ಇಂದಿನ ವೇಗದ ಜೀವನಶೈಲಿಯಲ್ಲಿ, ಅನೇಕ ದಂಪತಿಗಳು ಮಕ್ಕಳನ್ನು ಪಡೆಯುವುದನ್ನು ಮುಂದೂಡಲು ನಿರ್ಧರಿಸುತ್ತಾರೆ. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವ ಅಥವಾ ವೈಯಕ್ತಿಕ ಬೆಳವಣಿಗೆಗೆ ಗಮನಹರಿಸುವ ಬಯಕೆಯಿಂದ, ಇನ್ನೊಂದು ಮೂರು ವರ್ಷ ಬೇಡ, ಇನ್ನೊಂದು ಎರಡು ವರ್ಷ ಬೇಡ ಎಂಬಂತಹ ಮಾತುಗಳು ಸರ್ವೇ ಸಾಮಾನ್ಯವಾಗಿವೆ. ಆದರೆ, ಧಾರ್ಮಿಕ ಮತ್ತು ಜ್ಯೋತಿಷ್ಯದ ದೃಷ್ಟಿಕೋನದಿಂದ, ಸಂತಾನವನ್ನು ನಿರ್ಲಕ್ಷಿಸುವುದು ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ಹಲವು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಸಂತಾನವನ್ನು ವಿಳಂಬಗೊಳಿಸಿದರೆ ವೃದ್ಧಾಪ್ಯದಲ್ಲಿ ಅದರ ಫಲವನ್ನು ಅನುಭವಿಸಬೇಕಾಗುತ್ತದೆ. ಮಕ್ಕಳು ಚಿಕ್ಕವರಿದ್ದಾಗ ತಂದೆ-ತಾಯಿ ವಯಸ್ಸಾಗಿದ್ದರೆ, ಅವರ ಪಾಲನೆ-ಪೋಷಣೆ ಕಷ್ಟವಾಗುತ್ತದೆ. ಇದು ಮಕ್ಕಳಿಗೂ, ಪೋಷಕರಿಗೂ ದ್ರೋಹ ಮಾಡಿದಂತೆ ಆಗುತ್ತದೆ. ಇಂತಹ ನಿರ್ಲಕ್ಷ್ಯದಿಂದ ಮುಖ್ಯವಾಗಿ ಕಾಡತಕ್ಕದ್ದು ಸರ್ಪ ಶಾಪ. ಈ ಶಾಪವು ಬೆನ್ನಿಗೆ ಅಂಟಿಕೊಂಡು ದೇಹಕ್ಕೆ ಹಾನಿ ಮಾಡಬಹುದು. ಕಡೆಯ ಕಾಲದಲ್ಲಿ ಮಕ್ಕಳಿದ್ದರೂ ಸಹ, ಒಂಟಿತನ ಕಾಡಿ ಯಾರೂ ನೋಡಿಕೊಳ್ಳುವವರಿಲ್ಲದೆ ದುರ್ಬರವಾಗಿ, ನರಕ ಸದೃಶ ಜೀವನವನ್ನು ಎದುರಿಸಬೇಕಾಗಬಹುದು, ಏಕೆಂದರೆ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ಈ ದೋಷವು ಕಾಡುತ್ತಿರುತ್ತದೆ.
ದೈವಾನುಗ್ರಹದಿಂದ ವಿವಾಹ ಸಂಭವಿಸುತ್ತದೆ, ಏಕೆಂದರೆ ಮದುವೆ ಸ್ವರ್ಗದಲ್ಲಿ ನಿಗದಿಯಾಗಿದೆ ಎಂಬ ನಂಬಿಕೆ ಇದೆ. ವಿವಾಹದ ನಂತರ ಸಂತಾನ, ನಂತರ ಜೀವನ, ಮುಕ್ತಿ ಮತ್ತು ಮೋಕ್ಷ – ಇವೆಲ್ಲವೂ ಒಂದಕ್ಕೊಂದು ಸಂಬಂಧಿಸಿವೆ. ಜ್ಯೋತಿಷ್ಯದಲ್ಲಿ, ಐದನೇ ಮನೆ ಸಂತಾನ ಸ್ಥಾನವಾಗಿದೆ. ಗುರು ಗ್ರಹವು ಸಂತಾನದ ಮುಖ್ಯ ಕಾರಕನಾಗಿದ್ದಾನೆ. ಸಂತಾನವನ್ನು ನಿರ್ಲಕ್ಷಿಸಿದಾಗ, ಗುರು ಕೋಪಗೊಳ್ಳುತ್ತಾನೆ. ಈ ಕೋಪವು ಗಂಡ ಮತ್ತು ಹೆಂಡತಿ ಇಬ್ಬರಿಗೂ ಕಷ್ಟಗಳನ್ನು ತರಬಹುದು. ಗುರು ನೀಚನಾಗಿದ್ದಾಗ, ವಕ್ರಿಯಾಗಿದ್ದಾಗ ಅಥವಾ ಗುರುವಿನ ಸ್ಥಿತಿ ಕೆಟ್ಟದಾಗಿದ್ದಾಗ, ಗರ್ಭಸ್ರಾವ ಸಂಭವಿಸಿದರೆ, ಅದು ಸಂಪೂರ್ಣವಾಗಿ ಸರ್ಪ ದೋಷಕ್ಕೆ ಕಾರಣವಾಗುತ್ತದೆ. ಇದನ್ನು ಸಂತಾನ ದೋಷ ಅಥವಾ ಸರ್ಪ ದೋಷ ಎಂದೂ ಕರೆಯುತ್ತಾರೆ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ
ಇದಲ್ಲದೆ, ಶನಿ ಗ್ರಹವು ಐದನೇ ಮನೆಯನ್ನು ದೃಷ್ಟಿಸಿದರೆ, ಶಾಶ್ವತವಾಗಿ ಸಂತಾನವಿಲ್ಲದ ಪರಿಸ್ಥಿತಿ ಉಂಟಾಗಬಹುದು. ಕೆಲವರು ಇನ್ನು ಕೆಲವು ವರ್ಷಗಳು ಹೋಗಲಿ ಎಂದು ಮಕ್ಕಳನ್ನು ಮುಂದೂಡುತ್ತಾರೆ, ಆದರೆ ಆ ಸಮಯದಲ್ಲಿ ಶನಿ ಐದನೇ ಮನೆಯನ್ನು ನೋಡಿದರೆ ಶಾಶ್ವತವಾಗಿ ಮಕ್ಕಳಿಲ್ಲದಂತೆ ಆಗಬಹುದು. ಒಂದು ಅಬಾರ್ಷನ್ ಅಥವಾ ಮಗು ಬೇಡವೆಂದು ನಿರ್ಧರಿಸಿದ ನಂತರ, ಮಕ್ಕಳಿಲ್ಲದಿರಲು ಇದು ಒಂದು ಕಾರಣವಾಗಿರಬಹುದು. ಗರ್ಭಪಾತಕ್ಕೆ ಮಂಗಳ ಗ್ರಹವು ಕಾರಣನಾಗುತ್ತಾನೆ. ಮಂಗಳನ ಅನುಗ್ರಹ ಕಡಿಮೆಯಾದಾಗ ಗರ್ಭಪಾತವಾಗುತ್ತದೆ. ಮಂಗಳನ ಕೋಪವು ಪಿತೃ ದೋಷಗಳನ್ನು ತರಬಹುದು.
ಹಾಗಾಗಿ, ಮಕ್ಕಳು ಯಾವ ಕಾಲಕ್ಕೆ ಆಗಬೇಕೋ ಆ ಕಾಲಕ್ಕೆ ಆಗುವುದು ಶುಭ. ಒತ್ತಡದಿಂದ ಅಥವಾ ಮನಸ್ಸಿನಿಂದ ಮಕ್ಕಳನ್ನು ಮುಂದೂಡುವುದು ಶುಭವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ