
ಒಂದು ವರ್ಷದಿಂದ ಹನ್ನೆರಡು ವರ್ಷದೊಳಗಿನ ಮಕ್ಕಳು ಕೆಲವೊಮ್ಮೆ ಹಠ ಮಾಡುವುದು, ಚೀರಾಡುವುದು, ಅಳುವುದು ಅಥವಾ ವಿಚಿತ್ರವಾಗಿ ವರ್ತಿಸುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ, ನಮ್ಮ ಪೂರ್ವಿಕರು, ಹಿಂದೂ ಸಂಸ್ಕೃತಿ ಮತ್ತು ಸನಾತನ ಪರಂಪರೆಯಲ್ಲಿ, ಮಂತ್ರದ ಶಕ್ತಿಯನ್ನು ಪಡೆದಿರುವ ಅನುಭವಿ ವ್ಯಕ್ತಿಗಳ ಮೂಲಕ ಮಕ್ಕಳಿಗೆ ಮಂತ್ರ ಹಾಕಿಸುವ ಪದ್ಧತಿ ಇತ್ತು. ಇದರ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಗ್ರಾಮೀಣ ಪ್ರದೇಶಗಳಲ್ಲಿ, ಸದಾ ದೈವಾಚಾರದಲ್ಲಿ ನಿರತರಾಗಿರುವ, ವಿಶೇಷ ಶಕ್ತಿ ಮತ್ತು ಸನ್ನಡತೆ ಹೊಂದಿರುವ ವ್ಯಕ್ತಿಗಳ ಬಾಯಿಂದ ಹೊರಡುವ ಮಂತ್ರಗಳು ಮಕ್ಕಳ ಮುಖದ ಹತ್ತಿರ ಪಠಿಸಲ್ಪಟ್ಟಾಗ, ಅವು ಜ್ವರ, ಭೀತಿ, ಮತ್ತು ಅಸಹಜ ನಡವಳಿಕೆಗಳನ್ನು ನಿವಾರಿಸುತ್ತವೆ ಎಂದು ನಂಬಲಾಗುತ್ತದೆ. ಈ ಮಂತ್ರಗಳ ಪ್ರಭಾವವು ಬಹಳ ಮಹತ್ವದ್ದಾಗಿದೆ, ಆದರೆ ಇದನ್ನು ಪ್ರಾಥಮಿಕ ಚಿಕಿತ್ಸೆ ಅಥವಾ ಫಸ್ಟ್ ಏಡ್ ಎಂದು ಪರಿಗಣಿಸಲಾಗುತ್ತದೆ. ಹಿರಿಯರು, ವಿದ್ವಾಂಸರು, ಮಹನೀಯರು ಅಥವಾ ದೈವಾಂಶ ಸಂಭೂತರ ಮೂಲಕ ಮಂತ್ರಗಳನ್ನು ಹಾಕಿಸಲಾಗುತ್ತದೆ. ಕೆಲವರು ಕುಂಕುಮ, ವಿಭೂತಿ, ಅಥವಾ ವಸ್ತ್ರದ ಮೂಲಕ ಮಂತ್ರಗಳನ್ನು ಪಠಿಸುತ್ತಾರೆ.
ಶಾಸ್ತ್ರಬದ್ಧವಾಗಿ, ಬಾಲಗ್ರಹಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಪ್ರಕೃತಿ ಅಥವಾ ವಾತಾವರಣದ ಪ್ರಭಾವದಿಂದ, ಅಥವಾ ದೃಷ್ಟಿ ದೋಷದಿಂದ ಮಕ್ಕಳಿಗೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ ಎಂದು ನಂಬಲಾಗಿದೆ. ಪುಟ್ಟ ಮಕ್ಕಳು, ಪ್ರೌಢಾವಸ್ಥೆಗೆ ಬಂದವರಂತೆ ರಕ್ಷಾ ವಲಯ ಅಥವಾ ಪ್ರಭಾವಲಯ ಹೊಂದಿರುವುದಿಲ್ಲ. ಅವರಿಗೆ ಕೇವಲ ಭಗವಂತನ ರಕ್ಷಾ ವಲಯ ಮಾತ್ರ ಇರುತ್ತದೆ. ಆದರೆ, ಕೆಲವರ ವಾಕ್ಶಕ್ತಿಯ ಪ್ರಭಾವದಿಂದ ದೃಷ್ಟಿ ದೋಷವನ್ನು ನಿವಾರಿಸಬಹುದು.
ಮಕ್ಕಳು ಚೀರಾಡುವ ಅಥವಾ ಅಳುವ ಸಂದರ್ಭದಲ್ಲಿ, ಸೂರ್ಯೋದಯದ ಮುಹೂರ್ತ, ಅಭಿಜಿನ್ ಮುಹೂರ್ತ, ಅಥವಾ ಗೋದೂಳಿಯ ಮುಹೂರ್ತದಲ್ಲಿ, ಮಗುವನ್ನು ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕೂರಿಸಿ, ಪ್ರಶಾಂತ ವಾತಾವರಣದಲ್ಲಿ ವಾಕ್ಸಿದ್ದಿ ಪಡೆದ ವಿದ್ವಾಂಸರಿಂದ ಮಂತ್ರಗಳನ್ನು ಹಾಕಿಸಲಾಗುತ್ತದೆ. ನಂತರ, ವಿಭೂತಿಯನ್ನು ಹಣೆಗೆ ಹಚ್ಚುವುದು ಅಥವಾ ಮಗು ಮಲಗುವ ಸ್ಥಳದಲ್ಲಿ ಹಾಕುವುದು ರಕ್ಷಣೆಯನ್ನು ನೀಡುತ್ತದೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಮಂತ್ರಗಳ ಕಂಪನ ಮತ್ತು ಅವುಗಳ ಉಚ್ಚಾರಣೆಯು ಅತ್ಯಂತ ಶಕ್ತಿಯುತವಾಗಿದ್ದು, ತಕ್ಷಣವೇ ಮಗುವಿಗೆ ಚೈತನ್ಯವನ್ನು ತುಂಬಿ, ರಕ್ಷಾ ಕವಚವನ್ನು ನಿರ್ಮಿಸುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯಲು ಸಾಧ್ಯವಿಲ್ಲ. ಭಯ, ಚೀರಾಟ, ಅಳುವುದು, ಅಥವಾ ಮಗುವಿನ ಚರ್ಮ ಕೆಂಪಾಗುವಂತಹ ಸಮಸ್ಯೆಗಳಿಗೆ ನರಸಿಂಹ ಮಂತ್ರ, ದೇವಿಯ ಮಂತ್ರ, ಹನುಮಂತನ ಮಂತ್ರ, ಬೀಜಾಕ್ಷರ ಮಂತ್ರಗಳು, ಶಿವನ ಮಂತ್ರ, ಮತ್ತು ಸುಬ್ರಹ್ಮಣ್ಯನ ಮಂತ್ರಗಳನ್ನು ಬಳಸಬಹುದು. ಈ ಮಂತ್ರಗಳ ಪ್ರಭಾವವು ಮಕ್ಕಳ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವರಿಗೆ ರಕ್ಷಾ ಕವಚವನ್ನು ಒದಗಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ