
ಹೈದರಾಬಾದ್, ಏಪ್ರಿಲ್ 21: ಸಿರಿಷಾ ಎಂಬ ಯುವತಿ ಇಂಗ್ಲೆಂಡ್ನಲ್ಲಿ ನೆಲೆಸಿದ್ದ ಫಾರ್ಮಾಸಿಸ್ಟ್ ಒಬ್ಬನನ್ನು ಮದುವೆಯಾಗಿದ್ದಳು. ಆದರೆ, ಆಕೆಗೆ ಆತನೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ವಿಚ್ಛೇದನ ಪಡೆದು ಇನ್ನೊಬ್ಬನನ್ನು ಮದುವೆಯಾಗಿದ್ದಳು. 2ನೇ ವಿವಾಹವಾಗಿದ್ದ ಆಕೆ ಖುಷಿಯಾಗಿರುವುದನ್ನು ಮೊದಲ ಗಂಡನಿಗೆ ನೋಡಲು ಕಷ್ಟವಾಗುತ್ತಿತ್ತು. ಹೀಗಾಗಿ, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಇಡೀ ಕುಟುಂಬವನ್ನೇ ನಾಶ ಮಾಡುವ ಸಂಚು ಮಾಡಿದ್ದ. ಇದು ಹೈದರಾಬಾದ್ನ ಕತೆ.
2023ರಲ್ಲಿ ನಡೆದ ಘಟನೆ ಇದು. ಶಶಿರೇಖಾ ಎಂಬ ಯುವತಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ಆಕೆಯ ಉಗುರುಗಳ ಮೇಲೆ ಮಸುಕಾದ ಬಿಳಿ ಗೆರೆಗಳನ್ನು ಗಮನಿಸಿದ ವೈದ್ಯರು ಆಕೆಯ ದೇಹಕ್ಕೆ ವಿಷ ಸೇರಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ಕುಟುಂಬದವರ ಆರೋಗ್ಯದಲ್ಲಿಯೂ ಭಾರೀ ಬದಲಾವಣೆಯಾಗಿತ್ತು. ಆಗಾಗ ವಾಂತಿ, ಸುಸ್ತು, ಜ್ವರ ಮುಂತಾದ ಸಮಸ್ಯೆಗಳು ಪದೇಪದೆ ಕಾಣಿಸಿಕೊಳ್ಳತೊಡಗಿತ್ತು.
ಇದನ್ನೂ ಓದಿ: ಉದ್ಯಮಿಯ ಮನೆಯಿಂದ 220 ಗ್ರಾಂ ಚಿನ್ನ ಕದ್ದ ಐವರು ಪೊಲೀಸ್ ಅಧಿಕಾರಿಗಳು!
ಜುಲೈ 26, 2023ರಂದು ಶಶಿರೇಖಾ ಅವರನ್ನು ಆಂಧ್ರಪ್ರದೇಶದ ಗುಂಟೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಗೆ ತೀವ್ರ ಅತಿಸಾರ, ವಾಂತಿ ಮತ್ತು ಕೈಕಾಲುಗಳಲ್ಲಿ ಊತವಿತ್ತು. ಅವರ ಕುಟುಂಬಸ್ಥರು ಆಕೆಯನ್ನು ಹಲವಾರು ವೈದ್ಯರ ಬಳಿಗೆ ಕರೆದೊಯ್ದರೂ ಅನಾರೋಗ್ಯಕ್ಕೆ ಕಾರಣ ಸ್ಪಷ್ಟವಾಗಿರಲಿಲ್ಲ. ಕೊನೆಗೆ ವೈದ್ಯರೊಬ್ಬರು ಆಕೆಯ ಉಗುರಿನ ಮೇಲಿದ್ದ ಬಿಳಿ ಗೆರೆಗಳನ್ನು ಗಮನಿಸಿ ಆಕೆಯ ಮೇಲೆ ವಿಷಪ್ರಾಶನವಾಗಿದೆ ಎಂದು ತಿಳಿಸಿದ್ದರು. ಆದರೆ, ಅಷ್ಟು ಪ್ರಮಾಣದ ವಿಷ ಆಕೆಯ ದೇಹಕ್ಕೆ ಸೇರಿದ್ದು ಹೇಗೆಂಬುದು ಕಗ್ಗಂಟಾಗಿತ್ತು.
ಶಶಿರೇಖಾ ಅವರ ಕುಟುಂಬದ ಸದಸ್ಯರು ಹಲವಾರು ವೈದ್ಯರನ್ನು ಭೇಟಿ ಮಾಡಿದ ನಂತರ ನರವಿಜ್ಞಾನಿ ಡಾ. ವೇಮುರಿ ರಾಮ ತಾರಕನಾಥ್ ಅವರ ಬಳಿ ಹೋದಾಗ ಈ ವಿಷದ ವಿಷಯ ಬೆಳಕಿಗೆ ಬಂದಿತ್ತು. ತಾರಕನಾಥ್ ಅವರು ಆಕೆಯ ಉಗುರುಗಳ ಮೇಲೆ “ಮೀಸ್” ಎಂದು ಕರೆಯಲ್ಪಡುವ ಬಿಳಿ ಗೆರೆಗಳನ್ನು ನೋಡಿದರು. ಇದು ಆರ್ಸೆನಿಕ್ ವಿಷವನ್ನು ಸೂಚಿಸುತ್ತದೆ. ಪರೀಕ್ಷೆಗಳನ್ನು ನಡೆಸಿದಾಗ ಆಕೆಯ ದೇಹದಲ್ಲಿ ಆ ವಿಷ ಇರುವುದು ಪತ್ತೆಯಾಯಿತು. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದಾಗ ಅವರು ತನಿಖೆ ನಡೆಸಲಾರಂಭಿಸಿದರು.
ಶಶಿರೇಖಾ ಅವರ ಅತ್ತೆ ಎಂ. ಉಮಾ ಮಹೇಶ್ವರಿ ಕೆಲವು ವಾರಗಳ ಹಿಂದೆ ನಿಧನರಾಗಿದ್ದರು. ಇದನ್ನು ಆರಂಭದಲ್ಲಿ ಸಹಜ ಸಾವು ಎಂದು ನಂಬಲಾಗಿತ್ತು. ಆದರೆ, ಮನೆಯ ಬೇರೆ ಸದಸ್ಯರಿಗೂ ಶಶಿರೇಖಾ ಅವರಂತೆಯೇ ಅನಾರೋಗ್ಯದ ಲಕ್ಷಣಗಳು ಕಂಡುಬಂದಿತ್ತು. ಇದು ಅವರ ಕುಟುಂಬದಲ್ಲಿ ಅನುಮಾನವನ್ನು ಹುಟ್ಟುಹಾಕಿತು. ಇದು ಶಶಿರೇಖಾ ಅವರ ಪತಿಯ ತಂಗಿ ಮತ್ತು ಉಮಾ ಅವರ ಮಗಳಾದ ಎಂ. ಸಿರಿಷಾ ಅವರನ್ನು ಆತಂಕಗೊಳಿಸಿತು. ಅವರು ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದಾರೆ. ಆಗ ಸಿರೀಶಾಗೆ ತನ್ನ ಮೊದಲ ಗಂಡನ ಮೇಲೆ ಅನುಮಾನ ಉಂಟಾಯಿತು.
ಸಿರೀಶಾ ಮತ್ತು ಅಜಿತ್ 2018ರಲ್ಲಿ ವಿವಾಹವಾಗಿದ್ದರು. 2022ರಲ್ಲಿ ಸಿರೀಶಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ತನಿಖೆಯ ಪ್ರಕಾರ, ಅಂದಿನಿಂದಲೇ ಅಜಿತ್ ಸಿರೀಶಾ ಮತ್ತು ಅವರ ಕುಟುಂಬವನ್ನು ಕೊಲ್ಲಲು ಯೋಜಿಸಿದ್ದ. ಅಜಿತ್ ಔಷಧೀಯ ಜ್ಞಾನವನ್ನು ಹೊಂದಿದ್ದ. ಆತ ತನ್ನ ಸಹೋದರಿಯ ಮೂಲಕ ಆರ್ಸೆನಿಕ್ ಅನ್ನು ಸಂಗ್ರಹಿಸಿದ್ದ. ಉಪ್ಪು ಮತ್ತು ಮೆಣಸಿನ ಪುಡಿಯಂತಹ ಮಸಾಲೆಗಳಿಗೆ ಮಿಕ್ಸ್ ಮಾಡಿ ಫುಡ್ ಡೆಲಿವರಿ ಬಾಯ್ ಮೂಲಕ ಅವರ ಮನೆಗೆ ಕಳುಹಿಸಿದ್ದ. ಅದನ್ನು ಹೈದರಾಬಾದ್ನಲ್ಲಿರುವ ಸಿರೀಶಾ ಅವರ ಪೋಷಕರ ಮನೆಗೆ ತಲುಪಿಸಲಾಗಿತ್ತು.
ಈ ವಿಷಯ ತಿಳಿಯದೆ ಸಿರೀಶಾಳ ಫ್ಯಾಮಿಲಿ ವಾರಗಟ್ಟಲೆ ಈ ಮಸಾಲೆಗಳನ್ನು ಅಡುಗೆಯಲ್ಲಿ ಸೇವಿಸಿತ್ತು. ಇದರಿಂದ ಉಮಾ ಅವರು ಸಾವನ್ನಪ್ಪಿದರು. ಅಜಿತ್ ಈ ರೀತಿ ಹಲವಾರು ಬಾರಿ ಕೊಲೆ ಪ್ರಯತ್ನಗಳನ್ನು ಮಾಡಿದ್ದ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ