ಉಡುಪಿ, ಜೂನ್ 12: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಜೋಸೆಫ್ ವಿಜಯ್ (Joseph Vijay) ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಮಧ್ಯಾಹ್ನ 3:00 ಗಂಟೆಗೆ ಸಿಎಂ ವಿಜಯ್ ಅವರು ಕೊಲ್ಲೂರಿಗೆ ಆಗಮಿಸಲಿದ್ದು, ಈ ಕುರಿತು ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗಕ್ಕೆ ಮೌಖಿಕ ಮತ್ತು ಲಿಖಿತ ಆದೇಶಗಳನ್ನು ನೀಡಲಾಗಿದೆ. ಸಿಎಂ ವಿಜಯ್ ಅವರನ್ನು ದೇವಸ್ಥಾನದ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ನಿಯಮಾವಳಿ ಮತ್ತು ಪ್ರೋಟೋಕಾಲ್ ಪ್ರಕಾರ (Protocol) ಅವರಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಗೌರವ ಸಲ್ಲಿಸಿ ದೇವಳದ ಒಳಗೆ ಕರೆದೊಯ್ಯಲಾಗುವುದು. ಬಳಿಕ ಅವರು ದೇವಿಯ ದರ್ಶನ ಪಡೆದು, ದೇವಸ್ಥಾನದ ಆವರಣವನ್ನು ವೀಕ್ಷಿಸಿ ತೆರಳಲಿದ್ದಾರೆ.
ಸಿಎಂ ವಿಜಯ್ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಯಾವುದೇ ರೀತಿಯ ವಿಶೇಷ ಪೂಜೆಗಳಿರುವುದಿಲ್ಲ ಎಂದು ಅರ್ಚಕ ನಿತ್ಯಾನಂದ ಅಡಿಗ ಸ್ಪಷ್ಟಪಡಿಸಿದ್ದಾರೆ. ಕೊಲ್ಲೂರು ಕ್ಷೇತ್ರಕ್ಕೆ ಯಾರೇ ವಿವಿಐಪಿಗಳು ಬಂದರೂ ದೇವಸ್ಥಾನದಲ್ಲಿ ಪ್ರತ್ಯೇಕ ಪೂಜೆ ಮಾಡುವ ಪರಿಪಾಠವಿಲ್ಲ. ಉಳಿದ ದೇವಸ್ಥಾನಗಳಂತೆ ಗಣ್ಯರು ಬಂದಾಗ ಪದೇ ಪದೇ ಮಂಗಳಾರತಿ ಮಾಡುವ ಸಂಪ್ರದಾಯ ನಮ್ಮಲ್ಲಿಲ್ಲ. ಸಾಮಾನ್ಯ ಭಕ್ತರಂತೆ ಸಿಎಂ ವಿಜಯ್ ಅವರು ಕೂಡ ದೇವಿಯ ದರ್ಶನ ಪಡೆಯಲಿದ್ದಾರೆ. ಒಂದು ವೇಳೆ ಅವರು ಬರುವ ಸಮಯಕ್ಕೆ ಮಹಾಮಂಗಳಾರತಿ ನಡೆಯುತ್ತಿದ್ದರೆ, ಅದನ್ನು ವೀಕ್ಷಿಸುವ ಅವಕಾಶ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಇಂದು ಶುಕ್ರವಾರವಾಗಿರುವುದರಿಂದ ಸಂಜೆ ಪ್ರದೋಷ ಕಾಲಕ್ಕೂ ಮುನ್ನ ದೇವಸ್ಥಾನದ ನಿರಂತರ ಸಂಪ್ರದಾಯದಂತೆ ರಥೋತ್ಸವ/ಉತ್ಸವ ನಡೆಯಲಿದ್ದು, ಇದು ವಿಜಯ್ ಅವರಿಗಾಗಿ ಮಾಡುತ್ತಿರುವ ವಿಶೇಷ ಸಿದ್ಧತೆಯಲ್ಲ, ಪ್ರತಿ ಶುಕ್ರವಾರದ ಸಾಮಾನ್ಯ ಪೂಜಾ ಪ್ರಕ್ರಿಯೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ