Headlines

ಭಾರತದ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ದಾಳಿ; ಅಮೆರಿಕದ ರಾಯಭಾರಿಗೆ ಭಾರತ 2ನೇ ಬಾರಿ ಸಮನ್ಸ್ – Kannada News | India summons US diplomat for second time over attacks on ships with India crew

ನವದೆಹಲಿ, ಜೂನ್ 12: ಅಮೆರಿಕ ಪಡೆಗಳು ಗಲ್ಫ್ ಪ್ರದೇಶದಲ್ಲಿ ಭಾರತೀಯ ಸಿಬ್ಬಂದಿಯಿದ್ದ ವಾಣಿಜ್ಯ ಹಡಗುಗಳ ಮೇಲೆ ನಡೆಸುತ್ತಿರುವ ಸರಣಿ ಕ್ಷಿಪಣಿ ದಾಳಿಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ನವದೆಹಲಿಯಲ್ಲಿರುವ ಅಮೆರಿಕದ (United States) ಹಿರಿಯ ರಾಜತಾಂತ್ರಿಕ ಅಧಿಕಾರಿ ಜೇಸನ್ ಮೀಕ್ಸ್ ಅವರಿಗೆ ಕೇವಲ 2 ದಿನಗಳಲ್ಲಿ ಎರಡನೇ ಬಾರಿಗೆ ಸಮನ್ಸ್ ಜಾರಿಗೊಳಿಸಿದೆ. ಪಶ್ಚಿಮ ಏಷ್ಯಾ ಮತ್ತು ಒಮಾನ್ ಕರಾವಳಿಯ ಬಳಿ ಭಾರತೀಯ ನಾವಿಕರನ್ನು ಒಳಗೊಂಡ ವಾಣಿಜ್ಯ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕದ ಮಿಲಿಟರಿ ಪಡೆಗಳು ನಡೆಸುತ್ತಿರುವ ಸರಣಿ ದಾಳಿಗಳು ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಬಾಂಧವ್ಯದಲ್ಲಿ ಬಿರುಕು ಮೂಡಿಸಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಅಮೆರಿಕದ ಪ್ರಭಾರ ರಾಯಭಾರಿ ಜೇಸನ್ ಮೀಕ್ಸ್ ಅವರನ್ನು ಕರೆಸಿಕೊಂಡು ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಅಮೆರಿಕ ಪಡೆಗಳು ಇರಾನ್ ತೈಲ ದಿಗ್ಬಂಧನ ಉಲ್ಲಂಘನೆಯ ಆರೋಪದ ಮೇಲೆ ‘ಎಂ/ಟಿ ಜಲವೀರ್’ ಎಂಬ ಹಡಗಿನ ಇಂಜಿನ್ ಕೋಣೆಗೆ ಎರಡು ‘ಹೆಲ್‌ಫೈರ್ ಕ್ಷಿಪಣಿ’ಗಳನ್ನು ಉಡಾಯಿಸಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡ ಬೆನ್ನಲ್ಲೇ ಭಾರತ ಈ ಕಠಿಣ ಕ್ರಮ ಕೈಗೊಂಡಿದೆ. ಈ ಹಡಗಿನಲ್ಲಿ ಭಾರತೀಯ ಸಿಬ್ಬಂದಿ ಕೂಡ ಇದ್ದರು.

ಇದನ್ನೂ ಓದಿ: ಒಮಾನ್ ಬಳಿ ಭಾರತೀಯ ಸಿಬ್ಬಂದಿಯಿದ್ದ ಹಡಗಿನ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ಹಡಗುಗಳ ಮೇಲೆ ಇತ್ತೀಚೆಗೆ ನಡೆದ ಮೂರು ದಾಳಿಗಳು ಈ ಕಠಿಣ ನಿರ್ದೇಶನಕ್ಕೆ ಕಾರಣವಾಗಿವೆ. ಇದರಲ್ಲಿ ಓಮನ್ ಕರಾವಳಿಯ ಬಳಿ ನಡೆದ ಒಂದು ಭೀಕರ ದಾಳಿಯು ಮೂವರು ಭಾರತೀಯ ನಾವಿಕರ ಜೀವವನ್ನು ಬಲಿ ತೆಗೆದುಕೊಂಡಿತ್ತು. ಅಧಿಕೃತ ಅಂದಾಜಿನ ಪ್ರಕಾರ, ಭಾರತದ ಧ್ವಜವನ್ನು ಹೊಂದಿರುವ 13 ಹಡಗುಗಳಲ್ಲಿ ಸದ್ಯ 622 ಭಾರತೀಯ ನಾವಿಕರು ಹಾರ್ಮುಜ್ ಜಲಸಂಧಿಯ ಪೂರ್ವ ಮತ್ತು ಪಶ್ಚಿಮದ ಕಡಲ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದು ಕೇವಲ ಒಂದೇ ವಾರದಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ನಡೆದ ಮೂರನೇ ದಾಳಿಯಾಗಿದೆ. ಇದಕ್ಕೂ ಮುನ್ನ ನಡೆದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದರು. ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಜೇಸನ್ ಮೀಕ್ಸ್ ಅವರ ಮುಂದೆ ಪ್ರಮುಖವಾಗಿ ಮೂರು ಬೇಡಿಕೆ ಹಾಗೂ ಆಕ್ಷೇಪಗಳನ್ನು ಮಂಡಿಸಿದ್ದಾರೆ.

ಇದನ್ನೂ ಓದಿ: Kharg Island: ವೆನೆಜುವೆಲಾ ಬಳಿಕ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟ ಟ್ರಂಪ್; ಇರಾನ್​ಗೆ ಈ ಸಣ್ಣ ಪ್ರದೇಶವೇಕೆ ಬಹಳ ಮುಖ್ಯ?

ಕಡಲ ವ್ಯಾಪಾರ ಮಾರ್ಗಗಳಲ್ಲಿ ಸಂಚರಿಸುವ ಯಾವುದೇ ದೇಶದ ಹಡಗುಗಳಾಗಿದ್ದರೂ, ಅದರಲ್ಲಿರುವ ನಾಗರಿಕ ಸಿಬ್ಬಂದಿ ಮತ್ತು ಭಾರತೀಯ ನಾವಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ನಿರಪರಾಧಿ ನಾವಿಕರ ಜೀವಕ್ಕೆ ಕುತ್ತು ತರುವ ಇಂತಹ ದಾಳಿಗಳು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ. ಗಲ್ಫ್ ಮತ್ತು ಒಮಾನ್ ಕರಾವಳಿ ವಲಯದಲ್ಲಿ ಅಮೆರಿಕ ಮಿಲಿಟರಿ ನಡೆಸುತ್ತಿರುವ ಇಂತಹ ಏಕಪಕ್ಷೀಯ ಆಕ್ರಮಣಕಾರಿ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಎಲ್ಲಾ ದೇಶಗಳು ಸಂಯಮ ಕಾಯ್ದುಕೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಆರ್ಥಿಕ ಬೆನ್ನೆಲುಬಾಗಿರುವ ತೈಲ ಮಾರುಕಟ್ಟೆಯನ್ನು ಧ್ವಂಸಗೊಳಿಸಲು ಮತ್ತು ಖಾರ್ಗ್ ದ್ವೀಪವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕಡಲ ದಿಗ್ಬಂಧನ ವಿಧಿಸಿದ್ದಾರೆ. ಈ ದಿಗ್ಬಂಧನವನ್ನು ಮೀರಿ ಇರಾನ್ ತೈಲ ಸಾಗಿಸುವ ಹಡಗುಗಳ ಮೇಲೆ ಅಮೆರಿಕದ ಯುದ್ಧ ವಿಮಾನಗಳು ದಾಳಿ ಮಾಡುತ್ತಿವೆ. ಆದರೆ, ಇಲ್ಲಿನ ಬಹುತೇಕ ಅಂತಾರಾಷ್ಟ್ರೀಯ ಹಡಗುಗಳಲ್ಲಿ ಭಾರತದ ನಾವಿಕರು ಕೆಲಸ ಮಾಡುತ್ತಿರುವುದರಿಂದ ಭಾರತವು ಈಗ ನೇರವಾಗಿ ಅಮೆರಿಕದ ಕೃತ್ಯದ ವಿರುದ್ಧ ರಾಜತಾಂತ್ರಿಕವಾಗಿ ವಿರೋಧ ವ್ಯಕ್ತಪಡಿಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *