
ನವದೆಹಲಿ, ಮಾರ್ಚ್ 23: ಇರಾನ್, ಇಸ್ರೇಲ್-ಅಮೆರಿಕದ ನಡುವೆ ಯುದ್ಧ ನಡೆಯುತ್ತಿರುವುದರಿಂದ ಅದರ ಪರಿಣಾಮಗಳನ್ನು ಬೇರೆ ದೇಶಗಳೂ ಅನುಭವಿಸುತ್ತಿವೆ. ಮಧ್ಯ ಏಷ್ಯಾದ ಈ ಸಂಘರ್ಷದ ಕುರಿತು ಇಂದು ಟಿವಿ9ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. “2014ರ ನೀರಸತೆಯನ್ನು ಬಿಟ್ಟು ಭಾರತವು ಹೊಸ ಆತ್ಮವಿಶ್ವಾಸದೊಂದಿಗೆ ಹೊರಹೊಮ್ಮುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಇಂದಿನ ಯುದ್ಧ ವಾತಾವರಣದವರೆಗೆ ಭಾರತೀಯರು ಪ್ರತಿ ವರ್ಷವೂ ಪರೀಕ್ಷೆಗಳನ್ನು ಎದುರಿಸುತ್ತಲೇ ಇದ್ದಾರೆ. 140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದಿಂದ ಮಾತ್ರ ನಾವು ಪ್ರತಿಯೊಂದು ವಿಪತ್ತನ್ನು, ಸವಾಲನ್ನು ಎದುರಿಸಲು ಸಾಧ್ಯವಾಗಿದೆ. ಯುದ್ಧದ ಸಮಯದಲ್ಲೂ ಭಾರತ ಅನುಸರಿಸುತ್ತಿರುವ ತಂತ್ರಗಳು ಮತ್ತು ಆರ್ಥಿಕ ಸ್ಥಿರತೆಯಿಂದ ಜಗತ್ತು ಬೆರಗುಗೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಫೆಬ್ರವರಿ 28ರಿಂದ ಜಗತ್ತು ಪ್ರಕ್ಷುಬ್ಧತೆಯಿಂದ ಕೂಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದ ಯಾವುದೇ ದೇಶವು ಪ್ರಭಾವಿತವಾಗದೆ ಇರುವುದು ಅಸಾಧ್ಯ. ಯುದ್ಧಗಳು ನಮ್ಮ ಗಡಿಗಳಿಂದ ದೂರದಲ್ಲಿ ನಡೆಯುತ್ತಿದ್ದರೂ ಅವುಗಳ ಅಡ್ಡಪರಿಣಾಮಗಳನ್ನು ಪ್ರಪಂಚದಾದ್ಯಂತ ದೇಶಗಳು ಅನುಭವಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇಂತಹ ಭೀಕರ ಪರಿಸ್ಥಿತಿಯಲ್ಲೂ ಭಾರತ ತನ್ನ ಅಭಿವೃದ್ಧಿಯ ವೇಗವನ್ನು ನಿಧಾನಗೊಳಿಸಿಲ್ಲ” ಎಂದು ಅವರು ಹೆಮ್ಮೆಯಿಂದ ಘೋಷಿಸಿದರು.
“ಜಗತ್ತು ವಿಭಿನ್ನ ಬಣಗಳಾಗಿ ವಿಭಜನೆಯಾಗುತ್ತಿದ್ದರೆ ಭಾರತ ದೇಶಗಳ ನಡುವೆ ಅಭೂತಪೂರ್ವ ಸೇತುವೆಗಳನ್ನು ನಿರ್ಮಿಸುತ್ತಿದೆ. ಜಾಗತಿಕ ದಕ್ಷಿಣದಿಂದ ನಮ್ಮ ನೆರೆಹೊರೆಯವರವರೆಗೆ ಭಾರತವು ವಿಶ್ವಾಸಾರ್ಹ ಪಾಲುದಾರನಾಗಿ ಮಾರ್ಪಟ್ಟಿದೆ. ನಾವು ಶಾಂತಿ ಮತ್ತು ಸಂವಾದಕ್ಕಾಗಿ ಮಾತ್ರ ನಿಲ್ಲುತ್ತೇವೆ. ಅದು ಬಿಟ್ಟು ನಾವು ಯಾವ ದೇಶದ ಪರವಾಗಿಯೂ ಅಲ್ಲ” ಎಂದು ಮೋದಿ ವಿವರಿಸಿದರು.
“ಯುದ್ಧದ ಪರಿಣಾಮದ ಹೊರತಾಗಿಯೂ, ಭಾರತವು ತನ್ನ ಅಭಿವೃದ್ಧಿಯ ವೇಗವನ್ನು ನಿಲ್ಲಿಸಿಲ್ಲ. ಕಳೆದ 23 ದಿನಗಳಲ್ಲಿ ಸರ್ಕಾರ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಯುದ್ಧದ ನಡುವೆಯೂ ಭಾರತ ಪ್ರಗತಿಯನ್ನು ಕಾಯ್ದುಕೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ