Headlines

ಸೋಮನಾಥ ದೇಗುಲ: ಸರ್ದಾರ್ ಪಟೇಲರ ಕನಸು, ಭಾರತದ ಹೆಮ್ಮೆ, ಅಖಂಡತೆಯ ಸಂಕೇತ – ಪಿಎಂ ಮೋದಿ ಲೇಖನ – Kannada News | Somnath Temple, Sardar Patel’s Dream, India’s Pride, Symbol of Integrity, PM Modi blog

ಸೋಮನಾಥನ ಸನ್ನಿಧಿಯಲ್ಲಿ ನರೇಂದ್ರ ಮೋದಿImage Credit source: Narendra Modi’s X account

ಈ ವರ್ಷದ ಆರಂಭದಲ್ಲಿ ಸೋಮನಾಥ್ ಸ್ವಾಭಿಮಾನಪರ್ವ (Somnath Swabiman Parv) ಕಾರ್ಯಕ್ರಮಕ್ಕಾಗಿ ಸೋಮನಾಥ್​ಗೆ ಹೋಗಿದ್ದೆ. ಸೋಮನಾಥ ಮಂದಿರದ ಮೇಲೆ ಆದ ದಾಳಿಗೆ ಒಂದು ಸಾವಿರ ವರ್ಷ ಗತಿಸಿದ ಸಂದರ್ಭವದು. ಈಗ ಮತ್ತೊಮ್ಮೆ ಮೇ 11ಕ್ಕೆ ಅಲ್ಲಿಗೆ ಹೋಗುತ್ತಿದ್ದೇನೆ. 75 ವರ್ಷದ ಹಿಂದೆ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಈ ಮಂದಿರದ ಪುನರ್ನಿರ್ಮಾಣ ಮಾಡಿದ ಪುಣ್ಯ ಸಂದರ್ಭವದು. ಸೋಮನಾಥದ ಧ್ವಂಸ ಮತ್ತು ಪುನರ್ನಿರ್ಮಾಣವೆಂಬ ಎರಡು ಪ್ರಮುಖ ಮೈಲಿಗಲ್ಲುಗಳಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಪುಣ್ಯ.

ಸೋಮನಾಥ ನಮಗೆ ನಾಗರಿಕತೆಯ ಸಂದೇಶ ಸಾರುತ್ತದೆ. ಅದರ ಮುಂದಿರುವ ವಿಶಾಲ ಸಾಗರವು ಕಾಲಾತೀತತೆಯನ್ನು ಬಿಂಬಿಸುತ್ತದೆ. ಬಿರುಗಾಳಿ ಎಷ್ಟೇ ಭೀಕರವಾಗಿರಲಿ, ಕಡಲಬ್ಬರ ಹೇಗೇ ಇರಲಿ, ಅಲೆಗಳು ಸಮುದ್ರ ತೀರವನ್ನು ಸೇರುವಂತೆ, ಒಬ್ಬ ವ್ಯಕ್ತಿ ಎಂಥ ಸಂದರ್ಭದಲ್ಲೂ ಗೌರವ ಮತ್ತು ಬಲ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬಹುದು.

ಪ್ರಭಾಸಂ ಚ ಪರಿಕ್ರಮ್ಯ ಪೃಥ್ವಿಕ್ರಮಸಂಭವಮ್’ ಎಂದು ಹೇಳಲಾಗುತ್ತದೆ. ಅಂದರೆ, ಪ್ರಭಾಸನ (ಸೋಮನಾಥ) ಪ್ರದಕ್ಷಿಣೆ ಹಾಕಿದರೆ ಇಡೀ ಭೂಮಿಯ ಪ್ರದಕ್ಷಿಣೆಗೆ ಸಮ. ಯಾವತ್ತೂ ನಾಶವಾಗದ ನಾಗರಿಕತೆಯ ದ್ಯೋತಕವಾಗಿ ಸೋಮನಾಥದ ದರ್ಶನವಾಗುತ್ತದೆ.

ಸೋಮನಾಥನ ನಾಶಕ್ಕೆ ನಡೆಯುತ್ತಿದ್ದ ಪ್ರಯತ್ನಗಳ ನಡುವೆ ಅದನ್ನು ಕಾಪಾಡಲು ನಿಂತ ಶ್ರೇಷ್ಠರು ಅನೇಕರಿದ್ದಾರೆ. ಅವರನ್ನು ಸ್ಮರಿಸುವ ಸಂದರ್ಭ ಬಂದಿದೆ. ಲಕುಲಿಶಾ ಮತ್ತು ಸೋಮ ಸರ್ಮನ್ ಅವರು ಪ್ರಭಾಸನನ್ನು ತತ್ವಶಾಸ್ತ್ರದ ಕೇಂದ್ರವಾಗಿ ಮಾರ್ಪಡಿಸಿದರು. ವಲ್ಲಾಭಿಯ ಚಕ್ರವರ್ತಿ ಮಹಾರಾಜ 4ನೇ ಧರ್ಮಸೇನಾ ಅವರು ಶತಮಾನಗಳ ಹಿಂದೆ ಅಲ್ಲಿ ಎರಡನೇ ದೇವಸ್ಥಾನ ಕಟ್ಟಿದರು. ಭೀಮ ದೇವ, ಜಯಪಾಲ ಮತ್ತು ಆನಂದಪಾಲ ಅವರು ವೈರಿಗಳ ದಾಳಿಗಳ ವಿರುದ್ಧ ಹೋರಾಟ ನಡೆಸಿದ್ದರು. ಮಂದಿರದ ಪುನರ್ನಿರ್ಮಾಣಕ್ಕೆ ರಾಜ ಭೋಜನೂ ಸಹಾಯ ಮಾಡಿದ್ದನೆಂದು ಹೇಳಲಾಗುತ್ತದೆ.

ಕರ್ಣ ದೇವ, ಸಿದ್ಧರಾಜ ಜಯಸಿಂಹ, ಭವ ಬಹಸ್ಪತಿ, ಕುಮಾರಪಾಲ ಸೋಳಂಕಿ, ಪಾಶುಪತ ಆಚಾರ್ಯರು, ವಿಶಾಲದೇವ ವಘೇಲಾ, ತ್ರಿಪುರಾಂತಕ, ಮಹಿಪಾಲದೇವ, ರಾ ಖಾಂಗರ್, ಪುಣ್ಯಶ್ಲೋಕ್ ಅಹಲ್ಯಾಬಾಯ್ ಹೋಳ್ಕರ್, ಬರೋಡಾದ ಗಾಯಕ್ವಾಡರು, ವೀರ್ ಹಮೀರ್​ಜಿ ಗೋಹಿಲ್, ವೀರ್ ವೇಗಡಜಿ ಭಿಲ್ ಮೊದಲಾದವರ ತ್ಯಾಗ, ಬಲಿದಾನ, ಬದ್ಧತೆ, ಭಕ್ತಿ ಇತ್ಯಾದಿಯು ಸೋಮನಾಥನ ರಕ್ಷಣೆ, ಪುನರ್ನಿರ್ಮಾಣದಲ್ಲಿ ಸಹಾಯವಾಗಿವೆ.

20ನೇ ಶತಮಾನದ 40ರ ದಶಕದಲ್ಲಿ ಸ್ವಾತಂತ್ರ್ಯದ ಕೆಚ್ಚು ದೇಶಾದ್ಯಂತ ಪಸರಿಸಿತ್ತು. ಆದರೆ, ಸರ್ದಾರ್ ಪಟೇಲ್​ರಂತಹ ನಾಯಕರಿಗೆ ಸೋಮನಾಥನ ದೈನೀಯ ಪರಿಸ್ಥಿತಿ ಸರಿಕಾಣಲಿಲ್ಲ. 1947ರ ನವೆಂಬರ್ 13ರಂದು ದೀಪಾವಳಿ ಸಂರ್ಭದಲ್ಲಿ ಸರ್ದಾರ್ ಪಟೇಲರು ಸೋಮನಾಥನ ಭಗ್ನಾವಶೇಷದ ಮುಂದೆ ನಿಂತು ಶಪಥ ಮಾಡುತ್ತಾರೆ:

‘ಈ ಶುಭ ದಿನದಂದು ಸೋಮನಾಥನ ಪುನರ್ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ’. ಪಟೇಲರ ಈ ಒಂದು ಕರೆಗೆ ಗುಜರಾತಿಗಳು ಮಾತ್ರವಲ್ಲ, ಇಡೀ ಭಾರತೀಯರೇ ಸ್ಪಂದಿಸಿದರು. ದುರ್ದೈವವೆಂದರೆ, ಸರ್ದಾರ್ ಪಟೇಲರ ಆ ಅದಮ್ಯ ಆಸೆ ನೆರವೇರುವ ಮುಂಚೆಯೇ ಅವರು ಶಿವನ ಪಾದ ಸೇರಿದರು. ಅವರ ಕನಸನ್ನು ಸಾಕಾರ ಮಾಡಲು ಹಲವರು ಅವಿರತ ಯತ್ನಿಸಿದರು. ಶ್ರೀ ಕೆಎಂ ಮುನ್ಷಿ, ನವನಗರ್​ನ ಜಾಮ್​ಸಾಹೇಬ್ ಮೊದಲಾದವರು ನಿಂತು ಪುನರ್ನಿರ್ಮಾನ ಕಾರ್ಯಕ್ಕೆ ಶಕ್ತಿ ತುಂಬಿದರು. 1951ರಲ್ಲಿ ಮಂದಿರ ಸಿದ್ಧವಾಯಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪಿಎಂ ನೆಹರೂ ಅವರ ವಿರೋಧದ ನಡುವೆಯೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗಮನಾರ್ಹ.

ಸೋಮನಾಥನ ರಕ್ಷಣೆಗಾಗಿ ಬಹಳಷ್ಟು ಜನರು ಬಲಿದಾನ ಮಾಡಿದ್ದಾರೆ, ತ್ಯಾಗ ಮಾಡಿದ್ದಾರೆ. ಅದರ ಪುನರ್ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಲೆಕ್ಕವಿಲ್ಲದಷ್ಟು ಜನರು ಕೊಡುಗೆ ನೀಡಿದ್ದಾರೆ. ಸೋಮನಾಥನು ಏಕತೆಯ ಸಂಕೇತವಾಗಿ ನಿಂತಿದ್ದಾನೆ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನಾಗರಿಕತೆ ಸಾಕ್ಷಿಪ್ರಜ್ಞೆಯಾಗಿ ನೆಲಸಿದ್ದಾನೆ. ಮುಂದಿನ ಸಾವಿರ ದಿನಗಳವರೆಗೆ ಸೋಮನಾಥದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಈ ವಿಶೇಷ ಸಂದರ್ಭದಲ್ಲಿ ಸೋಮನಾಥನ ದರ್ಶನ ಮಾಡಬೇಕೆಂದು ನಮ್ಮ ದೇಶವಾಸಿಗಳಲ್ಲಿ ಕೇಳಿಕೊಳ್ಳುತ್ತೇನೆ. ಸೋಮನಾಥನ ಸನ್ನಿಧಿಯಲ್ಲಿ ನಿಂತಾಗ ಪ್ರಾಚೀನತೆಯ ವಿಚಾರಗಳು ನಿಮ್ಮನ್ನು ಎಡತಾಕುತ್ತವೆ. ವಿನಾಶಕ್ಕೆ ಯಾರೆಷ್ಟೇ ಪ್ರಯತ್ನಪಟ್ಟರೂ ನಮ್ಮ ಸಂಸ್ಕೃತಿಯನ್ನು ಸೋಲಿಸಲು ಆಗಿಲ್ಲ. ಸೋಮನಾಥನ ದರ್ಶನವು ನಿಮಗೆ ಅವಿಸ್ಮರಣೀಯವಾಗಿರಲಿದೆ.

ಜೈ ಸೋಮನಾಥ್

(ಇದು ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ವೆಬ್​ಸೈಟ್​ನಲ್ಲಿ ಬರೆದಿರುವ ಬ್ಲಾಗ್​ನ ಸಂಕ್ಷಿಪ್ತ ರೂಪ. ಇಂಗ್ಲೀಷ್​ನಿಂದ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಇವರ ಇಂಗ್ಲೀಷ್ ಲೇಖನದ ಪೂರ್ಣ ಪಠ್ಯ ಈ ಲಿಂಕ್​ನಲ್ಲಿದೆ.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *