ಬಳ್ಳಾರಿ, ಮೇ 12: ಸಂಡೂರು ತಾಲೂಕಿನ ತೋರಣಗಲ್ ಬಳಿ ಸ್ಥಾಪನೆಯಾಗಿರುವ ದೇಶದ ಎರಡನೇ ಅತೀ ದೊಡ್ಡ ಖಾಸಗಿ ಉಕ್ಕು ಉತ್ಪಾದಕ ಕಂಪನಿ JSW ಜಿಂದಾಲ್ (JSW Jindal), 2018ರಿಂದಲೂ ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ಅಭಿವೃದ್ಧಿ ತೆರಿಗೆಯನ್ನು (Tax) ಬಾಕಿ ಉಳಿಸಿಕೊಂಡಿದೆ. ತೋರಣಗಲ್ಲು, ವಡ್ಡು, ಬನ್ನಿಹಟ್ಟಿ ಗ್ರಾಮ ಪಂಚಾಯಿತಿಗಳಿಗೆ ಸರಿಸುಮಾರು 20 ಕೋಟಿ ರೂ.ಗೂ ಅಧಿಕ ತೆರಿಗೆ ಪಾವತಿಸದೆ ಜಿಂದಾಲ್ ಕಂಪನಿ ಗಪ್ಚುಪ್ ಕುಳಿತಿದೆ. ಹಲವು ಬಾರಿ ನೋಟಿಸ್ ನೀಡಿದರೂ ಕಂಪನಿ ಡೋಂಟ್ ಕೇರ್ ಧೋರಣೆ ತಾಳಿರುವುದು ಸ್ಥಳೀಯ ಆಡಳಿತ ಅಸಮಾಧಾನಕ್ಕೆ ಕಾರಣವಾಗಿದೆ.
ಮುಖ್ಯಾಂಶಗಳು
- 2018ರಿಂದ ಈವರಗೆ ತೆರಿಗೆ ಬಾಕಿ ಉಳಿಸಿಕೊಂಡ ಜಿಂದಾಲ್ ಕಂಪನಿ
- ತೆರಿಗೆ ವಸೂಲಿ ಮಾಡಲು ಸ್ಥಳೀಯ ಆಡಳಿತಗಳು ಸರ್ಕಸ್
- ಜಿಂದಾಲ್ ವಿರುದ್ಧ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಆಕ್ರೋಶ
ಗ್ರಾಮ ಪಂಚಾಯತ್ವಾರು ಬಾಕಿ ವಿವರ
- ತೋರಣಗಲ್ಲು ಗ್ರಾಪಂ: 2018-19ರಿಂದ ಇಲ್ಲಿಯವರೆಗೆ 20,23,94,216 ರೂ
- ಬನ್ನಿಹಟ್ಟಿ ಗ್ರಾಪಂ: 2024-25ರಿಂದ 2025-26ರವರೆಗೆ 60,53,036 ರೂ
- ವಡ್ಡು ಗ್ರಾಪಂ: 2018-19ರಿಂದ 2025-26ರವರೆಗೆ ಕೋಟ್ಯಂತರ ರೂ ತೆರಿಗೆ ಪಾವತಿ ಬಾಕಿ ಇದೆ.
ತೋರಣಗಲ್ಲು, ವಡ್ಡು, ಬನ್ನಿಹಟ್ಟಿ ಗ್ರಾಮ ಪಂಚಾಯತ್ಗಳಿಗೆ ಪಾವತಿಸಬೇಕಿರುವ ತೆರಿಗೆಯ ವಸೂಲಿಗೆ ನೋಟಿಸ್ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: ಗದಗದ ಸರ್ಕಾರಿ ಕಚೇರಿಗೆ ಕತ್ತಲೆ ಭಾಗ್ಯ: ಸಾರ್ವಜನಿಕರು, ಸಿಬ್ಬಂದಿ ಮೊಬೈಲ್ ಟಾರ್ಚೇ ಇಲ್ಲಿ ಬೆಳಕು!
1994ರಲ್ಲಿ ವಿಜಯನಗರ ಸ್ಟೀಲ್ ಲಿಮಿಟೆಡ್ ಹೆಸರಲ್ಲಿ ಆರಂಭವಾದ ಜಿಂದಾಲ್, ಸಾವಿರಾರು ಎಕರೆಯಲ್ಲಿ ಕಬ್ಬಿಣ, ಸಿಮೆಂಟ್, ಪೇಂಟ್ ಸೇರಿ ಹಲವು ಉದ್ಯಮಗಳನ್ನು ನಡೆಸುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಹೆಗ್ಗಳಿಕೆ ಇದ್ದರೂ, ತೆರಿಗೆ ವಸೂಲಿ ಮಾಡುವುದು ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಸವಾಲಾಗಿದೆ.
ಜಿಂದಾಲ್ ಕಾರ್ಯವೈಖರಿ ಬಗ್ಗೆ ಸಿಎಂ ಮತ್ತು ಡಿಸಿಎಂ ಗಮನಕ್ಕೆ ತರುತ್ತೇನೆ ಎಂದ ಶಾಸಕ ಭರತ್ ರೆಡ್ಡಿ
ಇನ್ನು ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ, ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ, ಇದೀಗ ತೆರಿಗೆಯನ್ನೂ ಪಾವತಿಸುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. JSW ಕಾರ್ಯವೈಖರಿಯನ್ನು ಸಿಎಂ ಮತ್ತು ಡಿಸಿಎಂ ಗಮನಕ್ಕೆ ತರುತ್ತೇನೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.