Headlines

ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್​​ ಕೈತಪ್ಪಿದ್ದೇಕೆ?: ಅಸಲಿ ಸತ್ಯ ಬಹಿರಂಗಪಡಿಸಿದ ಕುಮಾರಸ್ವಾಮಿ – Kannada News

ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್​​ ಕೈತಪ್ಪಿದ ಬಗ್ಗೆ ಹೆಚ್​​ಡಿಕೆ ಸ್ಪಷ್ಟನೆImage Credit source: Tv9 Kannada

ಮಂಡ್ಯ, ಜೂನ್​​ 09: ರಾಜ್ಯಸಭಾ ಚುನಾವಣೆಗೆ ಎನ್​​ಡಿಎ ಅಭ್ಯರ್ಥಿಯಾಗಿ ಒಬಿಸಿ ನಾಯಕ ಪ್ರೊ. ಎಂ. ನಾಗರಾಜ ಅವರ ಹೆಸರನ್ನು ಬಿಜೆಪಿ (BJP) ಘೋಷಿಸಿದ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್​​ ವಿರುದ್ಧ ಕಾಂಗ್ರೆಸ್​​ ಕಿಡಿಕಾರಿತ್ತು. ಮಾಜಿ ಪ್ರಧಾನಿ ದೇವೇಗೌಡಿರಿಗೆ ಟಿಕೆಟ್​​ ಕೈತಪ್ಪಿದ ಬಗ್ಗೆ ರಣದೀಪ್​​ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಮೈತ್ರಿ ಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಈ ನಡುವೆ ಹೆಚ್​​ಡಿಡಿಗೆ ರಾಜ್ಯಸಭಾ ಟಿಕೆಟ್​ ಅಸಲಿಗೆ ಕೈತಪ್ಪಿದ್ದೇಕೆ ಎಂಬ ಕಾರಣವನ್ನು ಸ್ವತಃ ಅವರ ಪುತ್ರ, ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಅವರೇ ಬಹಿರಂಗಪಡಿಸಿದ್ದಾರೆ.

‘ಮೈತ್ರಿಯಲ್ಲಿ ಬಿರುಕು ತರಲು ಯತ್ನ’

ಈ ಸಂಬಂಧ ಮಂಡ್ಯ ತಾಲೂಕಿನ ತಗ್ಗಹಳ್ಳಿಯಲ್ಲಿ ಮಾತನಾಡಿರುವ ಕುಮಾರಸ್ವಾಮಿ, ರಾಜ್ಯಸಭೆ ಟಿಕೆಟ್‌‌ಗೆ ಹೆಚ್.ಡಿ. ದೇವೇಗೌಡರು ಅರ್ಜಿಯೇ ಹಾಕಿರಲಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಹೆಚ್​.ಡಿ.ದೇವೇಗೌಡರ ಬಗ್ಗೆ ಕಾಂಗ್ರೆಸ್ಸಿಗರಿಗೆ ಈಗ ಅನುಕಂಪ ಬಂದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಭಯ ಶುರುವಾಗಿದ್ದು, ನಮ್ಮ ನಡುವೆ ಬಿರುಕು ತರಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ದೇವೇಗೌಡರು ಅಧಿಕಾರಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದಿದ್ದರು ಎಂದು ಹೆಚ್​​ಡಿಕೆ ತಿಳಿಸಿದ್ದಾರೆ.

ಇದನ್ನೂ ಓದಿ: ‘ಅಧಿಕಾರವೊಂದೇ ಜೆಡಿಎಸ್ ಮಂತ್ರ’; ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ತಪ್ಪಿದ ಬೆನ್ನಲ್ಲೇ ಹೆಚ್​ಡಿಕೆ ವಿರುದ್ಧ ಸುರ್ಜೇವಾಲ ವ್ಯಂಗ್ಯ

ಕಳೆದ ಬಾರಿ ಹೆಚ್​ಡಿಡಿ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಬೆಂಬಲ ವಿಚಾರ ಸಂಬಂಧವೂ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಲಿಲ್ಲ. ಬದಲಾಗಿ ದೇವೇಗೌಡರ ವಿರುದ್ಧ ಇನ್ನೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಕಳೆದ ಬಾರಿ ಅಭ್ಯರ್ಥಿ ಹಾಕಲ್ಲ ಎಂದು ಯಡಿಯೂರಪ್ಪನವರು ಕರೆ ಮಾಡಿ ತಿಳಿಸಿದ್ರು. ಅದಾದ ಬಳಿಕ ನಾನು ಒತ್ತಾಯ ಮಾಡಿ ಅಭ್ಯರ್ಥಿ ಮಾಡಿದ್ದು ಎಂದವರು ಹೇಳಿದ್ದಾರೆ. ಒಕ್ಕಲಿಗರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಕಾಂಗ್ರೆಸ್ ಆರೋಪ ಸಂಬಂಧವೂ ಉತ್ತರಿಸಿದ ಅವರು, ಒಕ್ಕಲಿಗ ಸಿಎಂ ಇರಬೇಕಾದರೆ ರಾಜ್ಯಸಭೆ ಸ್ಥಾನ ಪಡೆದು ಏನು ಮಾಡುತ್ತೀರಾ ಎಂದವರು ಪ್ರಶ್ನಿಸಿದ್ದಾರೆ.

ಸಿಎಂ ಡಿಕೆಶಿ ಹೇಳಿಕೆ ಕೌಂಟರ್​​

ಹೆಚ್​ಡಿಕೆ ಸಲಹೆ ಪಡೆಯುವುದಾಗಿ ಸಿಎಂ‌ ಡಿಕೆಶಿ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಸಿಎಂ ಡಿಕೆಶಿಗೆ ನಾನೇನು ಸಲಹೆ ನೀಡಲಿ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಎಲ್ಲದಕ್ಕೂ ಸಾಕ್ಷಿ ಗುಡ್ಡೆ ಕೇಳುತ್ತಾರೆ. ನಾನೇನು ಮಾಡಿಲ್ಲ, ನನ್ನ ಬಳಿ ಏನು ಸಲಹೆ ಕೇಳ್ತಾರೆ? ಅವರಿಗೆ ಫೋಟೋ ಬೇಕಿದೆ, ಅದಕ್ಕೆ ಎಲ್ಲೆಡೆ ಹೋಗ್ತಿದ್ದಾರೆ. ಅತಿ ವಿನಯಂ ಧೂರ್ತ ಲಕ್ಷಣಂ ಎಂದು ಹೇಳುವ ಮೂಲಕ ಕೇಂದ್ರ ಸಚಿವರು ವ್ಯಂಗ್ಯವಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:14 pm, Tue, 9 June 26

Source link

Leave a Reply

Your email address will not be published. Required fields are marked *