ಕಾರವಾರ ಯಶವಂತಪುರ ಎಕ್ಸ್ಪ್ರೆಸ್ ಅನ್ನು ಬಂಟ್ವಾಳದಲ್ಲಿ ನಿಲ್ಲಿಸಿರುವುದುImage Credit source: tv9
ಮಂಗಳೂರು, ಏಪ್ರಿಲ್ 27: ಅಪರೂಪದಲ್ಲೇ ಅಪರೂಪದ ಮತ್ತು ಮಾನವೀಯತೆಯ ದೃಶ್ಯವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬಂಟ್ವಾಳ ರೈಲ್ವೇ ನಿಲ್ದಾಣ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ (Karwar Yesvantpur Express) ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಸೂಕ್ತ ವೈದ್ಯಕೀಯ ನೆರವು ಸಿಗದ ಕಾರಣ ಸಹಪ್ರಯಾಣಿಕ ಮಹಿಳೆಯರೇ ದಾದಿಯರಾಗಿ ಬದಲಾಗಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.
ಚಲಿಸುತ್ತಿರುವ ರೈಲಿನ್ಲಲೇ ಹೆರಿಗೆ ಘಟನೆಯ ವಿವರ
ಮೈಸೂರು ಮೂಲದ ಗರ್ಭಿಣಿಯೊಬ್ಬರು ಮಂಗಳೂರು ಜಂಕ್ಷನ್ನಿಂದ ಯಶವಂತಪುರಕ್ಕೆ ತೆರಳುವ ರೈಲನ್ನೇರಿದ್ದರು. ರೈಲು ಬಿಸಿ ರೋಡ್ ಬಳಿ ತಲುಪುತ್ತಿದ್ದಂತೆ ಮಹಿಳೆಗೆ ತೀವ್ರ ಹೆರಿಗೆ ನೋವು ಹಾಗೂ ರಕ್ತಸ್ರಾವ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲ್ವೇ ಸಿಬ್ಬಂದಿ ತಕ್ಷಣವೇ ರೈಲು ಸಂಚಾರವನ್ನು ಬಿಸಿ ರೋಡ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ಮಹಿಳಾ ಪ್ರಯಾಣಿಕರ ಸಮಯಪ್ರಜ್ಞೆ
ತುರ್ತು ವೈದ್ಯಕೀಯ ಚಿಕಿತ್ಸೆ ನೆರವಿಗಾಗಿ ಸುಮಾರು 30 ನಿಮಿಷಗಳ ಕಾಲ ಕಾಯಲಾಯಿತು. ಆದರೂ ಯಾವುದೇ ವೈದ್ಯಕೀಯ ನೆರವು ಸಕಾಲಕ್ಕೆ ಲಭ್ಯವಾಗಲಿಲ್ಲ. ಸಮಯ ವ್ಯರ್ಥವಾದರೆ ತಾಯಿ-ಮಗುವಿನ ಜೀವಕ್ಕೆ ಅಪಾಯವಿರುವುದನ್ನು ಅರಿತ ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ತಕ್ಷಣ ಕಾರ್ಯಪ್ರವೃತ್ತರಾದರು. ರೈಲಿನ ಬೋಗಿಗೆ ಬೆಡ್ಶೀಟ್ಗಳ ಮೂಲಕ ಪರದೆ ಕಟ್ಟಿ, ತಾತ್ಕಾಲಿಕ ಹೆರಿಗೆ ಕೋಣೆಯನ್ನಾಗಿ ಪರಿವರ್ತಿಸಿದರು.
ಕಾರವಾರ ಯಶವಂತಪುರ ರೈಲಲ್ಲಿ ಯಶಸ್ವಿ ಹೆರಿಗೆ
ಅನುಭವಸ್ಥ ಮಹಿಳೆಯರ ಮಾರ್ಗದರ್ಶನದಲ್ಲಿ ಜತೆಸೇರಿದ ಮಹಿಳೆಯರು ಹರಸಾಹಸ ಪಟ್ಟು ಗರ್ಭಿಣಿಗೆ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಮೊದಲ ಅಳು ಕೇಳುತ್ತಿದ್ದಂತೆ ರೈಲಿನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ನಂತರ ತಾಯಿ ಮತ್ತು ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಯಶವಂತಪುರ – ಕಾರವಾರ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ಇತ್ಯಾದಿ ವಿವರ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ