ಕರೂರ್, ಮೇ 4: ತಮಿಳುನಾಡಿನ ಕರೂರ್ನಲ್ಲಿ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ (Vijay) ಚುನಾವಣಾ ಪ್ರಚಾರ ನಡೆಸುವಾಗ ನಿರೀಕ್ಷೆಗೂ ಮೀರಿದ ಜನರು ಸೇರಿದ್ದರು. ಇದರಿಂದ ಕಾಲ್ತುಳಿತ ಉಂಟಾಗಿ 41 ಜನರು ಪ್ರಾಣ ಕಳೆದುಕೊಂಡರು. ಕಳೆದ ವರ್ಷ ಈ ಘಟನೆ ನಡೆದಿತ್ತು. ವಿಜಯ್ ಅವರ ರ್ಯಾಲಿಯಿಂದ ಕಾಲ್ತುಳಿತ ಉಂಟಾಗಿದ್ದ ಕರೂರಿನಲ್ಲಿ ತಮಿಳುನಾಡು ವಿಕ್ಟರಿ ಪಾರ್ಟಿ (ಟಿವಿಕೆ) ಹಿನ್ನಡೆ ಸಾಧಿಸಿದೆ. ಈ ಕ್ಷೇತ್ರದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಹೊಸದಾಗಿ ರಾಜಕೀಯ ಪಕ್ಷವನ್ನು ಘೋಷಿಸಿದ್ದ ವಿಜಯ್ ಮೊದಲ ಪ್ರಯತ್ನದಲ್ಲೇ ಅತ್ಯದ್ಭುತವಾದ ಗೆಲುವಿನ ರುಚಿ ಕಂಡಿದ್ದಾರೆ. ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. 234 ಸ್ಥಾನಗಳ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 107 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಬಹುಮತಕ್ಕೆ ಬೇಕಾದ 118 ಸ್ಥಾನಗಳು ಇಲ್ಲದ ಕಾರಣದಿಂದ ಟಿವಿಕೆಗೆ ಬೇರೆ ಪಕ್ಷದ ಬೆಂಬಲ ಬೇಕಾಗಿದೆ. ಆದರೂ ಟಿವಿಕೆ ಮೊದಲ ಪ್ರಯತ್ನದಲ್ಲೇ ತಮಿಳುನಾಡಿನ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ರಾಜಕೀಯ ತಜ್ಞರನ್ನು ಕೂಡ ಅಚ್ಚರಿಗೊಳಿಸಿದೆ.
ಇದನ್ನೂ ಓದಿ: ರಾಜಕೀಯಕ್ಕೆ ಎಂಟ್ರಿ ಕೊಡಲು ಸಿನಿಮಾ ರಂಗವನ್ನೇ ವೇದಿಕೆ ಮಾಡಿಕೊಂಡ ವಿಜಯ್
ಇದೆಲ್ಲದರ ನಡುವೆ ಬಹುತೇಕರ ಗಮನ ಕರೂರಿನತ್ತ ನೆಟ್ಟಿದೆ. ಇಏ ಕರೂರಿನಲ್ಲಿ ಕಳೆದ ವರ್ಷ ವಿಜಯ್ ಭಾಷಣ ಮಾಡಿದ ರ್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಿಂದ 41 ಜನ ಪ್ರಾಣ ಕಳೆದುಕೊಂಡಿದ್ದರು. ಈ ಕ್ಷೇತ್ರವು ಈಗ ಕಠಿಣ ಸ್ಪರ್ಧೆಗೆ ಸಾಕ್ಷಿಯಾಗುತ್ತಿದೆ. ಕರೂರಿನಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ನ ಎಂ.ಆರ್. ವಿಜಯಭಾಸ್ಕರ್ 46,064 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನ ಎಎಎಸ್ಇಇ.ಎಂ. ತಿಯಾಗರಾಜನ್ 40,784 ಮತಗಳನ್ನು ಗಳಿಸಿದ್ದಾರೆ. ಟಿವಿಕೆ ಸ್ಪರ್ಧಿ 39,586 ಮತಗಳಿಂದ ಹಿಂದುಳಿದಿದ್ದಾರೆ.
ಚೆನ್ನೈನಿಂದ ಸುಮಾರು 400 ಕಿಮೀ ದೂರದಲ್ಲಿರುವ ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 9 ಮಕ್ಕಳು 41 ಜನರು ಸಾವನ್ನಪ್ಪಿದ್ದರು. ಆಯೋಜಕರು ಸುಮಾರು 10,000 ಜನರ ನಿರೀಕ್ಷೆಯಲ್ಲಿ ವ್ಯವಸ್ಥೆ ಮಾಡಿದ್ದರು. ಆದರೆ ಅದಕ್ಕಿಂತ 3 ಪಟ್ಟು ಹೆಚ್ಚು ಜನರು ಆಗಮಿಸಿದ್ದರಿಂದ ಕಾಲ್ತುಳಿತ ಉಂಟಾಗಿತ್ತು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಬಿಸಿಲಿನಲ್ಲಿ ಕಾಯುವ ಸಮಯದಲ್ಲಿ ಜನಸಮೂಹಕ್ಕೆ ಸಾಕಷ್ಟು ಆಹಾರ ಮತ್ತು ನೀರಿನ ಕೊರತೆ ಇತ್ತು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: Tamil Nadu: ದಳಪತಿ ಕಿಂಗ್ ಮೇಕರ್ ಅಲ್ಲ, ಕಿಂಗ್; ತಮಿಳುನಾಡಿಗೆ ವಿಜಯ್ ಮುಂದಿನ ಸಿಎಂ?
ಸೆಪ್ಟೆಂಬರ್ 27ರಂದು ಕರೂರ್ ಜಿಲ್ಲೆಯಲ್ಲಿ ವಿಜಯ್ ಪ್ರಚಾರ ಮಾಡುವಾಗ ಈ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯು ಭಾರತದಾದ್ಯಂತ ದೊಡ್ಡ ಆಘಾತವನ್ನು ಉಂಟುಮಾಡಿತು. ಇದರ ನಂತರ, ಅಕ್ಟೋಬರ್ 27ರಂದು ವಿಜಯ್ ಅವರು ಕರೂರ್ ಘಟನೆಯಲ್ಲಿ ಸಾವನ್ನಪ್ಪಿದ 41 ಜನರ ಕುಟುಂಬಗಳನ್ನು ಸಂತಾಪ ಸೂಚಿಸಲು ಪಣಯೂರಿಗೆ ತೆರಳಿದ್ದರು. ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಇಲ್ಲಿಯವರೆಗೆ ಟಿವಿಕೆ ಅಧ್ಯಕ್ಷ ವಿಜಯ್ ದೆಹಲಿಯ ಸಿಬಿಐ ಕಚೇರಿಯಲ್ಲಿ 3 ಬಾರಿ ಹಾಜರಾಗಿ ವಿವರಣೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ