Headlines

ಪ್ರಿ ವೆಡ್ಡಿಂಗ್ ಫೋಟೊಶೂಟ್ ವೇಳೆ ಸರೋವರಕ್ಕೆ ಜಾರಿ ಬಿದ್ದು ವರ ಸಾವು – Kannada News

ಜೈಪುರ, ಜೂನ್ 12: ಪ್ರಿ ವೆಡ್ಡಿಂಗ್ ಫೋಟೊಶೂಟ್(Photoshoot) ವೇಳೆ ಸರೋವರಕ್ಕೆ ಜಾರಿ ಬಿದ್ದು ವರ ಮೃತಪಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಚಿತ್ತೋರ್‌ಗಢದ ನಿವಾಸಿಯಾದ ಅರ್ಜುನ್ ದಮಾಮಿ ಎಂಬ ಯುವಕನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು. ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿದ್ದವು. ತಮ್ಮ ವಿವಾಹ ಪೂರ್ವ ಫೋಟೋ ಶೂಟ್‌ಗಾಗಿ ಅರ್ಜುನ್, ತನ್ನ ನಿಶ್ಚಿತ ವಧು ಮತ್ತು ಆಕೆಯ ಚಿಕ್ಕಪ್ಪನೊಂದಿಗೆ ಗೋರಿ ಧಾಮ್‌ಗೆ ಭೇಟಿ ನೀಡಿದ್ದರು.

ಬೆಟ್ಟಗಳ ನಡುವೆ ದೇವಾಲಯದ ಆವರಣದ ಬಳಿ ಚಿಕ್ಕಪ್ಪ ವಿಶ್ರಮಿಸುತ್ತಿದ್ದರೆ, ಈ ಜೋಡಿ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಲು ಬೆಟ್ಟದ ಕೆಳಗಿನ ಸರೋವರದ ತೀರಕ್ಕೆ ತೆರಳಿದ್ದರು. ಸರೋವರದ ಸೌಂದರ್ಯಕ್ಕೆ ಮನಸೋತ ಅರ್ಜುನ್, ಫೋಟೋ ಶೂಟ್ ನಡುವೆಯೇ ಸ್ನಾನ ಮಾಡಲು ನೀರಿನ ಹತ್ತಿರ ತೆರಳಿದ್ದಾರೆ. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಕಾಲು ಜಾರಿ ಅವರು ಸರೋವರದ ಆಳವಾದ ಕಂದಕದಂತಹ ನೀರಿಗೆ ಬಿದ್ದಿದ್ದಾರೆ. ಕಣ್ಣೆದುರೇ ತನ್ನ ಭಾವಿ ಪತಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಆ ಯುವತಿ ಆಘಾತಕ್ಕೊಳಗಾಗಿ, ಜೋರಾಗಿ ಕೂಗುತ್ತಾ ನೆರವಿಗಾಗಿ ಯತ್ನಿಸಿದ್ದಾರೆ. ಆಕೆಯ ಆಕ್ರಂದನ ಕೇಳಿ ಧಾವಿಸಿದ ಪ್ರವಾಸಿಗರು ತಕ್ಷಣವೇ ಪೊಲೀಸರು ಮತ್ತು ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಧಾವಿಸಿ ಶೋಧ ಕಾರ್ಯ ಆರಂಭಿಸಿದರೂ, ಸರೋವರದ ಅತಿ ಆಳ ಮತ್ತು ಕತ್ತಲೆಯ ಕಾರಣದಿಂದಾಗಿ ಮಂಗಳವಾರದ ಕಾರ್ಯಾಚರಣೆಗೆ ಅಡ್ಡಿಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಉದಯಪುರದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ವಿಶೇಷ ತಜ್ಞರ ತಂಡವನ್ನು ಕರೆಸಲಾಯಿತು.

ಮತ್ತಷ್ಟು ಓದಿ: ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಬುಧವಾರ ಮುಂಜಾನೆ, ಎಸ್​ಡಿಆರ್​ಎಫ್​ ಮತ್ತು ರಾಜ್‌ಸಮಂದ್ ನಾಗರಿಕ ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಿದವು. ಬೆಟ್ಟದ ಕಡಿದಾದ ಮತ್ತು ದುರ್ಗಮ ಹಾದಿಯಾಗಿದ್ದರಿಂದ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು. ಕೊನೆಗೆ ಹಲವಾರು ಗಂಟೆಗಳ ಕಠಿಣ ಶ್ರಮದ ನಂತರ ಅರ್ಜುನ್ ಅವರ ದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.

ವಿಡಿಯೋ

ಈ ಕಷ್ಟದ ಸಮಯದಲ್ಲಿ ಸ್ಥಳೀಯ ಗ್ರಾಮಸ್ಥರು ಮತ್ತು ರಕ್ಷಣಾ ಪಡೆಗಳು ತೋರಿದ ಮಾನವೀಯತೆ ಶ್ಲಾಘನೀಯ. ಕಣಿವೆಯಂತಹ ಸರೋವರದ ಆಳದಿಂದ ಕಡಿದಾದ ಬೆಟ್ಟದ ತುದಿಯವರೆಗೆ ಅರ್ಜುನ್ ಅವರ ಮೃತದೇಹವನ್ನು ಹೊತ್ತು ತರಲು ಗ್ರಾಮಸ್ಥರು ಪೊಲೀಸರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಸದ್ಯ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಇಡೀ ಕುಟುಂಬ ಆಘಾತದಲ್ಲಿ ಮುಳುಗಿದೆ.

ಫೋಟೋ ಶೂಟ್‌ಗಳ ನೆಪದಲ್ಲಿ ನಿಸರ್ಗದ ಆಕರ್ಷಣೆಗೆ ಒಳಗಾಗುವಾಗ ಸುರಕ್ಷತೆಯನ್ನು ಮರೆಯಬಾರದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಮದುವೆಯ ಮಂಟಪ ಏರಬೇಕಾಗಿದ್ದ ಯುವಕನ ಶವಯಾತ್ರೆ ನೋಡುವಂತಾದದ್ದು ವಿಧಿಯ ಕ್ರೂರ ವೈಪರೀತ್ಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *