Headlines

ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ನಡೆದಿದ್ದೇಗೆ? ಮಾಡಿದ್ಯಾರು? ಇಲ್ಲಿದೆ ಪ್ರಕರಣದ ಆಳ-ಅಗಲ – Kannada News | Karnataka’s Biggest Digital Arrest Case Explained: Who Was Behind the Massive Cyber Scam

ಡಿಜಿಟಲ್ ಅರೆಸ್ಟ್ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 25: ಕರ್ನಾಟಕದಲ್ಲಿ ನಡೆದಿದ್ದ ಅತಿದೊಡ್ಡ ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣವನ್ನು ಸದ್ಯ ಬೆಂಗಳೂರು ಸೈಬರ್ ಕಮಾಂಡ್ ಪೊಲೀಸರು ಭೇದಿಸಿದ್ದಾರೆ. ರಾಜ್ಯದಲ್ಲೂ ಆ್ಯಕ್ಟಿವ್ ಆಗಿದ್ದ ಉತ್ತರ ಭಾರತದ ಸೈಬರ್ ವಂಚಕರ ಜಾಲವನ್ನು ಪತ್ತೆ ಹಚ್ಚುವ ಮೂಲಕ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂಬೈ ಮೂಲದ ಎ.ಮಲ್ಲಿಕ್, ತಮಿಳುನಾಡು ಮೂಲದ ಶಿವಗ್ಯಾನಂ, ಗುಜರಾತ್ ಮೂಲದ ಪಾಲಕ್ ಬೈ ಪಟೇಲ್, ಮೊಹಮ್ಮದ್ ಹಮೀದ್ ಮತ್ತು ದೆಹಲಿ ಮೂಲದ ಓಂ ಪ್ರಕಾಶ್ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 1 ಕೋಟಿ 46 ಲಕ್ಷ ರೂ ಹಣ ವಶಕ್ಕೆ ಪಡೆಯಲಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲೂ ಆ್ಯಕ್ಟಿವ್ ಆಗಿದ್ದ ಉತ್ತರ ಭಾರತದ ಸೈಬರ್ ವಂಚಕರ ಜಾಲ
  • ಗುರುಗ್ರಾಮದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಆರೋಪಿಗಳು
  • ವೃದ್ಧರು, ನಿವೃತ್ತ ಅಧಿಕಾರಿಗಳು ಮತ್ತು ಶ್ರೀಮಂತರೇ ಟಾರ್ಗೆಟ್

ಡಿಜಿಟಲ್ ಅರೆಸ್ಟ್ ನಡೆದಿದ್ದೇಗೆ, ಮಾಡಿದ್ಯಾರು?

ಬಂಧಿತ ಆರೋಪಿಗಳು ಹರಿಯಾಣದ ಗುರುಗ್ರಾಮದಲ್ಲಿ ಕಚೇರಿ ಮಾಡಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ವೃದ್ಧರು, ನಿವೃತ್ತ ಅಧಿಕಾರಿಗಳು ಮತ್ತು ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿದ್ದರು. ಇದೇ ರೀತಿ ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದ ಬೆಂಗಳೂರಿನ ಶಿವಾಜಿನಗರ ನಿವಾಸಿ 74 ವರ್ಷದ ವಯೋವೃದ್ಧೆ ಲಕ್ಷ್ಮೀ ರಾಮಮೂರ್ತಿ ಅವರನ್ನು ಗ್ಯಾಂಗ್​​ ಡಿಜಿಟಲ್ ಅರೆಸ್ಟ್​ ಮಾಡಿದೆ.

ಇದನ್ನೂ ಓದಿ: ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಕೇಸ್​​​ ಭೇದಿಸಿದ ಖಾಕಿ​​​: 6 ಆರೋಪಿಗಳ ಬಂಧನ

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ದೆಗೆ ವಿಡಿಯೋ ಕರೆ ಮಾಡಿದ ಗ್ಯಾಂಗ್​​​, ಅಕ್ರಮ ಹಣ ವರ್ಗಾವಣೆ ಮಾಡಿದ್ದೀರಾ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ, ಅಕೌಂಟ್ ಮನಿ ಲ್ಯಾಂಡರಿಂಗ್‌ಗೆ ಬಳಕೆ ಆಗಿದೆ. ನೀವು ಯಾರ ಜೊತೆಯೂ ಮಾತನಾಡಬಾರದು ಎಂದಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ಹಣವನ್ನು ಆರ್​ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬರೋಬ್ಬರಿ 24 ಕೋಟಿ ರೂ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಖದೀಮರು ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದಾರೆ. ಹೆದರಿದ ಲಕ್ಷ್ಮೀ ರಾಮಮೂರ್ತಿ ಅವರು ಮನೆಯಲ್ಲಿದ್ದ ಸುಮಾರು 1 ಕೆಜಿ 300 ಗ್ರಾಂ ಚಿನ್ನಾಭರಣವನ್ನು ಅಡಮಾನ ಇಟ್ಟು ಹಣ ಪಡೆಯಲು ಕಂಟೋನ್ಮೆಂಟ್ ಬ್ರಾಂಚ್‌ನ ಐಸಿಐಸಿಐ (ICICI) ಬ್ಯಾಂಕ್‌ಗೆ ಬಂದಿದ್ದಾರೆ. ಬ್ಯಾಂಕ್ ಮ್ಯಾನೇಜರ್‌ಗೆ ಅನುಮಾನ ಬಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ತಾವು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಟಿವಿ9ಗೆ ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ ಪ್ರತಿಕ್ರಿಯಿಸಿದ್ದು, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ 24 ಕೋಟಿ ರೂ ವಂಚನೆ ಪ್ರಕರಣ ಬೆಂಗಳೂರು ಸಿಟಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿತ್ತು. ಈ ಸಂಬಂಧ ಇದುವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಶಿವಗ್ಯಾನಂ ಈ ಹಿಂದೆ 4 ಕೇಸ್​ನಲ್ಲಿ ಭಾಗಿಯಾಗಿದ್ದಾನೆ. ಪಾಲಕ್ ಬೈ ಪಟೇಲ್ ಈ ಹಿಂದೆ 4 ಸೈಬರ್ ಕೇಸ್​ನಲ್ಲಿ ಭಾಗಿಯಾಗಿದ್ದಾನೆ. ಆರೋಪಿಗಳ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ವೃದ್ಧೆಗೆ 24 ಕೋಟಿ ರೂ ವಂಚನೆ ಪ್ರಕರಣದ ಮಾಸ್ಟರ್ ಮೈಂಡ್ ಪತ್ತೆಯಾಗಿಲ್ಲ. ಆರೋಪಿಗಳಿಂದ 1 ಕೋಟಿ 46 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ ಎಂದರು.

ಇದನ್ನೂ ಓದಿ: ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವೃದ್ಧೆಯಿಂದ 24 ಕೋಟಿ ರೂ. ಸುಲಿಗೆ: ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ

ಸೈಬರ್ ವಂಚಕರ ಖಾತೆಗೆ 23 ಖಾತೆಗಳಿಂದ ಹಣ ವರ್ಗಾವಣೆಯಾಗಿದೆ. ಸಂತ್ರಸ್ತರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದ್ದು ಮತ್ತು ಆರೋಪಿಗಳ ಸುಳಿವು ಸಿಗಲಿದೆ. ಪ್ರಕರಣದಲ್ಲಿ ಶೀಘ್ರದಲ್ಲೇ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಎಂದು ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ ಹೇಳಿದ್ದಾರೆ.

ವರದಿ: ವಿಕಾಸ್ Tv9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *