Headlines

ಆಸ್ತಿಗಾಗಿ ನಿವೃತ್ತ ವಾಯುಪಡೆ ಅಧಿಕಾರಿಯನ್ನು ಕೊಂದ ಪುತ್ರರು – Kannada News | Retired Airman Killed, Sons Orchestrated Murder for Property

ಘಾಜಿಯಾಬಾದ್, ಜ.2: ನಿವೃತ್ತ ಭಾರತೀಯ ವಾಯುಪಡೆಯ (ಐಎಎಫ್) ಸಿಬ್ಬಂದಿಯೊಬ್ಬರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​​ನ (Ghaziabad) ಬಾಗ್‌ಪತ್ ಜಿಲ್ಲೆಯಲ್ಲಿ ನಡೆದಿದೆ. ಸ್ವಂತ ಮಕ್ಕಳೇ ಈ ಕೊಲೆಯನ್ನು ಮಾಡಿಸಿದ್ದಾರೆ ಎಂದು ಹೇಳಲಾಗಿದೆ. ಕೊಲೆ ಮಾಡಿದ ಐದು ದಿನದ ನಂತರ ಈ ವಿಚಾರ ತಿಳಿದಿದೆ. ಆಸ್ತಿಗಾಗಿ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಡಿಸೆಂಬರ್ 26 ರಂದು ಭಾರತೀಯ ವಾಯುಪಡೆಯ ನಿವೃತ್ತ ಸಿಬ್ಬಂದಿ ಯೋಗೇಶ್ ಕುಮಾರ್ ತಮ್ಮ ನಿವಾಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್​​​ ವರದಿಯಲ್ಲಿ ಹೇಳಲಾಗಿದೆ.

ಯೋಗೇಶ್ ಕುಮಾರ್ ಅವರ ಪುತ್​ರರು ತಂದೆಯ ಕೊಲೆಗೆ ಸುಪಾರಿ ನೀಡಿದರು ಎಂದು ಹೇಳಲಾಗಿದೆ. ಯೋಗೇಶ್ ಕುಮಾರ್ ಮನೆಗೆ ಬರುತ್ತಿದ್ದ ವೇಳೆ ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಎರಡು ಗುಂಡು ಹಾರಿಸಿ, ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಅವರ ಮಕ್ಕಳೇ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1) ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ಲೋಣಿಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಿದ್ಧಾರ್ಥ ಗೌತಮ್ ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಯೋಗೇಶ್ ತನ್ನ ಪುತ್ರರಾದ ನಿತೇಶ್ ಮತ್ತು ಗುಡ್ಡು ಮನೆಯನ್ನು ಮಾರಾಟ ಮಾಡಲು ಒತ್ತಾಯಿಸುತ್ತಿದ್ದನೆಂದು ಈ ಹಿಂದೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರು ಎಂಬ ವಿಚಾರ ಬಹಿರಂಗವಾಗಿದೆ. ಆಸ್ತಿಯ ವಿವಾದಕ್ಕೆ ಅವರನ್ನು ಕೊಲೆ ಮಾಡಿಸಿರಬಹುದು ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. ಪೊಲೀಸರು ಹೇಳುವಂತೆ ಪುತ್ರರು ತಮ್ಮ ನೆರೆಮನೆಯ ಅರವಿಂದ್ ಕುಮಾರ್ (32) ಎಂಬಾತಿಗೆ ತಂದೆಯನ್ನು ಕೊಲೆ ಮಾಡಲು 5 ಲಕ್ಷ ರೂ. ನೀಡಿದರು. ಅರವಿಂದ್ ಕುಮಾರ್ ತನ್ನ ಸೋದರ ಮಾವ ನವೀನ್ ಜೊತೆಗೆ ಸೇರಿ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಹೊಸ ರೂಲ್ಸ್​: ಫ್ರಿಡ್ಜ್, ಟಿವಿ ಖರೀದಿಸುವ ಮುನ್ನ ಸ್ಟಾರ್ ಲೇಬಲ್ ಕಡ್ಡಾಯವಾಗಿ​​ ಗಮನಿಸಲೇಬೇಕು

ವಾಯುಪಡೆಯ ನಿವೃತ್ತ ಸಿಬ್ಬಂದಿ ಯೋಗೇಶ್ ಕುಮಾರ್ ಅವರಿಗೆ ಅವರ ಮಕ್ಕಳೇ ಮನೆ ಖಾಲಿ ಮಾಡುವಂತೆ ಅನೇಕ ಬಾರಿ ಬೆದರಿಕೆ ಹಾಕಿದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ವಿಚಾರಣೆಯ ಸಮಯದಲ್ಲಿ, ಅರವಿಂದ್ ಮತ್ತು ನವೀನ್, ಯೋಗೇಶ್ ಮೇಲೆ ಎರಡು ಗುಂಡು ಹಾರಿಸಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾರೆ ಎಂದು ಎಸಿಪಿ ಸಿದ್ಧಾರ್ಥ ಗೌತಮ್ ಹೇಳಿದ್ದಾರೆ. ಬುಧವಾರ ಸಂಜೆ ಅರವಿಂದ್ ಅವರನ್ನು ಬಂಧಿಸಿ ಗುರುವಾರ ಗಾಜಿಯಾಬಾದ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತು. ಅರವಿಂದ್ ಬಳಿಯಿಂದ ಪೊಲೀಸರು .315 ಬೋರ್ ಕಂಟ್ರಿ ನಿರ್ಮಿತ ಪಿಸ್ತೂಲ್, ಲೈವ್ ಕಾರ್ಟ್ರಿಡ್ಜ್‌ಗಳು, ಬಳಸಿದ ಕಾರ್ಟ್ರಿಡ್ಜ್‌ಗಳು, ಕೊಲೆಗೆ ಬಳಸಲಾದ ಕಬ್ಬಿಣದ ಪೈಪ್ ಮತ್ತು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಅರವಿಂದ್ ಕೊಲೆ, ಶಸ್ತ್ರಾಸ್ತ್ರ ಕಾಯ್ದೆ, ದರೋಡೆಕೋರ ಕಾಯ್ದೆ ಮತ್ತು ವಂಚನೆಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ದೀರ್ಘ ಅಪರಾಧ ಇತಿಹಾಸವನ್ನು ಹೊಂದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *