ವಿಜಯನಗರ/ದೇವನಹಳ್ಳಿ, ಮೇ 06: ಮದುವೆ ಮಂಟಪಕ್ಕೇ ನುಗ್ಗಿ ಕಳ್ಳನೋರ್ವ ವಧುವಿಗೆ ಹಾಕಬೇಕಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳಿದ್ದ ಬ್ಯಾಗ್ ಕಳ್ಳತನ ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬ್ಯಾಗ್ ಸಮೇತ ಕಳ್ಳ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೇ 4ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 40 ಗ್ರಾಂನ ಚಿನ್ನದ ಸರ, ಅರ್ಧ ಕೆ.ಜಿ. ಬೆಳ್ಳಿ, 10 ಸಾವಿರ ನಗದು ಮತ್ತು ಎರಡು ಮೊಬೈಲ್ ಫೋನ್ಗಳನ್ನು ಖದೀಮ ದೋಚಿದ್ದಾನೆ ಎನ್ನಲಾಗಿದೆ.
- ಮದುವೆ ಮಂಟಪಕ್ಕೇ ನುಗ್ಗಿ ಬಂಗಾರ-ಬೆಳ್ಳಿ ಕದ್ದ ಕಳ್ಳ
- ಹೊಸಪೇಟೆಯ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ಘಟನೆ
- ಕಳ್ಳ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಇದನ್ನೂ ಓದಿ: ಹೊಸಪೇಟೆ ಸರಣಿ ಅಪಘಾತ; ಕನ್ಯೆ ನೋಡಲು ಹೊರಟಿದ್ದ ಆ ಮೂರು ಜನ ಸೇರಿದ್ದು ಮಸಣಕ್ಕೆ!
ಪೊಲೀಸರು ದೂರು ದಾಖಲಿಸಿಕೊಳ್ಳದ ಆರೋಪ
ಕಳ್ಳತನ ನಡೆದಿರುವ ಬಗ್ಗೆ ವಿನೋದ ಎನ್ನುವರು ದೂರು ಕೊಡಲು ಮುಂದಾಗಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಒಂದೇ ಬಿಲ್ನಲ್ಲಿ ನಾಲ್ಕು ಐಟಂಗಳು ಇವೆ, ಇದರಲ್ಲಿ ಎರಡು ಐಟಂ ಕಳ್ಳತನ ಆಗಿದೆ ಎಂದು ಹೇಳಿದ್ದೀರಿ. ಹೀಗಾಗಿ ಉಳಿದ ಎರಡು ಐಟಂ ತೆಗೆದುಕೊಂಡು ಬನ್ನಿ , ಆಮೇಲೆ ದೂರು ದಾಖಲಿಸಿಕೊಳ್ಳುತ್ತೇವೆಂದು ಪೊಲೀಸರು ಹೇಳಿದ್ದಾರಂತೆ. ಹೀಗಾಗಿ ಘಟನೆ ನಡೆದು ಎರಡು ದಿನವಾದರೂ ಚಿತ್ತವಾಡ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಬಗ್ಗೆ ಇನ್ನೂ ದುರು ದಾಖಲಾಗಿಲ್ಲ.
ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕಳವು
ತಡರಾತ್ರಿ ಬಂದ ಕಳ್ಳರು ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಕದ್ದೊಯ್ದಿರುವ ಘಟನೆ ಹೊಸಕೋಟೆ ನಗರದ ನಂದಶ್ರೀ ಕಲ್ಯಾಣ ಮಂಟಪ ಬಳಿ ನಡೆದಿದೆ. ಬೈಕ್ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಕಳ್ಳತನ ನಡೆಸಿದ್ದು, ಬೈಕ್ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವ್ಹೀಲಿಂಗ್ ಮಾಡುವ ಪುಂಡರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಕಳ್ಳರು ಬಂದಿದ್ದ ಬೈಕ್ಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಜೊತೆಗೆ ಬೈಕ್ನ ಮಾಡಿಫಿಕೇಷನ್ ಮಾಡಲಾಗಿರೋದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಸ್ಕೂಟಿಯ ಹ್ಯಾಂಡಲ್ ಲಾಕ್ನ ಕಾಲಿನಿಂದ ಮುರಿದು ಆರೋಪಿಗಳು ಕಳ್ಳತನ ನಡೆಸಿದ್ದು, ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 11:59 am, Wed, 6 May 26