Headlines

ಸಂಸ್ಕೃತ ಕೇವಲ ಭಾಷೆಯಲ್ಲ ಅದು ಸಂಸ್ಕಾರ, ಭಾರತದ ಆತ್ಮ: ಮೋಹನ್ ಭಾಗವತ್ – Kannada News | Mohan Bhagwat: Sanskrit is India’s Soul, Not Just a Language Pranav Inaugurated

ನವದೆಹಲಿ, ಏಪ್ರಿಲ್ 20: ಸಂಸ್ಕೃತ(Sanskrit) ಒಂದು ಭಾಷೆಯಲ್ಲ ಅದು ಸಂಸ್ಕಾರ, ಭಾರತದ ಆತ್ಮ ಎಂದು ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ. ಅಕ್ಷಯ ತೃತೀಯದಂದು ಆರಂಭವಾಗುವ ಕಾರ್ಯಕ್ಕೆ ಎಂದೂ ಅಂತ್ಯವಿಲ್ಲ. ಭಾರತ ಎಂದರೆ ಕೇವಲ ಭೂಪಟವಲ್ಲ ಅಥವಾ ರಾಜಕೀಯ ಭೌಗೋಳಿಕ ಘಟಕವಲ್ಲ. ಭಾರತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತವನ್ನು ತಿಳಿಯುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಅಂಗಸಂಸ್ಥೆ ಸಂಸ್ಕೃತ ಭಾರತಿಯ ನೂತನ ಕಾರ್ಯಾಲಯ ಮತ್ತು ಅಂತಾರಾಷ್ಟ್ರೀಯ ತರಬೇತಿ ಕೇಂದ್ರವಾದ ‘ಪ್ರಣವಃ’ ಅನ್ನು ಆರ್​ಎಸ್​ಎಸ್​ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಉದ್ಘಾಟಿಸಿದರು.ಅಕ್ಷಯ ತೃತೀಯದ ಶುಭ ದಿನದಂದು ದೆಹಲಿಯಲ್ಲಿ ಭಾರತೀಯ ಜ್ಞಾನ ಪರಂಪರೆಯ ಹೊಸ ಅಧ್ಯಾಯವೊಂದು ಆರಂಭವಾಯಿತು
ಈ ಸಮಾರಂಭವು ಕೇವಲ ಒಂದು ಕಚೇರಿಯ ಉದ್ಘಾಟನೆಯಾಗಿರದೆ, ದೇಶದ ಪ್ರಮುಖ ಗಣ್ಯರ ಸಮಾಗಮಕ್ಕೆ ಸಾಕ್ಷಿಯಾಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿ.ಎಲ್. ಸಂತೋಷ್, ಅನುರಾಗ್ ಠಾಕೂರ್ ಸೇರಿದಂತೆ ಅನೇಕ ಗಣ್ಯರು ಈ ಐತಿಹಾಸಿಕ ಕ್ಷಣದಲ್ಲಿ ಉಪಸ್ಥಿತರಿದ್ದರು.

ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ, ಆದರೆ ಇವೆಲ್ಲವನ್ನೂ ಒಗ್ಗೂಡಿಸುವ ಶಕ್ತಿ ಇರುವುದು ಸಂಸ್ಕೃತಕ್ಕೆ ಮಾತ್ರ. ಸಂಸ್ಕೃತ ತಿಳಿದವರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಸಂವಹನ ನಡೆಸಲು ಕಷ್ಟವಾಗದು ಎಂದು ಅವರು ಅಭಿಪ್ರಾಯಪಟ್ಟರು.

ಮತ್ತಷ್ಟು ಓದಿ: ಹಿಂದೂ ಸಮಾಜವನ್ನು ಒಗ್ಗೂಡಿಸುವುದಷ್ಟೇ ಆರ್​ಎಸ್​ಎಸ್ ಉದ್ದೇಶ; ಮೋಹನ್ ಭಾಗವತ್

ಸಂಘಟನೆಯ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಅವರು, ನಾವು ನಿತ್ಯವೂ ಉಸಿರಾಡುವುದನ್ನು ಹೇಗೆ ಮರೆಯುವುದಿಲ್ಲವೋ ಅಥವಾ ಅದು ನಮಗೆ ಹೇಗೆ ಬೇಸರ ತರುವುದಿಲ್ಲವೋ, ಸಂಸ್ಕೃತದ ಕಾರ್ಯವೂ ನಮಗೆ ನಿತ್ಯವೂ ಹೊಸದಾಗಿರಬೇಕು. ಸಂಸ್ಕೃತವನ್ನು ಕೇವಲ ಭಾಷೆಯಾಗಿ ಕಲಿಸುವುದಲ್ಲ, ಅದನ್ನು ಭಾವವಾಗಿ ಮನಸ್ಸಿಗೆ ಇಳಿಸಬೇಕು” ಎಂದರು. ಕಳೆದ 15 ವರ್ಷಗಳಲ್ಲಿ ಸಂಸ್ಕೃತದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿರುವುದನ್ನು ಅವರು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಮೈ ಹೋಮ್ (My Home) ಸಂಸ್ಥೆಯ ಎಂ.ಡಿ. ಜೆ. ರಂಜಿತ್ ರಾವ್ ಅವರನ್ನು ಮೋಹನ್ ಭಾಗವತ್ ಅವರು ವೇದಿಕೆಗೆ ಕರೆದು ಆತ್ಮೀಯವಾಗಿ ಸನ್ಮಾನಿಸಿದರು.

ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀಶ ದೇವಪುಜಾರಿ ಮಾತನಾಡಿ, ಈ ‘ಪ್ರಣವಃ’ ಕೇಂದ್ರವು ವಿಶ್ವದ 22 ದೇಶಗಳಲ್ಲಿ ಸಂಸ್ಕೃತವನ್ನು ಪಸರಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು. ಪ್ರಸ್ತುತ ದೇಶಾದ್ಯಂತ 4,000 ಕೇಂದ್ರಗಳಿದ್ದು, ಮುಂಬರುವ ದಿನಗಳಲ್ಲಿ ಪ್ರತಿಯೊಂದು ಬ್ಲಾಕ್ ಮಟ್ಟದಲ್ಲೂ ಸಂಸ್ಕೃತ ಕೇಂದ್ರಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ಅವರು ಘೋಷಿಸಿದರು. ‘ಪ್ರಣವಃ’ ಇನ್ನು ಮುಂದೆ ಕೇವಲ ಕಚೇರಿಯಾಗಿ ಉಳಿಯದೆ, ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳು ಮತ್ತು ತರಬೇತಿಗಳ ಮೂಲಕ ಭಾರತದ ಪ್ರಾಚೀನ ಜ್ಞಾನವನ್ನು ಜಗತ್ತಿಗೆ ಪರಿಚಯಿಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:01 pm, Mon, 20 April 26

Source link

Leave a Reply

Your email address will not be published. Required fields are marked *