ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ (Vijay) ಈಗ ತಮಿಳುನಾಡಿನ ಸಿಎಂ ಆಗಿದ್ದಾರೆ. ಸೂಪರ್ ಸ್ಟಾರ್ ಆಗಿ ಸಿಕ್ಕ ಪ್ರಚಾರ, ಜನಪ್ರಿಯತೆಯನ್ನು ಅವರು ರಾಜಕೀಯ ಪ್ರವೇಶಕ್ಕೆ ಮೆಟ್ಟಿಲಾಗಿ ಬಳಸಿಕೊಂಡಿದ್ದು ಮಾತ್ರವಲ್ಲದೆ ಸಿಎಂ ಸಹ ಆಗಿದ್ದಾರೆ. ವಿಜಯ್ ಅವರ ಈ ಯಶಸ್ಸು, ಇತರೆ ಕೆಲವು ಸೂಪರ್ ಸ್ಟಾರ್ಗಳಲ್ಲಿ ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಹುಟ್ಟಿಸಿರುವುದು ಸುಳ್ಳಲ್ಲ. ವಿಜಯ್ ಸಿಎಂ ಆದ ಬೆನ್ನಲ್ಲೆ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಜೂ ಎನ್ಟಿಆರ್ ಸಹ ತಮ್ಮ ರಾಜಕೀಯ ಎಂಟ್ರಿಯನ್ನು ಪರೋಕ್ಷವಾಗಿ ಪ್ರದರ್ಶಿಸಿದ್ದಾರೆ. ಅವರ ಹುಟ್ಟುಹಬ್ಬದಂದು ಮಹತ್ ಕಾರ್ಯವೊಂದಕ್ಕೆ ಜೂ ಎನ್ಟಿಆರ್ ಕೈ ಹಾಕಿದ್ದಾರೆ.
ಜೂ ಎನ್ಟಿಆರ್ ಮೇ 20 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಆ ದಿನ ಅವರ ಅಭಿಮಾನಿಗಳ ಸಂಘಗಳ ನೆರವಿನೊಂದಿಗೆ ದೊಡ್ಡ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದಾರೆ. ಆ ದಿನ ಜೂ ಎನ್ಟಿಆರ್ ಹೆಸರಲ್ಲಿ 100 ಕೋಟಿ ಮೌಲ್ಯದ ‘ಸೋಷಿಯಲ್ ವೆಲ್ಫೇರ್ ಫಂಡ್’ ಒಂದನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಈ ವೆಲ್ಫೇರ್ ಫಂಡ್ ಮೂಲಕ ಎರಡೂ ತೆಲುಗು ರಾಜ್ಯಗಳಲ್ಲಿ ತಮ್ಮ ಅಭಿಮಾನಿ ಸಂಘಗಳನ್ನು ಬಳಸಿಕೊಂಡು ಜೂ ಎನ್ಟಿಆರ್ ಅವರು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ನಟರ ‘ಸಾಮಾಜಿಕ ಕಾರ್ಯ’ದ ದೂರಗಾಮಿ ಪ್ರತಿಫಲ ಏನೆಂದು ಎಲ್ಲರಿಗೂ ಗೊತ್ತಿರುವುದೇ, ನಟರು ಸಾಮಾಜಿಕ ಕಾರ್ಯಕ್ಕೆ ಇಳಿದರೆಂದರೆ ಅದರ ಹಿಂದೆ ರಾಜಕೀಯ ಮಹತ್ವಾಕಾಂಕ್ಷೆ ಬಹುತೇಕ ಖಾತ್ರಿ.
ಇದನ್ನೂ ಓದಿ:ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್
ಅಂದಹಾಗೆ ಜೂ ಎನ್ಟಿಆರ್ ಅವರಿಗೆ ರಾಜಕೀಯ ಹೊಸದಲ್ಲ. ಅವರು ಯುವಕರಾಗಿದ್ದಾಗಲೇ ರಾಜಕೀಯಕ್ಕೆ ಧುಮುಕಿದವರು. ಈಗ ಆಂಧ್ರದಲ್ಲಿ ಆಡಳಿತದಲ್ಲಿರುವ ಟಿಡಿಪಿ ಪಕ್ಷದ ಯುವ ರಾಜ್ಯಾಧ್ಯಕ್ಷರು ಸಹ ಆಗಿದ್ದರು ಜೂ ಎನ್ಟಿಆರ್. ಟಿಡಿಪಿಯ ಸ್ಟಾರ್ ಪ್ರಚಾರಕರಾಗಿಯೂ ಕೆಲಸ ಮಾಡಿದ್ದಾರೆ. ಅಖಂಡ ಆಂಧ್ರ ಪ್ರದೇಶದ ಹಲವು ನಗರಗಳನ್ನು ಸುತ್ತಿ ಟಿಡಿಪಿ ಪರವಾಗಿ ಪ್ರಚಾರವನ್ನೂ ಸಹ ಜೂ ಎನ್ಟಿಆರ್ ಮಾಡಿದ್ದಾರೆ. ಜೂ ಎನ್ಟಿಆರ್ ಅವರನ್ನು ಪಕ್ಷದ ಆಸ್ತಿಯೆಂದು ಚಂದ್ರಬಾಬು ನಾಯ್ಡು ಬಣ್ಣಿಸಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಪಕ್ಷದ ಮುಖಂಡರಾದ ಚಂದ್ರಬಾಬು ನಾಯ್ಡು ಮತ್ತು ನಂದಮೂರಿ ಬಾಲಕೃಷ್ಣ ಅವರುಗಳು ಜೂ ಎನ್ಟಿಆರ್ ಅವರನ್ನು ಪಕ್ಷದಿಂದ ದೂರ ಇರಿಸಿದ್ದಾರೆ.
ಆದರೆ ಜೂ ಎನ್ಟಿಆರ್ ಅವರು ತಮ್ಮದೇ ಸ್ವಂತ ಪಕ್ಷ ಕಟ್ಟುವ ಯೋಜನೆ ಹಾಕಿಕೊಂಡಂತಿದ್ದು, ಅದೇ ಕಾರಣದಿಂದ ಈಗ ಅಭಿಮಾನಿ ಸಂಘಗಳ ಮೂಲಕ ರಾಜ್ಯದಾದ್ಯಂತ ಸಾಮಾಜ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ವಿಜಯ್ ಸಹ ತಮ್ಮ ಅಭಿಮಾನಿ ಸಂಘಟನೆ ‘ವಿಜಯ್ ಮಕ್ಕಳ್ ಇಯಕ್ಕಂ’ ಮೂಲಕ ಸಾಮಾಜಿಕ ಕಾರ್ಯವನ್ನು ಮಾಡಿ, ಸಂಘವನ್ನು ಬಲಪಡಿಸಿ ಅದರ ಬಲದಿಂದಲೇ ಟಿವಿಕೆ ಪಕ್ಷವನ್ನು ಕಟ್ಟಿ ಬೆಳೆಸಿ ಈಗ ಸಿಎಂ ಆಗಿದ್ದಾರೆ. ಜೂ ಎನ್ಟಿಆರ್ ಸಹ ಇದೇ ಹಾದಿಯಲ್ಲಿ ನಡೆಯುವ ನಿರ್ಧಾರ ಮಾಡಿದಂತಿದ್ದಾರೆ.
ಜೂ ಎನ್ಟಿಆರ್ ಭಾರಿ ಅಭಿಮಾನಿಗಳನ್ನು ಹೊಂದಿರುವ ನಟ. ಜೊತೆಗೆ ಅದ್ಭುತ ಮಾತುಗಾರ ಸಹ. ಅವರ ಕುಟುಂಬವೇ ರಾಜಕೀಯ ಕುಟುಂಬ ಹಾಗಾಗಿ ರಾಜಕೀಯ ಪಟ್ಟುಗಳು ಅವರಿಗೆ ಹೊಸದೇನೂ ಅಲ್ಲ. ಈಗಾಗಲೇ ಸಚಿವರಾಗಿರುವ, ಶಾಸಕರಾಗಿರುವ ಹಲವು ರಾಜಕಾರಣಿಗಳು ಜೂ ಎನ್ಟಿಆರ್ ಅವರಿಗೆ ಬಲು ಹತ್ತಿರದವರು. ಅಲ್ಲದೆ ಯಾವುದೇ ವಿವಾದ ಇಲ್ಲದ, ಎಲ್ಲ ರಾಜಕೀಯ ಪಕ್ಷಗಳು ಸಮಾನ ಗೌರವ ಕೊಡುವ ವ್ಯಕ್ತಿಯೂ ಅವರಾಗಿದ್ದಾರೆ. ಹಾಗಾಗಿ ಅವರು ರಾಜಕೀಯಕ್ಕೆ ಬಂದರೆ ಗೆಲುವು ತೀರ ಕಷ್ಟವೇನೂ ಅಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ