Headlines

TV9 Kannada News Live: ವರ್ಕ್ ಫ್ರಮ್ ಹೋಂಗೆ ಐಟಿ ಕಂಪನಿಗಳ ವಿರೋಧ: ಮಳೆಗಾಗಿ ಶಾಸಕ ಡಾ. ರಂಗನಾಥ್ ವಿಶೇಷ ಪೂಜೆ, ಈ ಹೊತ್ತಿನ ಟಾಪ್ ಸುದ್ದಿಗಳು – Kannada News | Uber Cab Driver Brutally Assaulted in Wilson Garden; Actress Radhika Narayan Flashes Her New Luxury Car

ಬೆಂಗಳೂರು, ಮೇ.23: ಮೋದಿ ವರ್ಕ್ ಫ್ರಮ್ ಹೋಂಗೆ ಕರೆಗೆ ಗ್ರೇಟರ್ ಬೆಂಗಳೂರು ಐಟಿ ಕಂಪನಿ ಹಾಗೂ ಇಂಡಸ್ಟ್ರೀಸ್ ಅಸೋಸಿಯೇಷನ್ ನಿಂದ ವಿರೋಧ ವ್ಯಕ್ತವಾಗಿದೆ. ಮಳೆಗಾಗಿ ಯಡಿಯೂರು ಸಿದ್ಧಲಿಂಗೇಶ್ವರನಿಗೆ ಹೋಮ-ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ. ರಂಗನಾಥ್. ಸಿಲಿಕಾನ್ ಸಿಟಿಯಲ್ಲಿ ನಡುರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ವಿಡಿಯೋ ಕೂಡ ವೈರಲ್​ ಆಗಿದೆ. ಇನ್ನು ಹೊಸ ದುಬಾರಿ ಕಾರು ಖರೀದಿಸಿ ಸಂಭ್ರಮಿಸಿದ ಚಂದನವನದ ನಟಿ ರಾಧಿಕಾ ನಾರಾಯಣ್.

‘ವರ್ಕ್ ಫ್ರಮ್ ಹೋಮ್’ ಆದೇಶಕ್ಕೆ ಐಟಿ ಕಂಪನಿಗಳ ತೀವ್ರ ವಿರೋಧ!:

ಮೋದಿ ವರ್ಕ್ ಫ್ರಮ್ ಹೋಂಗೆ ಕರೆಗೆ ಗ್ರೇಟರ್ ಬೆಂಗಳೂರು ಐಟಿ ಕಂಪನಿ ಹಾಗೂ ಇಂಡಸ್ಟ್ರೀಸ್ ಅಸೋಸಿಯೇಷನ್ ನಿಂದ ವಿರೋಧ ವ್ಯಕ್ತವಾಗಿದೆ. ಔಟರ್ ರಿಂಗ್ ರೋಡ್ (ORR) ಭಾಗದಲ್ಲಿರುವ ಸುಮಾರು 4,500 ಕ್ಕೂ ಹೆಚ್ಚು ಐಟಿ ಕಂಪನಿಗಳ ಒಕ್ಕೂಟ ಮತ್ತು ಗ್ರೇಟರ್ ಬೆಂಗಳೂರು ಐಟಿ ಕಂಪನಿ ಹಾಗೂ ಇಂಡಸ್ಟ್ರೀಸ್ ಅಸೋಸಿಯೇಷನ್ ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದೆ. ಈಗಾಗಲೇ ಹಲವು ಪ್ರಮುಖ ಕಂಪನಿಗಳು ಹೈಬ್ರೀಡ್ ಮಾಡಲ್ (ಕೆಲ ದಿನ ಕಚೇರಿ, ಕೆಲ ದಿನ ಮನೆ) ಮೂಲಕ ಕಾರ್ಯನಿರ್ವಹಿಸುತ್ತಿವೆ. ಆದರೆ ಸಂಪೂರ್ಣ ವರ್ಕ್ ಫ್ರಮ್ ಹೋಮ್ ನೀಡುವುದು ಪ್ರಾಯೋಗಿಕವಾಗಿ ಅಸಾಧ್ಯ. ಬೆಂಗಳೂರಿನ ಐಟಿ ಸಂಸ್ಥೆಗಳು ಅಮೆರಿಕ ಸೇರಿದಂತೆ ಹಲವು ವಿದೇಶಿ ಕ್ಲೈಂಟ್‌ಗಳ ಜೊತೆ ಕೆಲಸ ಮಾಡುತ್ತವೆ. ಬಿಪಿಒ (BPO) ಗಳಲ್ಲಂತೂ ಡೇಟಾ ಸುರಕ್ಷತೆಯ ಕಾರಣದಿಂದಾಗಿ ಇದು ಸಾಧ್ಯವೇ ಇಲ್ಲ. ಕಂಪನಿ, ವರ್ಕರ್ಸ್ ಹಾಗೂ ವಿದೇಶಿ ಕ್ಲೈಂಟ್‌ಗಳು ಒಪ್ಪಿದರೆ ಮಾತ್ರ ಇದು ಸಾಧ್ಯ. ಸದ್ಯಕ್ಕೆ ಸರ್ಕಾರದಿಂದ ಯಾವುದೇ ಅಧಿಕೃತ ಕಡ್ಡಾಯ ಮಾರ್ಗಸೂಚಿಗಳು ಬಂದಿಲ್ಲದ ಕಾರಣ, ಯಾವುದೇ ರೀತಿಯ ಬಿಗ್ ವರ್ಕ್ ಫ್ರಮ್ ಹೋಮ್ ಇರುವುದಿಲ್ಲ ಎಂದು ಐಟಿ ಸಂಸ್ಥೆಗಳು ಖಡಕ್ ಆಗಿ ತಿಳಿಸಿವೆ.

ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ. ರಂಗನಾಥ್:

ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಸಕಾಲಕ್ಕೆ ಮಳೆಯಾಗದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಇಡೀ ತಾಲೂಕು ಮತ್ತು ರಾಜ್ಯದಲ್ಲಿ ಉತ್ತಮ ಮಳೆ ಹಾಗೂ ಬೆಳೆಯಾಗಲಿ ಎಂದು ಪ್ರಾರ್ಥಿಸಿ ಕುಣಿಗಲ್ ಕ್ಷೇತ್ರದ ಜನಪ್ರಿಯ ಶಾಸಕ ಡಾ. ರಂಗನಾಥ್ ಅವರು ಇತಿಹಾಸ ಪ್ರಸಿದ್ಧ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಹವನಗಳನ್ನು ನೆರವೇರಿಸಿದ್ದಾರೆ. ಕ್ಷೇತ್ರದ ರೈತರ ಹಿತದೃಷ್ಟಿಯಿಂದ ದೇವರ ಮೊರೆ ಹೋಗಿರುವುದಾಗಿ ಶಾಸಕರು ತಿಳಿಸಿದ್ದು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಮಳೆಗಾಗಿ ಪ್ರಾರ್ಥಿಸಿದರು.

ನಡುರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ!

ಐಟಿ ಹಬ್ ಬೆಂಗಳೂರಿನಲ್ಲಿ ರಸ್ತೆ ಪುಂಡರ ಹಾವಳಿ ಮಿತಿಮೀರಿದ್ದು, ನಡುರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನೊಬ್ಬನ ಮೇಲೆ ಅತ್ಯಂತ ಭೀಕರವಾಗಿ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಹೆಚ್. ರಸ್ತೆಯಲ್ಲಿ ಮೇ 22ರಂದು ಈ ಕೃತ್ಯ ನಡೆದಿದೆ. ಕ್ಯಾಬ್ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು, ಚಾಲಕನನ್ನು ಬಲವಂತವಾಗಿ ಹೊರಗೆಳೆದು ಮನಬಂದಂತೆ ಥಳಿಸಿದೆ. ಈ ಭೀಕರ ಹಲ್ಲೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ‘ದೇಶ ಇಂತಹ ಪ್ರಧಾನಿಯನ್ನು ಎಂದೂ ನೋಡಿಲ್ಲ!’: ಪಿಎಂ ಮೋದಿ ಬಗ್ಗೆ ಸ್ಮೃತಿ ಇರಾನಿ ಹೇಳಿದ ಆ ಒಂದು ಮಾತು ಸಖತ್​ ವೈರಲ್

ಹೊಸ ದುಬಾರಿ ಕಾರು ಖರೀದಿಸಿ ಸಂಭ್ರಮಿಸಿದ ಚಂದನವನದ ನಟಿ ರಾಧಿಕಾ ನಾರಾಯಣ್!

‘ರಂಗಿತರಂ’, ‘ಯೂ ಟರ್ನ್’ ಹಾಗೂ ‘ಡಿಟೆಕ್ಟಿವ್ ಶಿವಾಜಿ’ ಮುಂತಾದ ಹಿಟ್ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಪ್ರತಿಭಾವಂತ ನಟಿ ರಾಧಿಕಾ ನಾರಾಯಣ್ ಅವರು ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಹೊಸ ಐಷಾರಾಮಿ ಮತ್ತು ದುಬಾರಿ ಕಾರೊಂದನ್ನು ಖರೀದಿಸಿರುವ ನಟಿ, ಕಾರಿನೊಂದಿಗೆ ಸಂಭ್ರಮದಿಂದ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ಹೊಸ ಕಾರಿನ ಬೆಲೆ ಮತ್ತು ಅದರ ಗ್ಲಾಮರಸ್ ಫೋಟೋಗಳು ಸದ್ಯ ಸ್ಯಾಂಡಲ್‌ವುಡ್ ವಲಯದಲ್ಲಿ ಮತ್ತು ಅವರ ಅಭಿಮಾನಿ ಬಳಗದಲ್ಲಿ ಭಾರಿ ಸೌಂಡ್ ಮಾಡುತ್ತಿದ್ದು, ಅಭಿಮಾನಿಗಳು ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಬಂಗಾಳದಲ್ಲಿ ಮಮತಾ ಕಾಲದ ನಿಯಮಕ್ಕೆ ಬಿಜೆಪಿ ಬ್ರೇಕ್!

ಪಶ್ಚಿಮ ಬಂಗಾಳದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಬಕ್ರೀದ್ ಹಬ್ಬದ ರಜೆ ಹಾಗೂ ಪ್ರಾಣಿ ಬಲಿ ನಿಯಮಗಳ ಕುರಿತು ಭಾರಿ ಚರ್ಚೆ ಮತ್ತು ವಿವಾದ ಆರಂಭವಾಗಿದೆ. ರಾಜ್ಯದ ಹೊಸ ಬಿಜೆಪಿ ಸರ್ಕಾರವು ಬಕ್ರೀದ್ ಹಬ್ಬಕ್ಕೆ ನೀಡಲಾಗುತ್ತಿದ್ದ ಎರಡು ದಿನಗಳ ಸಾರ್ವಜನಿಕ ರಜೆಯನ್ನು ಕೇವಲ ಒಂದು ದಿನಕ್ಕೆ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರವು ಜಾರಿಗೆ ತಂದಿದ್ದ ರಜಾ ಪಟ್ಟಿಯನ್ನು ಪರಿಷ್ಕರಿಸಿ ರಾಜ್ಯ ಹಣಕಾಸು ಇಲಾಖೆಯು ಅಧಿಕೃತ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ. ಇನ್ನೊಂದೆಡೆ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ಪ್ರಕ್ರಿಯೆಯನ್ನು ನಿಯಂತ್ರಿಸಲು ಸರ್ಕಾರ ಜಾರಿಗೆ ತಂದಿದ್ದ ಕಠಿಣ ಮಾರ್ಗಸೂಚಿಗಳನ್ನು ಕಲ್ಕತ್ತಾ ಹೈಕೋರ್ಟ್ ಎತ್ತಿಹಿಡಿದಿದೆ. ಪಶ್ಚಿಮ ಬಂಗಾಳ ಪ್ರಾಣಿ ಬಲಿ ನಿಯಂತ್ರಣ ಕಾಯ್ದೆ 1950ರ ಅಡಿಯಲ್ಲಿ, ಕೇವಲ 14 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರಾಣಿಗಳನ್ನು ಮಾತ್ರ ಬಲಿ ನೀಡಲು ಅವಕಾಶವಿದ್ದು, ಅದಕ್ಕೆ ಪಶುವೈದ್ಯರು ಹಾಗೂ ಸ್ಥಳೀಯ ಸಂಸ್ಥೆಗಳ ಜಂಟಿ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:57 pm, Sat, 23 May 26

Source link

Leave a Reply

Your email address will not be published. Required fields are marked *