Headlines

‘ಕೆಜಿಎಫ್ 3’ ಸದ್ಯಕ್ಕಿಲ್ಲ, ‘ಡ್ರ್ಯಾಗನ್’ ಬಳಿಕ ‘ಸಲಾರ್ 2’ ಕೆಲಸ ಶುರು; ಪ್ರಶಾಂತ್ ನೀಲ್ ಸ್ಪಷ್ಟನೆ – Kannada News | Prashanth Neel will shoot Salaar 2 after Jr NTR starrer Dragon movie KGF 3 not soon

ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಕಾಂಬಿನೇಷನ್‌ನ ‘ಸಲಾರ್: ಪಾರ್ಟ್ 1 – ಸೀಸ್‌ಫೈರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಈಗ ಚಿತ್ರದ ಮುಂದಿನ ಭಾಗ ‘ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ’ (Salaar 2) ಚಿತ್ರಕ್ಕಾಗಿ ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ, ಈ ಬಿಗ್ ಬಜೆಟ್ ಸೀಕ್ವೆಲ್ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮಹತ್ವದ ಅಪ್ಡೇಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ‘ಕೆಜಿಎಫ್ 3’ (KGF 3) ಕುರಿತು ಅಪ್​ಡೇಟ್ ತಿಳಿಯಲು ಕಾದಿದ್ದ ಅಭಿಮಾನಿಗಳಿಗೆ ಬೇಸರ ಆಗಿದೆ.

ಪ್ರಶಾಂತ್ ನೀಲ್ ಸದ್ಯ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅಭಿನಯದ ‘ಡ್ರ್ಯಾಗನ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವು 2027ರ ಜೂನ್ 11ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ಈ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರದ ಚಿತ್ರೀಕರಣ ಮುಗಿದ ತಕ್ಷಣವೇ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ‘ಸಲಾರ್ 2’ ಚಿತ್ರದ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

‘ಗಲಾಟಾ ಪ್ಲಸ್’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ನೀಲ್, ‘ಡ್ರ್ಯಾಗನ್ ಸಿನಿಮಾ ಮುಗಿದ ತಕ್ಷಣವೇ ‘ಸಲಾರ್ 2’ ಶೂಟಿಂಗ್ ಆರಂಭವಾಗಲಿದೆ’ ಎಂದಿದ್ದಾರೆ. ಇದೇ ವೇಳೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಕೆಜಿಎಫ್: ಚಾಪ್ಟರ್ 3’ ಚಿತ್ರದ ಬಗ್ಗೆಯೂ ಮಾತನಾಡಿದ ಅವರು, ‘ಕೆಜಿಎಫ್ ಫ್ರಾಂಚೈಸಿಗೆ ನಾನು ಯಾವಾಗ ಮರಳುತ್ತೇನೆ ಎಂಬ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ತಿಳಿಸಿದ್ದಾರೆ.

ತಮ್ಮ ಡಾರ್ಕ್ ಥೀಮ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್, ‘ಡ್ರ್ಯಾಗನ್’ ಚಿತ್ರದ ನಂತರ ಈ ಶೈಲಿಯ ಸಿನಿಮಾಗಳಿಗೆ ವಿರಾಮ ನೀಡಲಿದ್ದಾರಂತೆ. ಮುಂದಿನ ದಿನಗಳಲ್ಲಿ ಹೆಚ್ಚು ಬಣ್ಣಗಳಿಂದ ಕೂಡಿರುವ ಪೌರಾಣಿಕ ಕಥಾಹಂದರ ಹೊಂದಿರುವ ಚಿತ್ರ ಸರಣಿಯೊಂದನ್ನು ಮಾಡಲು ಅವರು ಸಿದ್ಧತೆ ನಡೆಸುತ್ತಿದ್ದಾರೆ. ಇದರೊಂದಿಗೆ, ಒಂದು ಸಣ್ಣ ಬಜೆಟ್‌ನ ಭಾವನಾತ್ಮಕ ಕೌಟುಂಬಿಕ ಡ್ರಾಮಾ ಸಿನಿಮಾ ಮಾಡುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಕೆಗಳಿಂದ ರೋಸಿಹೋದ ಪ್ರಶಾಂತ್ ನೀಲ್, ಬದಲಾಗುವ ನಿರ್ಧಾರ ಮಾಡಿದ ನಿರ್ದೇಶಕ

‘ಸಲಾರ್ 1’ ಚಿತ್ರದಲ್ಲಿ ದೇವ (ಪ್ರಭಾಸ್) ಮತ್ತು ವರದರಾಜ ಮನ್ನಾರ್ (ಪೃಥ್ವಿರಾಜ್) ನಡುವಿನ ಸ್ನೇಹ ಹಾಗೂ ರಾಜಕೀಯ ದ್ರೋಹದ ಕಥೆಯನ್ನು ತೋರಿಸಲಾಗಿತ್ತು. ಎರಡನೇ ಭಾಗದಲ್ಲಿ ಇವರಿಬ್ಬರ ನಡುವಿನ ಮಹಾ ಯುದ್ಧ ಮತ್ತು ಸಿಂಹಾಸನಕ್ಕಾಗಿ ನಡೆಯುವ ಸಂಘರ್ಷವನ್ನು ಅನಾವರಣಗೊಳಿಸಲಾಗುತ್ತದೆ. ಚಿತ್ರದಲ್ಲಿ ಜಗಪತಿ ಬಾಬು, ಬಾಬಿ ಸಿಂಹ, ಈಶ್ವರಿ ರಾವ್, ಶ್ರುತಿ ಹಾಸನ್ ಮತ್ತು ಶ್ರಿಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *