Headlines

ತುಮಕೂರಿನಲ್ಲಿ ಹಕ್ಕಿ ಜ್ವರದ ಆತಂಕ: ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ! – Kannada News | Bird Flu Alert in Tumakuru: H5N1 Virus Confirmed in Peacock Deaths; RRT Formed

ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ ಎಂಬುದು ದೃಢ!

ತುಮಕೂರು, ಮೇ 01: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿಯಾಗಿ ಸಂಭವಿಸುತ್ತಿದ್ದ ನವಿಲುಗಳ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತಪಟ್ಟ ನವಿಲುಗಳ ರಕ್ತ ಹಾಗೂ ಅಂಗಾಂಗಗಳ ಮಾದರಿಯನ್ನು FSL (ವಿಧಿ ವಿಜ್ಞಾನ ಪ್ರಯೋಗಾಲಯ) ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ H5N1 (ಹಕ್ಕಿ ಜ್ವರ) ಸೋಂಕು ಇರುವುದು ದೃಢಪಟ್ಟಿದೆ.

ಬಿಸಿಲಿನ ತಾಪ ಎಂಬ ಶಂಕೆ

ಕಳೆದ ಏಪ್ರಿಲ್ 16ರಿಂದ ತುಮಕೂರು ತಾಲೂಕಿನಾದ್ಯಂತ ನವಿಲುಗಳ ಸರಣಿ ಸಾವು ಆರಂಭವಾಗಿತ್ತು. ಕೇವಲ 11 ದಿನಗಳಲ್ಲಿ ಬರೋಬ್ಬರಿ 44 ನವಿಲುಗಳು ಮೃತಪಟ್ಟಿದ್ದವು. ಆರಂಭದಲ್ಲಿ ಜಿಲ್ಲೆಯಲ್ಲಿ ತಾಪಮಾನ ಏರುತ್ತಿದ್ದ ಕಾರಣ, ಅತಿಯಾದ ಶಾಖ ಮತ್ತು ನಿರ್ಜಲೀಕರಣದಿಂದ ಈ ಸಾವುಗಳು ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದರು. ಪ್ರಮುಖವಾಗಿ ತುಮಕೂರು ಹೊರವಲಯದ ಬೊಮ್ಮನಹಳ್ಳಿ ಮತ್ತು ಮಾಚೇನಹಳ್ಳಿ ಸುತ್ತಮುತ್ತಲಿನ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾವುಗಳು ವರದಿಯಾಗಿದ್ದವು.

ಸಾವುಗಳ ಅಸಲಿ ಕಾರಣ ಬಯಲು

ಪ್ರಾಥಮಿಕ ತನಿಖೆಯಲ್ಲಿ ಹಕ್ಕಿ ಜ್ವರದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಮೃತ ನವಿಲುಗಳ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಈಗ ಲಭ್ಯವಾಗಿರುವ ವರದಿಯು ನವಿಲುಗಳಲ್ಲಿ H5N1 ವೈರಸ್ ಇರುವುದನ್ನು ದೃಢಪಡಿಸಿದ್ದು, ಇದು ಸಾರ್ವಜನಿಕರಲ್ಲಿ ಮತ್ತು ರೈತರಲ್ಲಿ ಆತಂಕ ಮೂಡಿಸಿದೆ. ಹಕ್ಕಿ ಜ್ವರ ದೃಢಪಟ್ಟ ಬೆನ್ನಲ್ಲೇ ಪಶುಸಂಗೋಪನಾ ಇಲಾಖೆ ಮತ್ತು ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.

ಇದನ್ನೂ ಓದಿ ತುಮಕೂರಿನಲ್ಲಿ 35 ನವಿಲುಗಳು ಸಾವು! ಸುಡುವ ಬಿಸಿಲಿನ ಪರಿಣಾಮವೋ? ಹಕ್ಕಿ ಜ್ವರವೋ?

ಜಿಲ್ಲಾಡಳಿತದಿಂದ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು

ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ರ್ಯಾಪಿಡ್ ರೆಸ್ಪಾನ್ಸ್ ಟೀಮ್ (RRP) ತಂಡಗಳನ್ನು ರಚಿಸಲಾಗಿದೆ. ಐದು ಹಳ್ಳಿಗಳಿಗೆ ಪ್ರತ್ಯೇಕವಾಗಿ 5 ತಂಡಗಳನ್ನು ನಿಯೋಜಿಸಲಾಗಿದ್ದು, ಪ್ರತಿಯೊಂದು ತಂಡದಲ್ಲಿ ಒಬ್ಬ ಪಿಡಿಒ, ಇಬ್ಬರು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮತ್ತು ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳು ಇರಲಿದ್ದಾರೆ. ನವಿಲುಗಳು ಮೃತಪಟ್ಟ ಊರ್ಡಿಗೆರೆ, ಗೂಳೂರು, ಬೊಮ್ಮನಹಳ್ಳಿ, ಟಿ.ಜಿ.ಪಾಳ್ಯ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ 33 ಹಳ್ಳಿಗಳ ಮೇಲೆ ನಿಗಾ ಇರಿಸಲಾಗಿದ್ದು, ಸೋಂಕು ಹರಡದಂತೆ ಡಿಸ್‌ಇನ್‌ಫೆಕ್ಟ್ ಸ್ಪ್ರೇ ಮಾಡಲು ಸೂಚಿಸಲಾಗಿದೆ.

ಸುತ್ತಮುತ್ತಲಿನ ಕೋಳಿ ಫಾರ್ಮ್‌ಗಳಲ್ಲಿನ ನಾಟಿ ಕೋಳಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಕೋಳಿಗಳಲ್ಲೂ ಸೋಂಕು ಕಾಣಿಸಿಕೊಂಡರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ. ಕೋಳಿ ಫಾರ್ಮ್‌ಗಳಿಗೆ ಅಪರಿಚಿತರ ಪ್ರವೇಶ ನಿಷೇಧಿಸಲಾಗಿದೆ. ಯಾವುದೇ ಕೋಳಿಗಳು ಮೃತಪಟ್ಟರೆ ತಕ್ಷಣ ಮಾಹಿತಿ ನೀಡುವಂತೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *