Headlines

ಕರ್ನಾಟಕ ಕರಾವಳಿಯ ಸೌಂದರ್ಯಕ್ಕೆ ಮನಸೋತ ಆನಂದ್ ಮಹೀಂದ್ರಾ! ಶರಾವತಿ ಹಿನ್ನೀರಿನ ಸೌಂದರ್ಯ ಬಣ್ಣಿಸಿ ಪೋಸ್ಟ್ – Kannada News | Anand Mahindra Praises Honnavar Backwaters and Sharavathi Mangroves as Karnataka’s Hidden Gem

ಶರಾವತಿ ನದಿ ಹಿನ್ನೀರು ಸೌಂದರ್ಯ (ಚಿತ್ರ ಕೃಪೆ: ಆನಂದ್ ಮಹೀಂದ್ರಾ ಎಕ್ಸ್ ಹ್ಯಾಂಡಲ್)Image Credit source: @anandmahindra

ಬೆಂಗಳೂರು, ಜೂನ್ 15: ಭಾರತದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಅಷ್ಟಾಗಿ ಪರಿಚಿತವಲ್ಲದ, ಆದರೆ ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ರಹಸ್ಯ ತಾಣಗಳ ಹುಡುಕಾಟದಲ್ಲಿದ್ದೇನೆ ಎಂದಿರುವ ಖ್ಯಾತ ಉದ್ಯಮಿ, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಕಣ್ಣು ಈಗ ಕರ್ನಾಟಕದ ಕರಾವಳಿಯ ಮೇಲಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದ ಮನಮೋಹಕ ಹಿನ್ನೀರು (Backwaters) ಮತ್ತು ಶರಾವತಿ ನದಿಯ ಸೌಂದರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಇದು ಕೇರಳದ ಹಿನ್ನೀರಿನಷ್ಟೇ ಪ್ರಚಾರಕ್ಕೆ ಅರ್ಹವಾದ ಅದ್ಭುತ ಜಾಗ ಎಂದು ಬಣ್ಣಿಸಿದ್ದಾರೆ.

  • ಹೊನ್ನಾವರ ಸೌಂದರ್ಯಕ್ಕೆ ಆನಂದ್ ಮಹೀಂದ್ರಾ ಫಿದಾ.
  • ಕೇರಳ ಹಿನ್ನೀರಿಗೆ ಹೊನ್ನಾವರ ಸಮಾನ ಎಂದ ಉದ್ಯಮಿ.
  • ಕಾಂಡ್ಲಾ ವನಗಳ ಪರಿಸರ ಮಹತ್ವಕ್ಕೆ ಶ್ಲಾಘನೆ.

ಆನಂದ್ ಮಹೀಂದ್ರಾ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹೊನ್ನಾವರದ ಸುಂದರ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ‘ನಾವು ಯಾವಾಗಲೂ ಕೇರಳದ ಹಿನ್ನೀರನ್ನು ಸಂಭ್ರಮಿಸುತ್ತೇವೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ಕೇರಳಕ್ಕೆ ಸರಿಸಾಟಿಯಾಗಿ ಗಮನ ಸೆಳೆಯಲು ಅರ್ಹವಾದ ಒಂದು ರಹಸ್ಯ ರತ್ನವಿದೆ. ಜೋಗ್ ಫಾಲ್ಸ್‌ನಲ್ಲಿ ಭೋರ್ಗರೆದು ಹರಿಯುವ ಅದೇ ಶರಾವತಿ ನದಿ, ಕೊನೆಗೆ ಹೊನ್ನಾವರದಲ್ಲಿ ಅತ್ಯಂತ ಶಾಂತವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೊನ್ನಾವರ ಒಂದು ಮಾಂತ್ರಿಕ ಭೂದೃಶ್ಯವಾಗಿದೆ ಎಂಬುದಂತೂ ಸ್ಪಷ್ಟ’ ಎಂದು ಬರೆದುಕೊಂಡಿದ್ದಾರೆ.

ಪರಿಸರ ರಕ್ಷಕ ಕಾಂಡ್ಲಾ ವನಗಳ ಮಹತ್ವ

ಕೇವಲ ಪ್ರಕೃತಿ ಸೌಂದರ್ಯ ಮಾತ್ರವಲ್ಲದೆ, ಹೊನ್ನಾವರದ ಪರಿಸರ ವ್ಯವಸ್ಥೆಯ ಬಗ್ಗೆಯೂ ಮಹೀಂದ್ರಾ ಮಾತನಾಡಿದ್ದಾರೆ. ‘ಇಲ್ಲಿನ ಕಾಂಡ್ಲಾ ವನಗಳು (Mangrove forests), ಅಂಕುಡೊಂಕಾದ ಜಲಮಾರ್ಗಗಳು ಮತ್ತು ಕನ್ನಡಿಯಂತೆ ಹೊಳೆಯುವ ಹಿನ್ನೀರು ಅದ್ಭುತವಾಗಿದೆ. ಪ್ರಕೃತಿಯ ಅತ್ಯಂತ ಪರಿಣಾಮಕಾರಿ ಕರಾವಳಿ ರಕ್ಷಕರಲ್ಲಿ ಕಾಂಡ್ಲಾ ವನಗಳು ಸಹ ಸೇರಿವೆ. ಹೀಗಾಗಿ ಹೊನ್ನಾವರದ ಸೌಂದರ್ಯಕ್ಕೆ ಅದರ ಪರಿಸರ ಪ್ರಾಮುಖ್ಯತೆಯೂ ಸಮನಾಗಿ ಹೊಂದಿಕೆಯಾಗುತ್ತದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

ಆನಂದ್ ಮಹೀಂದ್ರಾ ಎಕ್ಸ್ ಸಂದೇಶ

ಆನಂದ್ ಮಹೀಂದ್ರಾರ ಈ ಪೋಸ್ಟ್‌ಗೆ ಎಕ್ಸ್ ಬಳಕೆದಾರರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪೋಸ್ಟ್‌ಗೆ ಉತ್ತರಿಸಿದ ವ್ಯಕ್ತಿಯೊಬ್ಬರು, ‘ಇದು ತುಂಬಾ ಸತ್ಯ, ನಾನು ಒಂದೆರಡು ವರ್ಷಗಳ ಹಿಂದೆ ಶರಾವತಿ ಮತ್ತು ಹೊನ್ನಾವರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಸೌಂದರ್ಯಕ್ಕೆ ನಾನು ಬೆರಗಾಗಿದ್ದೆ! ನಾನು ಅಲ್ಲಿ ತೆಗೆದ ಈ ಚಿತ್ರ ಯಾವಾಗಲೂ ನನ್ನ ನೆನಪಿನಲ್ಲಿ ಉಳಿಯುತ್ತದೆ’ ಎಂದು ತಾವು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಹೊನ್ನಾವರದ ಸುಂದರ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಶಿರಸಿ: 36 ವರ್ಷಗಳ ಬಳಿಕ 400 ಕೋಟಿ ರೂ. ಮೌಲ್ಯದ 379 ಎಕರೆ ಅರಣ್ಯ ಭೂಮಿ ವಶಕ್ಕೆ ಪಡೆಯಲು ಇಲಾಖೆ ಸಜ್ಜು

ಆನಂದ್ ಮಹೀಂದ್ರಾ ಅವರ ಈ ಪೋಸ್ಟ್‌ನಿಂದಾಗಿ ಕರ್ನಾಟಕದ ಕರಾವಳಿ ಪ್ರವಾಸೋದ್ಯಮ ಮತ್ತು ಹೊನ್ನಾವರದ ಕಾಂಡ್ಲಾ ವನಗಳಿಗೆ ಮತ್ತಷ್ಟು ಪ್ರಚಾರ ಸಿಕ್ಕಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *