ಬೆಂಗಳೂರು, (ಜೂನ್ 15): ಆರ್ಎಸ್ಎಸ್ (RSS) ನೋಂದಣಿಗೆ ಆಗ್ರಹಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬರೆದ ಬಹಿರಂ ಪತ್ರಕ್ಕೆ ಸ್ವತಃ RSS ಮುಖ್ಯಸ್ಥ ಭಾಗವತ್ (Mohan bhagwat) ಪ್ರತಿಕ್ರಿಯಿಸಿದ್ದು, ಇದೊಂದು ರಾಜಕೀಯ ಗಿಮಿಕ್, ನಮ್ಮ ಚಟುವಟಿಕೆಗಳು ರಹಸ್ಯವಾಗಿಲ್ಲ. ಹಿಂದೂ ಧರ್ಮ ಎಲ್ಲಾದರೂ ರಿಜಿಸ್ಟರ್ ಆಗಿದೆಯೇ? ಸರ್ಕಾರಿ ಅನುದಾನ ಪಡೆಯುವವರಿಗೆ ಮಾತ್ರ ನೋಂದಣಿ ಅಗತ್ಯವಿದ್ದು, 1950ರಲ್ಲೇ ನಮ್ಮ ಸಂವಿಧಾನವನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಾಂಶಗಳು
- ಆರ್ಎಸ್ಎಸ್ ಬಗ್ಗೆ ಸಚಿವ ಪ್ರಿಯಾಂಕ್ ಪತ್ರಕ್ಕೆ ಮೋಹನ್ ಭಾಗವತ್ ಪ್ರತಿಕ್ರಿಯೆ
- ನೋಂದಣಿ ಆಗದಿರುವ ಅನೇಕ ಚಟುವಟಿಕೆ ನಡೆಯುತ್ತವೆ, ನಾವು ಕದ್ದುಮುಚ್ಚಿ ಯಾವುದನ್ನೂ ಮಾಡುತ್ತಿಲ್ಲ
- ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಹಸ್ಯ ಸಂಘಟನೆ ಅಲ್ಲ
- ಹಿಂದೂ ಧರ್ಮವೇ ನೋಂದಣಿ ಆಗಿಲ್ಲ, ಸಂಘವೂ ಆಗಿಲ್ಲ
- ಕೇರಳಂನ ತ್ರಿಶ್ಶೂರ್ನಲ್ಲಿ ನಡೆದ ಸಂವಾದದಲ್ಲಿ ಮೋಹನ್ ಭಾಗವತ್ ಹೇಳಿಕೆ
ಕೇರಳಂನ ತ್ರಿಶ್ಶೂರ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ನೋಂದಣಿ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಮೋಹನ್ ಭಾಗವತ್, ಇದಕ್ಕೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ನೋಂದಣಿ ಆಗದೇ ಇರುವ ಅನೇಕ ಚಟುವಟಿಕೆಗಳು ನಡೆಯುತ್ತಲೇ ಇವೆ. ನಾವು ಕದ್ದುಮುಚ್ಚಿ ಯಾವುದೂ ಮಾಡುತ್ತಿಲ್ಲ. ನಮ್ಮ ಎಲ್ಲ ಚಟುವಟಿಕೆಗಳು ತೆರೆದ ಮೈದಾನದಲ್ಲೇ ನಡೆಯುತ್ತವೆ. ಜನರನ್ನು ಕರೆದು ಸಂಘದ ಬಗ್ಗೆ ಅವರಿಗೆ ಮುಕ್ತವಾಗಿ ತಿಳಿಸುತ್ತೇವೆ. ನಮ್ಮ ಕಾರ್ಯಕರ್ತರು ಪ್ರತಿದಿನ ಜನರ ನಡುವೆ ಇರುತ್ತಾರೆ. ಜನರು ನಮ್ಮನ್ನು ದಿನನಿತ್ಯ ನೋಡುತ್ತಾರೆ. ಹೀಗಿರುವಾಗ ನಾವು ರಹಸ್ಯವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ಸುಳ್ಳು ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: RSS ವಿಚಾರವಾಗಿ ಮೋಹನ್ ಭಾಗವತ್ಗೆ ಪ್ರಿಯಾಂಕ್ ಖರ್ಗೆ ಪತ್ರ, ಈ 8 ಅಂಶಗಳಿಗೆ ವಿವರ ನೀಡುವಂತೆ ಆಗ್ರಹ
ಇದು ಕೇವಲ ರಾಜಕೀಯವಷ್ಟೇ. ರಾಜಕೀಯದಲ್ಲಿ ಈ ಎಲ್ಲ ಗಿಮಿಕ್ ಗಳನ್ನೂ ಮಾಡಲಾಗುತ್ತದೆ. ನ ಸಂಘದ ವಿರುದ್ಧ ಇಂತಹ ಗಿಮಿಕ್ಗಳನ್ನು ಮಾಡಲಾಗುತ್ತಿದೆ. ನಾವು ಇದಕ್ಕೆಲ್ಲಾ ಒಗ್ಗಿಕೊಂಡಿದ್ದೇವೆ. ಕಳೆದ ಹಲವು ವರ್ಷಗಳಿಂದ ಇಂತಹ ಆರೋಪಗಳನ್ನು ನಾವು ಎದುರಿಸಿಕೊಂಡು ಬಂದಿದ್ದೇವೆ. ನಮ್ಮ ಕೆಲಸಗಳಿಗೆ ಅಡ್ಡಿಪಡಿಸಲು ಮತ್ತು ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಅನುಮಾನ ಮೂಡಿಸಲು ಈ ರೀತಿ ಮಾಡಲಾಗುತ್ತಿದೆ, ಆದರೆ ಅದು ಸಾಧ್ಯವಿಲ್ಲ. ನಮಗೆ ಇದರ ಅರಿವಿದೆ. ಇದೆಲ್ಲವನ್ನೂ ಎದುರಿಸಿಕೊಂಡೇ ಬಂದಿದ್ದೇವೆ ಎಂದು ಹೇಳಿದ್ದಾರೆ.
ಹಿಂದೂ ಧರ್ಮ ಎಲ್ಲಾದರೂ ರಿಜಿಸ್ಟರ್ ಆಗಿದೆಯೇ?
ನೋಂದಣಿಯಾಗದೆ ಪ್ರಪಂಚದಲ್ಲಿ ಅನೇಕ ವಿಷಯಗಳು ನಡೆಯುತ್ತಿವೆ. ಉದಾಹರಣೆಗೆ, ‘ಹಿಂದೂ ಧರ್ಮ’ ಎಲ್ಲಾದರೂ ನೋಂದಣಿಯಾಗಿದೆಯೇ? ಸರ್ಕಾರದಿಂದ ನಿಧಿ ಪಡೆಯಲು ಬಯಸುವವರಿಗೆ ಮಾತ್ರ ನೋಂದಣಿಯ ಅಗತ್ಯವಿರುತ್ತದೆ ವಿನಃ ನಮಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಆರ್ಎಸ್ಎಸ್ ಬ್ರಿಟಿಷರ ಕಾಲದಲ್ಲೇ ಜನರ ಇಚ್ಛೆಯಿಂದ ಪ್ರಾರಂಭವಾದ ಸಂಸ್ಥೆ. 100 ವರ್ಷಗಳಿಂದ ಯಾರೂ ನಮಗೆ ರಿಜಿಸ್ಟರ್ ಮಾಡಿ ಎಂದು ಹೇಳಿಲ್ಲ. ನಮ್ಮದೇ ಆದ ಲಿಖಿತ ಸಂವಿಧಾನ ಇದೆ. ಅದನ್ನು 1950ರ ದಶಕದಲ್ಲೇ ನಾವು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆಗ ಸರ್ಕಾರ ಮೊದಲು ರಿಜಿಸ್ಟರ್ ಮಾಡಿ ಆಮೇಲೆ ಸಂವಿಧಾನ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿರಲಿಲ್ಲ.ಸಂಘದ ಬಗ್ಗೆ ಜನರ ಮನಸ್ಸಲ್ಲಿ ಅನುಮಾನ ಮೂಡಿಸುವ ಕೆಲಸ ಇದು. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಒಂದು ಕಡೆ ಸಂಘದ ಸಾಮಾಜಿಕ ಕೆಲಸಗಳಿಗೆ ಉತ್ತೇಜನ ನೀಡುತ್ತಿರಿ. ಮತ್ತೊಂದು ಕಡೆ ಅನುಮಾನ ಹುಟ್ಟಿಸುತ್ತೀರಿ. ಇದಕ್ಕೆಲ್ಲ ಯಾಕೆ ಉತ್ತರ ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 7:11 pm, Mon, 15 June 26