ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಡಿಕೆ ಶಿವಕುಮಾರ್Image Credit source: @DKShivakumar
ಬೆಂಗಳೂರು, ಜೂನ್ 11: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಜಿದ್ದಾಜಿದ್ದಿ, ಪ್ರಮುಖ ಖಾತೆಗಳಿಗಾಗಿ ಸಚಿವರ ಪಟ್ಟು ಹಾಗೂ ಸಚಿವ ಸ್ಥಾನ ವಂಚಿತರ ಬೆಂಬಲಿಗರ ಭಾರಿ ಪ್ರತಿಭಟನೆಗಳ ನಡುವೆಯೇ ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆಯೂ ಜೋರಾಗಿದೆ. ಈ ಎಲ್ಲಾ ಗೊಂದಲಗಳನ್ನು ಬಗೆಹರಿಸಿ, ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ಪಟ್ಟಿ ಸಿದ್ಧಪಡಿಸುವ ಸಲುವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ದೆಹಲಿಯಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಯುವ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಮುಖ್ಯಾಂಶಗಳು
- ಸಂಪುಟ ವಿಸ್ತರಣೆಗಾಗಿ ದೆಹಲಿಯಲ್ಲಿ ಡಿಕೆಶಿ-ಪರಮೇಶ್ವರ್.
- 3-4 ಯುವ ಮುಖಗಳಿಗೆ ಸಚಿವ ಭಾಗ್ಯದ ಸಾಧ್ಯತೆ.
- ಖಾತೆ ಬದಲಾವಣೆಗೆ ಮುನಿಯಪ್ಪ, ಕೃಷ್ಣಭೈರೇಗೌಡ ಪಟ್ಟು.
ಕೇರಳ, ತಮಿಳುನಾಡು ಮಾದರಿ: ಯುವ ಮುಖಗಳಿಗೆ ಮಣೆ?
ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಯುವ ಶಾಸಕರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂಬ ಗಂಭೀರ ಚಿಂತನೆ ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಸದ್ಯ ಖಾಲಿ ಇರುವ ಒಟ್ಟು 20 ಸಚಿವ ಸ್ಥಾನಗಳ ಪೈಕಿ ಕನಿಷ್ಠ 3 ರಿಂದ 4 ಸ್ಥಾನಗಳನ್ನು ಮೊದಲ ಬಾರಿಗೆ ಅಥವಾ ಯುವ ಶಾಸಕರಿಗೆ ನೀಡುವ ಸಾಧ್ಯತೆಗಳಿವೆ. ಇದರ ಭಾಗವಾಗಿ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ರಾಜಕೀಯ ಪ್ರಭಾವವನ್ನು ಹತ್ತಿಕ್ಕಲು ನಾರಾ ಭರತ್ ರೆಡ್ಡಿ ಅವರಿಗೆ ಮಂತ್ರಿಗಿರಿ ನೀಡುವ ಪ್ರಸ್ತಾಪ ಮುಂಚೂಣಿಗೆ ಬಂದಿದೆ. ಇದರೊಂದಿಗೆ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರದೀಪ್ ಈಶ್ವರ್, ಅಜಯ್ ಸಿಂಗ್, ಪ್ರಿಯಾಕೃಷ್ಣ ಹಾಗೂ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಯುವ ನಾಯಕರ ಹೆಸರುಗಳು ದೆಹಲಿ ವಲಯದಲ್ಲಿ ಕೇಳಿಬರುತ್ತಿವೆ.
ಈ ಕುರಿತು ಮಾತನಾಡಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಒಬಿಸಿ (OBC) ಕೋಟಾದಡಿ ಯುವಕರಿಗೆ ಸಚಿವ ಸ್ಥಾನ ಸಿಗುವ ಸಂಪೂರ್ಣ ನಂಬಿಕೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಕೃಷ್ಣಭೈರೇಗೌಡ, ಮುನಿಯಪ್ಪ ಖಾತೆ ಕ್ಯಾತೆ: ಜಯಚಂದ್ರ ಅಸಮಾಧಾನ
ಮತ್ತೊಂದೆಡೆ, ಸಚಿವರ ಖಾತೆಗಳ ಕುರಿತಾದ ಅಸಮಾಧಾನ ಇನ್ನೂ ತಣ್ಣಗಾಗಿಲ್ಲ. ಬೆಂಗಳೂರು ಅಭಿವೃದ್ಧಿ ಖಾತೆ ಸಿಕ್ಕಿದ್ದರೂ ಬಿಡಿಎ (BDA) ಮತ್ತು ಬಿಎಂಆರ್ಡಿಎ (BMRDA) ಸಂಸ್ಥೆಗಳನ್ನು ಹೊರತುಪಡಿಸಿದ ಇಲಾಖೆ ತಮಗೆ ಬೇಡ ಎಂದು ಪಟ್ಟು ಹಿಡಿದಿರುವ ಕೃಷ್ಣಭೈರೇಗೌಡರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಇತ್ತ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಕೂಡ ತಮ್ಮ ಖಾತೆ ಬದಲಾಯಿಸುವಂತೆ ಸಿಎಂ ಬೆನ್ನಬಿದ್ದಿದ್ದು, ಬುಧವಾರ ದೇವನಹಳ್ಳಿ ವಿಮಾನ ನಿಲ್ದಾಣದವರೆಗೂ ಬಂದು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಇನ್ನು ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಟಿ.ಬಿ. ಜಯಚಂದ್ರ ಅವರನ್ನು ಮುಂದುವರಿಸಿ ಹೊರಡಿಸಿರುವ ಆದೇಶ ಜಯಚಂದ್ರ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಂ.ಬಿ. ಪಾಟೀಲ್, ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲವನ್ನೂ ಹೈಕಮಾಂಡ್ ಬಗೆಹರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಮಿಸ್ ಆಗಿರುವುದಕ್ಕೆ ಹಿರಿಯ ನಾಯಕ ಜಮೀರ್ ಅಹಮದ್ ಖಾನ್ ಬೆಂಬಲಿಗರು ಬಾಗಲಕೋಟೆ, ಜಮಖಂಡಿ, ಮಹಾಲಿಂಗಪುರ ಹಾಗೂ ಹಾಸನದಲ್ಲಿ ಭಾರಿ ಪ್ರತಿಭಟನೆ ನಡೆಸಿ ಅಲ್ಪಸಂಖ್ಯಾತ ನಾಯಕನಿಗೆ ಮಂತ್ರಿಗಿರಿ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ ಕೆಪಿಸಿಸಿ ಕಚೇರಿಗೆ ಬಂದಿದ್ದ ಜಮೀರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ನುಣುಚಿಕೊಂಡಿದ್ದಾರೆ. ಇತ್ತ ಗದಗದಲ್ಲಿ ಜಿ.ಎಸ್. ಪಾಟೀಲ್ ಬೆಂಬಲಿಗರು ಪುಟ್ಟರಾಜ ಗವಾಯಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರೆ, ಬಳ್ಳಾರಿಯಲ್ಲಿ ಬಿ. ನಾಗೇಂದ್ರ, ಬೀದರ್ನಲ್ಲಿ ರಹೀಂ ಖಾನ್ ಮತ್ತು ಹಾವೇರಿಯಲ್ಲಿ ಎಚ್.ಕೆ. ಪಾಟೀಲ್ ಬೆಂಬಲಿಗರು ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಸೋನಿಯಾ ಗಾಂಧಿ ಭೇಟಿಯಾದ ಸಿಎಂ ಡಿಕೆಶಿ
Had the privilege of meeting CPP Chairperson Smt. Sonia Gandhi avaru, Leader of Opposition Shri @RahulGandhi avaru, and Congress General Secretary Smt. @priyankagandhi avaru at 10 Janpath, New Delhi.
Our discussion centered on the welfare of the people, inclusive development,… pic.twitter.com/yeCxp5KO63
— DK Shivakumar (@DKShivakumar) June 10, 2026
ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ, ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಸಿಎಂ ಮತ್ತು ಡಿಸಿಎಂ ಇಬ್ಬರೂ ಇಂದು ರಾತ್ರಿ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ಹೈಕಮಾಂಡ್ ಅಂತಿಮವಾಗಿ ಯಾರಿಗೆ ಮಂತ್ರಿಗಿರಿ ನೀಡಲಿದೆ ಎಂಬ ಆತಂಕ ಮತ್ತು ಕುತೂಹಲ ಸಚಿವ ಆಕಾಂಕ್ಷಿಗಳಲ್ಲಿ ಮನೆಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:12 am, Thu, 11 June 26