ರಾಜ್ಯದ ಕೆಲವೆಡೆ ಬಿರುಗಾಳಿ ಸಹಿತ ಮಳೆ: ಧಾರಾಕಾರ ಮಳೆಗೆ ಹಲವು ಅವಾಂತರ

ರಾಜ್ಯದ ಕೆಲವೆಡೆ ಬಿರುಗಾಳಿ ಸಹಿತ ಮಳೆ: ಧಾರಾಕಾರ ಮಳೆಗೆ ಹಲವು ಅವಾಂತರ

ಬೆಂಗಳೂರು, ಮಾರ್ಚ್​ 28: ರಣರಣ ಅಂತಿರೋ ಬೇಸಿಗೆ ಬಿಸಿಲು ನಡುವೆ ರಾಜ್ಯದ ಕೆಲವೆಡೆ ಮಳೆ (rain) ಅಬ್ಬರಿಸಿದೆ. ಅದರಲ್ಲೂ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಹಲವು ಅವಾಂತರಗಳು ಸಂಭವಿಸಿವೆ. ಗಿಡಮರಗಳು ನೆಲಕ್ಕುರುಳಿದ್ದು, ಕಟ್ಟಡಗಳ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ.

ಬಿರುಬಿಸಿಲ ಬೇಗೆ ನಡುವೆ ಮಳೆಯ ರಣಾರ್ಭಟಿಸಿದ್ದಾರೆ. ಬಿರುಗಾಳಿಗೆ ಕಟ್ಟಡಗಳ ಹೆಂಚುಗಳೇ ಹಾರಿ ಹೋಗಿದ್ದು, ಅಡಕೆ ತೋಟ ಅಲ್ಲೋಲಕಲ್ಲೋಲವೇ ಆಗಿದ್ದರೆ, ತೆಂಗಿನ ಮರ ನೆಲಕ್ಕುರುಳಿದೆ. ಬಳ್ಳಾರಿ, ರಾಯಚೂರು, ಕಲಬುರಗಿ ಮಾತ್ರವಲ್ಲ ಈ ಬಾರಿ ರಾಜ್ಯದ ಉದ್ದಗಲಕ್ಕೂ ಬಿಸಿಲು ಹೆಚ್ಚಾಗಿದೆ. ಈ ಬಿಸಿಲಬೇಗೆ ನಡುವೆ ಅಲ್ಲಲ್ಲಿ ಮಳೆ ಆಗ್ತಿದೆ. ಇವತ್ತು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಮಳೆ ಆರ್ಭಟಿಸಿದೆ.

ಹಾರಿಹೋದ ಶಾಲೆಯ ಹೆಂಚು

ಅದರಲ್ಲೂ ಜೋರುಗಾಳಿ ಇದ್ದಿದ್ರಿಂದ ಮೂಡಿಗೆರೆಯ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ಪ್ರೌಢಶಾಲೆಯ ಹೆಂಚುಗಳು ಪುಡಿಪುಡಿ ಆಗಿವೆ. ಹೆಂಚುಗಳು ಹಾರಿಹೋಗುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ಕಾಫಿನಾಡಿನಲ್ಲಿ ವರುಣನ ಅಬ್ಬರ: ಬಿರುಗಾಳಿ ಸಹಿತ ಧಾರಾಕಾರ ಮಳೆ, ಮೂಡಿಗೆರೆ ರಸ್ತೆಗಳು ಜಲಾವೃತ!

ಮೂಡಿಗೆರೆ ತಾಲೂಕಿನ ಬಿದರಹಳ್ಳಿಯಲ್ಲಿ ಬಿರುಗಾಳಿಗೆ ಕ್ಯಾಂಟೀನ್ ಮೇಲ್ಚಾವಣೆ ಹಾರಿಹೋಗಿದೆ. ತೆಂಗಿನ ಮರ ರಸ್ತೆಗೆ ಉರುಳಿದೆ. ಇನ್ನು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸುತ್ತಮುತ್ತ ಧಾರಾಕಾರವಾಗಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥವಾಗಿತ್ತು.

ಕಾರಿನ ಮೇಲೆ ಉರುಳಿದ ಮರ: ದಂಪತಿ ಬಚಾವ್‌!

ಮೂಡಿಗೆರೆಯ ಪರಿಮಳಮ್ಮ ದೇಗುಲ ಬಳಿ ಚಲಿಸುತ್ತಿದ್ದ ಕಾರ್ ಮೇಲೆ ಬೃಹತ್‌ ಮರ ಉರುಳಿ ಬಿದ್ದಿತ್ತು. ಕಾರಿನಲ್ಲಿದ್ದ ದಂಪತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ದಂಪತಿ ರಕ್ಷಣೆ ಮಾಡಿರುವ ಅಗ್ನಿಶಾಮಕ ಸಿಬ್ಬಂದಿ ಮರ ತೆರವು ಮಾಡಿದ್ದಾರೆ.

ಹಾಸನದಲ್ಲಿ ಸಿಡಿಲಿನ ಆರ್ಭಟ: ಐವರಿಗೆ ಗಾಯ!

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲೂ ಮಳೆ ಅಬ್ಬರಿಸಿದೆ. ದೀನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಐವರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ರೂಪಾ, ಲಕ್ಷ್ಮೀ, ಸುಮಿತ್ರಾ, ಜಯಮ್ಮ ಸೇರಿದಂತೆ ಐವರನ್ನ ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಲಿಕಲ್ಲು ಮಳೆ: ಮಾವು ಬೆಳೆಗಾರರು ಕಂಗಾಲು

ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ, ಧಾರವಾಡ ತಾಲೂಕಿನಲ್ಲಿ ವಾರದ ಹಿಂದೆ ಆಲಿಕಲ್ಲು ಮಳೆ ಆಗಿತ್ತು. ಥೇಟ್‌ ಕಾಶ್ಮೀರದಂತೆ ಬದಲಾಗಿತ್ತು. ಇದೇ ಆಲಿಕಲ್ಲು ಮಳೆ ಮಾವು ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ. ಇಬ್ಬನಿಯಿಂದ್ಲೇ ಹೂವು ಉದುರಿ ಹೋಗಿದ್ವು. ಅಳಿದುಳಿದಿದ್ದ ಮಾವು, ಆಲಿಕಲ್ಲು ಮಳೆಯಿಂದ ಸಾವಿರಾರು ಎಕರೆಯಲ್ಲಿನ ಮಾವು ಹಾಳಾಗಿದೆ.

ಇದನ್ನೂ ಓದಿ: ಧಾರಾವಾಡ: ಆಲಿಕಲ್ಲು ಮಳೆಗೆ ಉದುರಿದ ಮಾವು; ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಂಗಾಲಾದ ಅನ್ನದಾತ!

ಬೇಸಿಗೆಯಿಂದ ಬೆಂದು ಹೋಗುತ್ತಿರುವ ಜನರಿಗೆ ಒಂದ್ಕಡೆ ಮಳೆರಾಯ ತಂಪೆರೆದರೆ, ಮತ್ತೊಂದ್ಕಡೆ ಇದೇ ಮಳೆ ಮಾವು ಬೆಳೆಯನ್ನ ನೆಲದ ಪಾಲು ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *