Headlines

ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಷರತ್ತುಬದ್ಧ ಅನುಮೋದನೆ – Kannada News | Hubballi Dharwad Bifurcation: Governor Thawarchand Gehlot Gives Conditional Approval for Separate Dharwad Civic Body

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆImage Credit source: One India

ಧಾರವಾಡ, ಮೇ 27: ಅವಳಿ ನಗರದ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ವಿಭಜನೆ ಪ್ರಸ್ತಾವನೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮಹತ್ವದ ಷರತ್ತುಬದ್ಧ ಅನುಮೋದನೆ ನೀಡಿದ್ದಾರೆ. ಆದರೆ, ರಾಜ್ಯಪಾಲರು ವಿಧಿಸಿರುವ ಕಠಿಣ ನಿಬಂಧನೆಗಳಿಂದಾಗಿ ಪ್ರತ್ಯೇಕ ಪಾಲಿಕೆ ರಚನೆಯ ಕಡತ ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ವಾಪಸ್ ಹೋಗಿದ್ದು, ಧಾರವಾಡಿಗರ ಹೋರಾಟ ಮತ್ತೊಂದು ತಿರುವು ಪಡೆದುಕೊಂಡಿದೆ.

ಮುಖ್ಯಾಂಶಗಳು

  • ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಪ್ರಸ್ತಾವನೆಗೆ ರಾಜ್ಯಪಾಲರ ಷರತ್ತುಬದ್ಧ ಅನುಮೋದನೆ.
  • ರಾಷ್ಟ್ರೀಯ ಜನಗಣತಿ ಪ್ರಕ್ರಿಯೆ ಮುಗಿಯುವವರೆಗೆ ಪಾಲಿಕೆ ವಿಭಜನೆ ಜಾರಿಗೆ ಬರುವುದಿಲ್ಲ.
  • ವಿಭಜನೆಯಿಂದ ಕೇಂದ್ರದ ಹಣಕಾಸು ಆಯೋಗದ ಭಾರಿ ಅನುದಾನ ಕೈತಪ್ಪುವ ಭೀತಿಯಿದೆ.

ಬೆಂಗಳೂರು ಬಿಟ್ಟರೆ ರಾಜ್ಯದಲ್ಲೇ ಅತ್ಯಂತ ದೊಡ್ಡದಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಧಾರವಾಡವನ್ನು ಪ್ರತ್ಯೇಕಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಹುಬ್ಬಳ್ಳಿಗೇ ಹೆಚ್ಚಿನ ಅನುದಾನ ಸಿಗುತ್ತಿದೆ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಿಸಿದ್ದರು. ಆದರೆ ಈಗ ಈ ಪ್ರಕ್ರಿಯೆಗೆ ಕಾನೂನು ಮತ್ತು ತಾಂತ್ರಿಕ ಒಳಸುಳಿಗಳು ಎದುರಾಗಿವೆ.

ರಾಜ್ಯಪಾಲರು ವಿಧಿಸಿರುವ ಪ್ರಮುಖ ಷರತ್ತುಗಳೇನು?

ರಾಜ್ಯಪಾಲರು ಪ್ರಸ್ತಾವನೆಯನ್ನು ಪುರಸ್ಕರಿಸಿದ್ದರೂ, ಅದನ್ನು ತಕ್ಷಣ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಸದಸ್ಯರ ಅವಧಿ ಪೂರ್ಣಗೊಳ್ಳಬೇಕು: ಪ್ರಸ್ತುತ ಇರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ 5 ವರ್ಷಗಳ ಅಧಿಕಾರ ಅವಧಿ ಪೂರ್ಣಗೊಂಡ ನಂತರವೇ ವಿಭಜನೆ ಜಾರಿಗೆ ಬರಬೇಕು.
  • ಜನಗಣತಿ ನಿರ್ದೇಶನಾಲಯದ ಅಡ್ಡಿ: 2026ರ ಜನವರಿ 1ರಿಂದ 2027ರ ಮಾರ್ಚ್ 31ರವರೆಗೆ ಯಾವುದೇ ಆಡಳಿತಾತ್ಮಕ ಘಟಕಗಳ ಗಡಿ ಬದಲಾಯಿಸಬಾರದು ಎಂದು ಜನಗಣತಿ ನಿರ್ದೇಶನಾಲಯ ಸೂಚಿಸಿದೆ. ಹಾಗಾಗಿ, ರಾಷ್ಟ್ರೀಯ ಜನಗಣತಿ ಪ್ರಕ್ರಿಯೆ ಮುಗಿಯುವವರೆಗೆ ಈ ವಿಭಜನೆಯ ಅಧಿಸೂಚನೆ ಜಾರಿ ಮಾಡುವಂತಿಲ್ಲ.
  • ಆರ್ಥಿಕ ನೆರವಿನ ಸವಾಲು: ವಿಭಜನೆಯ ನಂತರ ಎರಡೂ ಪಾಲಿಕೆಗಳಿಗೆ ಆರ್ಥಿಕ ನಷ್ಟವಾಗದಂತೆ ಆದಾಯ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು ಕಡತವನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.

56 ಸಾವಿರ ಕೋಟಿ ಅನುದಾನಕ್ಕೆ ಕಂಟಕ?

ಕೇಂದ್ರದಿಂದ ಬರುವ ಸುಮಾರು 56,000 ಕೋಟಿ ರೂ. ಅನುದಾನ ಸಿಗಬೇಕಾದರೆ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 10 ಲಕ್ಷದಿಂದ 40 ಲಕ್ಷ ಜನಸಂಖ್ಯೆ ಇರಬೇಕು. ಒಂದು ವೇಳೆ ಅವಳಿ ನಗರ ವಿಭಜನೆಯಾದರೆ, ಹುಬ್ಬಳ್ಳಿ ಮತ್ತು ಧಾರವಾಡ ಎರಡರಲ್ಲೂ ಜನಸಂಖ್ಯೆ 10 ಲಕ್ಷಕ್ಕಿಂತ ಕೆಳಗೆ ಇಳಿಯುತ್ತದೆ.

ಇದನ್ನೂ ಓದಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆಗೆ ಬಿಜೆಪಿಯಿಂದ ಹೊಸ ತಗಾದೆ: ಇಲ್ಲಿದೆ ಅಸಲಿ ಕಾರಣ

ಇದರಿಂದಾಗಿ ಕೇಂದ್ರದ ಭಾರಿ ಮೊತ್ತದ ಅನುದಾನ ಕೈತಪ್ಪಿ, ಎರಡೂ ನಗರಗಳ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎನ್ನುವುದು ಬಿಜೆಪಿ ಸದಸ್ಯರ ವಾದವಾಗಿದೆ. ರಾಜಕೀಯ ಮೇಲಾಟ ಹಾಗೂ ತಾಂತ್ರಿಕ ಸಂಕಷ್ಟಗಳ ನಡುವೆಯೂ ಧಾರವಾಡದ ಪ್ರತ್ಯೇಕ ಪಾಲಿಕೆಗಾಗಿ ಹೋರಾಟ ಸಮಿತಿ ತನ್ನ ಹೋರಾಟವನ್ನು ಮುಂದುವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:01 pm, Wed, 27 May 26

Source link

Leave a Reply

Your email address will not be published. Required fields are marked *