ಸ್ವಲ್ಪ ಎಚ್ಚರ ತಪ್ಪಿದ್ರೂ ಬೆಂಗಳೂರಿನಲ್ಲಿ ನಡೆಯುತ್ತಿತ್ತು ದೊಡ್ಡ ವಿಮಾನ ದುರಂತ! ಪ್ರಾಣಭಯದಲ್ಲಿ ವಿಮಾನದ ರೆಕ್ಕೆ ಮೇಲೆಯೇ ಓಡಿದ ಪ್ರಯಾಣಿಕರು! – Kannada News | KIA IndiGo Flight Evacuation: Slide Fails, Passengers Walked on Wing Amid Smoke

ಬೆಂಗಳೂರು, ಮೇ.27: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನಿನ್ನೆ (ಮೇ 26) ಸಂಜೆ ಭಾರಿ ವಿಮಾನ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬೆಂಗಳೂರಿನಿಂದ ಚೆನ್ನೈಗೆ ಹೊರಡಬೇಕಾಗಿದ್ದ ಇಂಡಿಗೋ ವಿಮಾನದಲ್ಲಿ ಹಠಾತ್ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬರೋಬ್ಬರಿ 230 ಕ್ಕೂ ಹೆಚ್ಚು ಪ್ರಯಾಣಿಕರನ್ನು ತುರ್ತಾಗಿ ಸ್ಥಳಾಂತರಿಸಲಾಯಿತು. ಆದರೆ, ಈ ವೇಳೆ ವಿಮಾನದ ಸುರಕ್ಷತಾ ತುರ್ತು ದಾರಿಯ ಇನ್‌ಫ್ಲೇಟಬಲ್ ಸ್ಲೈಡ್ (Inflatable Slide) ಸರಿಯಾಗಿ ತೆರೆದುಕೊಳ್ಳದ ಕಾರಣ, ಪ್ರಯಾಣಿಕರು ಪ್ರಾಣಭಯದಿಂದ ವಿಮಾನದ ಬಲಗಡೆಯ ರೆಕ್ಕೆಯ ಮೇಲೆಯೇ ನಡೆದು ಬಂದಿರುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಇಂಡಿಗೋ ಸಂಸ್ಥೆಯ ‘6E 6017’ ವಿಮಾನವು ಪ್ರಯಾಣಿಕರನ್ನು ಹೊತ್ತು ಟೇಕ್-ಆಫ್ ಆಗಲು ರನ್‌ವೇ ಕಡೆಗೆ ಚಲಿಸುತ್ತಿದ್ದಾಗ (Taxiing) ವಿಮಾನದ ಕ್ಯಾಬಿನ್ ಮತ್ತು ಕಾಕ್‌ಪಿಟ್ ಒಳಗಡೆ ದಿಢೀರನೆ ದಟ್ಟವಾದ ಹೊಗೆ ಆವರಿಸಿಕೊಂಡಿತು. ಇದನ್ನು ಗಮನಿಸಿದ ಪೈಲಟ್ ತಕ್ಷಣವೇ ವಿಮಾನವನ್ನು ಮಧ್ಯದಲ್ಲೇ ನಿಲ್ಲಿಸಿ, ಗಂಭೀರ ಪರಿಸ್ಥಿತಿ ಘೋಷಿಸಿ ಎಮರ್ಜೆನ್ಸಿ ಎಕ್ಸಿಟ್ (Emergency Evacuation) ಮೂಲಕ ಎಲ್ಲರನ್ನು ಕೆಳಗಿಳಿಸಲು ಸೂಚಿಸಿದರು.

ಇಲ್ಲಿದೆ ನೋಡಿ ವಿಡಿಯೋ:,

ಈ ವಿಮಾನದಲ್ಲಿದ್ದ ದೀಪನ್ ಕ್ವೀಟರ್ ಕಣ್ಣನ್ ಎಂಬ ಪ್ರಯಾಣಿಕರೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಮಾನದ ಬಲಗಡೆಯ ಓವರ್‌ವಿಂಗ್ ಎಕ್ಸಿಟ್‌ನಲ್ಲಿದ್ದ ಸುರಕ್ಷತಾ ಸ್ಲೈಡ್ ಸರಿಯಾಗಿ ಗಾಳ ತುಂಬಿ ಓಪನ್ ಆಗಲೇ ಇಲ್ಲ! ಇದರಿಂದಾಗಿ ಗಾಬರಿಗೊಂಡ ಜನರು ಅನಿವಾರ್ಯವಾಗಿ ವಿಮಾನದ ರೆಕ್ಕೆಯ (Wing) ಮೇಲೆ ಹತ್ತಿ ನಿಲ್ಲಬೇಕಾಯಿತು. ನಂತರ ಅಲ್ಲಿಂದ ಮತ್ತೆ ವಿಮಾನದ ಒಳಗಡೆ ಹೋಗಿ ಬೇರೆ ದಾರಿಯ ಮೂಲಕ ಕೆಳಗಿಳಿಯಬೇಕಾಯಿತು” ಎಂದು ಅವರು ಬರೆದುಕೊಂಡಿದ್ದಾರೆ. “ಡಿಜಿಸಿಎ (DGCA) ಈ ತಾಂತ್ರಿಕ ಲೋಪದ ಬಗ್ಗೆಯೂ ಗಂಭೀರ ತನಿಖೆ ನಡೆಸಬೇಕು. ತುರ್ತು ಸಂದರ್ಭದಲ್ಲಿ ಗಾಬರಿಯಿಂದ ಜನರು ರೆಕ್ಕೆಯ ಮೇಲಿಂದ ಕೆಳಗೆ ಬಿದ್ದು ದೊಡ್ಡ ಅನಾಹುತವೇ ಸಂಭವಿಸಬಹುದಿತ್ತು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಹಣಕ್ಕಾಗಿ ಸಂಚು ರೂಪಿಸಿದ ‘ಪಂಕ್ಚರ್ ಮಾಫಿಯಾ’! ಮಾಗಡಿ ರಸ್ತೆಯುದ್ದಕ್ಕೂ ಮೊಳೆಗಳ ರಾಶಿ

ಇಂಡಿಗೋ ಸಂಸ್ಥೆಯ ಸ್ಪಷ್ಟನೆ; ತನಿಖೆಗೆ ಡಿಜಿಸಿಎ ಆದೇಶ:

ಈ ಇಡೀ ಘಟನೆಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಇಂಡಿಗೋ ಏರ್‌ಲೈನ್ಸ್ ವಕ್ತಾರರು, “ಮೇ 26 ರಂದು ಬೆಂಗಳೂರು-ಚೆನ್ನೈ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಸುರಕ್ಷತೆಯ ದೃಷ್ಟಿಯಿಂದ ತುರ್ತು ಸ್ಥಳಾಂತರ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ಅವರನ್ನು ಟರ್ಮಿನಲ್‌ಗೆ ಕರೆತರಲಾಗಿದೆ. ಅವರ ಪ್ರಯಾಣಕ್ಕೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿತ್ತು” ಎಂದು ತಿಳಿಸಿದ್ದಾರೆ. ಆದರೆ ವಿಮಾನದಲ್ಲಿ ಹೊಗೆ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ. ಪ್ರಸ್ತುತ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಮಾನವನ್ನು ತಪಾಸಣೆಗಾಗಿ ಗ್ರೌಂಡ್ ಮಾಡಲಾಗಿದೆ ಹಾಗೂ ತನಿಖೆಗೆ ಆದೇಶಿಸಿದೆ. ಸ್ಥಳಾಂತರದ ಪ್ರಕ್ರಿಯೆಯ ವೇಳೆ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *