ಮೋದಿ ಮಾರ್ಗದಲ್ಲಿ ಜಿಲೆಟಿನ್ ಪತ್ತೆ ಪ್ರಕರಣ: ತನಿಖೆಗೆ ಇಳಿದ ಎನ್ಐಎ, ರಾ ಮತ್ತು ಎನ್ಎಸ್ಜಿ!
ಬೆಂಗಳೂರು, ಮೇ 11: ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು (Gilatine) ಪತ್ತೆಯಾದ ಪ್ರಕರಣವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ದೇಶದ ಪ್ರಭಾವಿ ತನಿಖಾ ಸಂಸ್ಥೆಗಳಾದ ಎನ್ಐಎ (NIA), ರಾ (RAW) ಮತ್ತು ಕೇಂದ್ರ ಗುಪ್ತಚರ ಇಲಾಖೆ (IB) ಅಧಿಕಾರಿಗಳು ಈಗ ತನಿಖಾ ಕಣಕ್ಕೆ ಇಳಿದಿದ್ದಾರೆ.
ಮುಖ್ಯಾಂಶಗಳು
- ಜಿಲೆಟಿನ್ ಪತ್ತೆ ಪ್ರಕರಣದ ತನಿಖೆಗೆ ಎನ್ಐಎ ಮತ್ತು ರಾ ಅಧಿಕಾರಿಗಳ ಎಂಟ್ರಿ.
- ಬಾಕ್ಸ್ ಉದ್ದೇಶಪೂರ್ವಕವಾಗಿ ಇಟ್ಟಿರುವ ಶಂಕೆ; ಎನ್ಎಸ್ಜಿಯಿಂದ ಭದ್ರತಾ ಲೋಪದ ಮಾಹಿತಿ ಸಂಗ್ರಹ.
- ಸ್ಥಳದಲ್ಲಿ ಸಿಸಿಟಿವಿ ಇಲ್ಲದಿದ್ದರೂ ಪ್ರವೇಶ ದ್ವಾರಗಳ ದೃಶ್ಯಾವಳಿಗಳ ತೀವ್ರ ತಪಾಸಣೆ ಪ್ರಗತಿಯಲ್ಲಿದೆ.
ಸ್ಥಳ ಪರಿಶೀಲನೆ ಮತ್ತು ಮಾಹಿತಿ ಸಂಗ್ರಹ
ರಾಷ್ಟ್ರೀಯ ತನಿಖಾ ದಳದ (NIA) ಡಿವೈಎಸ್ಪಿ ನೇತೃತ್ವದ ತಂಡವು ಸ್ಫೋಟಕ ಪತ್ತೆಯಾದ ವಡೇರಹಳ್ಳಿ ಗೇಟ್ ಸಮೀಪದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀನಿವಾಸ್ ಗೌಡ ಅವರಿಂದ ಎನ್ಐಎ ಅಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಧಾನಿಯವರ ಭದ್ರತೆಯ ಜವಾಬ್ದಾರಿ ಹೊರುವ ಎನ್ಎಸ್ಜಿ (NSG) ಪಡೆಯ ಮುಖ್ಯಸ್ಥರು ಕೂಡ ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖಾ ಪ್ರಗತಿಯ ವರದಿಯನ್ನು ತರಿಸಿಕೊಂಡಿದ್ದಾರೆ.
ಉದ್ದೇಶಪೂರ್ವಕ ಕೃತ್ಯದ ಶಂಕೆ
ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾಥಮಿಕ ತನಿಖೆಯಲ್ಲಿ ಕೆಲವು ಆಘಾತಕಾರಿ ಅಂಶಗಳು ಹೊರಬಂದಿವೆ. ಜಿಲೆಟಿನ್ ಕಡ್ಡಿಗಳಿದ್ದ ಬಾಕ್ಸ್ಗಳನ್ನು ಯಾರೋ ಉದ್ದೇಶಪೂರ್ವಕವಾಗಿಯೇ ಅಲ್ಲಿ ಇಟ್ಟಿದ್ದಾರೆ ಎಂಬುದು ತನಿಖೆ ವೇಳೆ ದೃಢಪಟ್ಟಿದೆ. ಆದರೆ, ಸ್ಫೋಟಕಗಳನ್ನು ಯಾವ ನಿಖರ ಸಮಯದಲ್ಲಿ ತಂದು ಇರಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಫೋಟಕ ಪತ್ತೆಯಾದ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದು ತನಿಖಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸಿಸಿಟಿವಿ ಮತ್ತು ಗಡಿ ತಪಾಸಣೆ
ಘಟನಾ ಸ್ಥಳದಲ್ಲಿ ಕ್ಯಾಮೆರಾ ಇಲ್ಲದಿದ್ದರೂ, ಆ ರಸ್ತೆಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಕಗ್ಗಲಿಪುರ ಠಾಣೆ ಪೊಲೀಸರು ಮತ್ತು ಎನ್ಐಎ ತಂಡ ಜಂಟಿಯಾಗಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಟ್ಟಿವೆ. ಅಂತರರಾಜ್ಯ ಅಥವಾ ಅಂತರಜಿಲ್ಲಾ ನಂಟು ಈ ಕೃತ್ಯದ ಹಿಂದೆ ಇದೆಯೇ ಎಂಬ ನಿಟ್ಟಿನಲ್ಲಿ ‘ರಾ’ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಅತ್ಯಂತ ಬಿಗಿ ಭದ್ರತೆಯ ನಡುವೆಯೂ ಇಂತಹ ಭದ್ರತಾ ಲೋಪ ಸಂಭವಿಸಿರುವುದು ಕೇಂದ್ರ ಮತ್ತು ರಾಜ್ಯದ ಭದ್ರತಾ ಏಜೆನ್ಸಿಗಳಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ