ಕೊಲ್ಕತ್ತಾ, ಜೂನ್ 12: ಸಂಸತ್ತಿನಲ್ಲಿ ಪ್ರತ್ಯೇಕ ಬಣ ರಚಿಸಲು ಮುಂದಾಗಿರುವ ಟಿಎಂಸಿಯ 19 ಬಂಡಾಯ ಸಂಸದರ ಪಟ್ಟಿಯಲ್ಲಿ ತಮ್ಮ ಹೆಸರು ಕೇಳಿಬಂದ ಮರುದಿನವೇ, ತೃಣಮೂಲ ಕಾಂಗ್ರೆಸ್ (TMC) ಸಂಸದ ಶತ್ರುಘ್ನ ಸಿನ್ಹಾ ತಮ್ಮ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ. ಕಷ್ಟದ ಸಮಯದಲ್ಲಿ ನಾನು ಎಂದಿಗೂ ಮಮತಾ ಬ್ಯಾನರ್ಜಿ ಅವರ ಕೈ ಬಿಡುವುದಿಲ್ಲ. ನಾನು ಸಂಕಷ್ಟದಲ್ಲಿದ್ದಾಗ ಮಮತಾ ಸಹಾಯ ಮಾಡಿದ್ದಾರೆ. ಈಗ ನನ್ನ ಸರದಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಅಭಿಷೇಕ್ ಬ್ಯಾನರ್ಜಿ ಆಗಲಿ ಅಥವಾ ಬೇರೆ ಯಾರೇ ಆಗಲಿ ನನ್ನ ನಾಯಕರಲ್ಲ. ಮಮತಾ ಬ್ಯಾನರ್ಜಿ ಮಾತ್ರ ನಮ್ಮ ನಾಯಕಿ” ಎಂದು ಹೇಳಿರುವ ಶತ್ರುಘ್ನ ಸಿನ್ಹಾ ತಾವು ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲೇ ಕೆಲಸ ಮುಂದುವರಿಸುವುದಾಗಿ ಶಪಥ ಮಾಡಿದ್ದಾರೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಟಿಎಂಸಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ
ಇದೇ ವೇಳೆ ಯಾರ ಹೆಸರನ್ನೂ ಉಲ್ಲೇಖಿಸದೆ ಮಾತನಾಡಿದ ಶತ್ರುಘ್ನ ಸಿನ್ಹಾ, ನನಗೆ ಬಿಜೆಪಿಯಲ್ಲಿ ಹಲವು ಸ್ನೇಹಿತರಿದ್ದಾರೆ. ಅವರು ನನಗೆ ಏನನ್ನಾದರೂ ಆಫರ್ ಮಾಡಿದ್ದರೆ ಅದು ಒಳ್ಳೆಯ ಉದ್ದೇಶದಿಂದಲೇ ಇರಬಹುದು.ಆದರೆ ನನಗೆ ಮಮತಾ ಬ್ಯಾನರ್ಜಿ ಅವರೊಂದಿಗೆ ಇರುವುದೇ ಅತ್ಯಂತ ಸೂಕ್ತವಾದುದು ಎಂದು ಒಪ್ಪಿಕೊಂಡಿದ್ದಾರೆ.
#WATCH | Delhi: TMC MP Shatrughan Sinha says, “I was with Mamata Didi, I am with Mamata Didi and I will always be with Mamata Didi… Neither Abhishek Banerjee nor anyone else is my leader. My leader is only Mamata Banerjee… This was the time to show unity and stand with Mamata… pic.twitter.com/ImL9tMpfuQ
— ANI (@ANI) June 12, 2026
ಟಿಎಂಸಿ ಎದುರಿಸುತ್ತಿರುವ ಈ ಪ್ರಸ್ತುತ ಬಿಕ್ಕಟ್ಟಿನ ಸಮಯದಲ್ಲಿ ತಾವು ಪಕ್ಷ ಬದಲಾಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಶತ್ರುಘ್ನ ಸಿನ್ಹಾ ಒತ್ತಿ ಹೇಳಿದ್ದಾರೆ. “ನಾನು ಯಾವಾಗಲೂ ಮಮತಾ ಬ್ಯಾನರ್ಜಿ ಅವರೊಂದಿಗೆ ಇರುತ್ತೇನೆ. ನಾನು ಒಬ್ಬನೇ ಉಳಿದರೂ ‘ಏಕ್ಲಾ ಚಲೋ’ ಎನ್ನುತ್ತಾ ಅವರೊಂದಿಗೇ ಇರುತ್ತೇನೆ. ಸದ್ಯಕ್ಕೆ ನಾನು ಎಲ್ಲಿಗೂ ಹೋಗುವ ಆಲೋಚನೆ ಮಾಡಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ನಾನು ಬೇಕಾ, ಅಭಿಷೇಕ್ ಬ್ಯಾನರ್ಜಿ ಬೇಕಾ ನಿರ್ಧರಿಸಿ; ಮಮತಾಗೆ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಸವಾಲು
ಮಮತಾ ಬ್ಯಾನರ್ಜಿ ಅವರ ರಾಜಕೀಯ ಉತ್ತರಾಧಿಕಾರಿ ಎಂದೇ ವ್ಯಾಪಕವಾಗಿ ಬಿಂಬಿತವಾಗಿರುವ ಅಭಿಷೇಕ್ ಬ್ಯಾನರ್ಜಿ ಅವರೇ ಪಕ್ಷದ ನಾಯಕತ್ವದ ಶೈಲಿಯನ್ನು ಪ್ರಶ್ನಿಸುತ್ತಿರುವ ಅತೃಪ್ತ ನಾಯಕರ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಇತ್ತೀಚೆಗಷ್ಟೇ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ 19 ಅತೃಪ್ತ ಟಿಎಂಸಿ ಸಂಸದರ ಗುಂಪೊಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ತಾವು ಸಂಸತ್ತಿನಲ್ಲಿ ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುವುದಾಗಿ ಮತ್ತು ಬಿಜೆಪಿಯನ್ನು ಬೆಂಬಲಿಸುವುದಾಗಿ ತಿಳಿಸಿ ಮಮತಾ ಬ್ಯಾನರ್ಜಿಗೆ ದೊಡ್ಡ ಆಘಾತ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ, ಶತ್ರುಘ್ನ ಸಿನ್ಹಾ ಅವರು ತಾವು ಬಂಡಾಯ ಬಣದಲ್ಲಿಲ್ಲ, ಮಮತಾ ಬ್ಯಾನರ್ಜಿ ಅವರ ಪರವಾಗಿಯೇ ಇರುವುದಾಗಿ ಪ್ರಕಟಿಸಿರುವುದು ಮಮತಾ ಬ್ಯಾನರ್ಜಿ ಅವರಿಗೆ ಸ್ವಲ್ಪ ನಿರಾಳತೆ ತಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ