಯಾಪಾರದ ಐದನೇ ಒಂದು ಭಾಗವನ್ನು ಹೊಂದಿರುವ ಪ್ರಮುಖ ಕಡಲ ಚಾಕ್‌ಪಾಯಿಂಟ್ ಜಾಗತಿಕವಾಗಿ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಿತು.

ಇದನ್ನೂ ಓದಿ: ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಬ್ರೇಕ್? ಟ್ರಂಪ್ ಆ ಸಂದೇಶದಲ್ಲಿದೆ ಮಹತ್ವದ ಸುಳಿವು!

“ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುವ ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುವ ಈ ಪ್ರದೇಶದಲ್ಲಿನ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಖಂಡಿಸಲಾಯಿತು. ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡುವ, ಹಡಗು ಮಾರ್ಗಗಳು ಮುಕ್ತ ಮತ್ತು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಅವರು ಪುನರುಚ್ಚರಿಸಿದರು. ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಇರಾನ್‌ನ ನಿರಂತರ ಬೆಂಬಲವನ್ನು ಶ್ಲಾಘಿಸಿದರು” ಎಂದು ಮೋದಿ ಹೇಳಿದ್ದಾರೆ.

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಯೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಪ್ರಾರಂಭವಾದ ನಂತರ ಇದು ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷರಿಗೆ ಮಾಡಿದ ಎರಡನೇ ದೂರವಾಣಿ ಕರೆಯಾಗಿದೆ.

ಇದನ್ನೂ ಓದಿ: ನೀವು ಹೇಡಿಗಳು; ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಟ್ರಂಪ್ ಆಕ್ರೋಶ

ಮಾರ್ಚ್ 12ರಂದು ಪ್ರಧಾನಿ ಮೋದಿ ಅವರು ಪೆಜೆಶ್ಕಿಯನ್ ಅವರೊಂದಿಗೆ ಮಾತನಾಡಿದ್ದರು. ಪ್ರಾದೇಶಿಕ ಸಂಘರ್ಷದ ಬಗ್ಗೆ ತಮ್ಮ ಕಳವಳಗಳನ್ನು ತಿಳಿಸಿದ್ದರು. “ಪ್ರದೇಶದಲ್ಲಿನ ಗಂಭೀರ ಪರಿಸ್ಥಿತಿಯನ್ನು ಚರ್ಚಿಸಲು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯನ್ ಅವರೊಂದಿಗೆ ಮಾತುಕತೆ ನಡೆಸಿದೆ. ಉದ್ವಿಗ್ನತೆಗಳ ಉಲ್ಬಣ, ಜನರ ಜೀವಹಾನಿ ಹಾಗೂ ನಾಗರಿಕ ಮೂಲಸೌಕರ್ಯಕ್ಕೆ ಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ” ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಹೇಳಿದ್ದರು.

ಯುದ್ಧಪೀಡಿತ ಪ್ರದೇಶದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯು ಭಾರತದ ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು ಪ್ರಧಾನಿ ಮೋದಿ ದೃಢಪಡಿಸಿದ್ದರು. ಇದರ ಜೊತೆಗೆ ಸರಕು ಮತ್ತು ಇಂಧನದ ಅಡೆತಡೆಯಿಲ್ಲದ ಸಾಗಣೆಯ ಅಗತ್ಯವೂ ಭಾರತದ ಪ್ರಮುಖ ಆದ್ಯತೆಗಳಾಗಿವೆ. ಶಾಂತಿ ಮತ್ತು ಸ್ಥಿರತೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *