Headlines

ಕರ್ನಾಟಕ ಸೇರಿ ದೇಶಾದ್ಯಂತ ಮುಂಗಾರು ಕೊರತೆ: 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ – Kannada News | Monsoon Deficit 2026: IMD Reports 32 Percent Rain Shortage in India, Farmers fear in Karnataka

ಬೆಂಗಳೂರು, ಜೂನ್ 16: ದೇಶಾದ್ಯಂತ ತಡವಾಗಿ ಪ್ರವೇಶಿಸಿದ ನೈಋತ್ಯ ಮುಂಗಾರು (Monsoon Rain) ಆರಂಭದಲ್ಲೇ ತೀವ್ರ ಹಿನ್ನಡೆ ಅನುಭವಿಸಿದೆ. ಎಲ್ ನಿನೋ (El Nino) ಮಾರಕ ಪರಿಣಾಮದಿಂದಾಗಿ ದೇಶದ ಸುಮಾರು 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ ಸೃಷ್ಟಿಯಾಗಿದೆ. ಜೂನ್ 1 ರಿಂದ ಜೂನ್ 15 ರವರೆಗಿನ ಅವಧಿಯಲ್ಲಿ ದೇಶದ ಶೇಕಡಾ 65 ರಷ್ಟು ಭಾಗದಲ್ಲಿ ಭಾರಿ ಮಳೆ ಕೊರತೆಯಾಗಿದ್ದು, ಒಟ್ಟಾರೆ ಶೇಕಡಾ 32 ರಷ್ಟು ಇಳಿಕೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಆಘಾತಕಾರಿ ಮಾಹಿತಿ ನೀಡಿದೆ.

  • ದೇಶದ 200 ಜಿಲ್ಲೆಗಳಲ್ಲಿ ಮಳೆ ಅಭಾವ
  • ಕೃಷ್ಣಾ ನದಿ ಪಾತ್ರದ ಕೃಷಿ ನೀರು ಬಂದ್
  • ಬಿತ್ತನೆ ಕಾರ್ಯವಾಗದೆ ಕಂಗಾಲಾದ ಅನ್ನದಾತರು

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮಧ್ಯ ಭಾರತದಲ್ಲಿ ಶೇ 57 ಹಾಗೂ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ 41 ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಭಾರತದ ಕರ್ನಾಟಕ, ಕೇರಳ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಶೇ 9 ರಷ್ಟು ಒಣ ಹವಾಮಾನ ವರದಿಯಾಗಿದೆ. ಅತಿ ಕಡಿಮೆ ಮಳೆಯಾದ ರಾಜ್ಯಗಳ ಪೈಕಿ ಗುಜರಾತ್ (ಶೇ 75 ಕೊರತೆ) ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ ಶೇ 69 ರಷ್ಟು ಮಳೆ ಅಭಾವ ಕಂಡುಬಂದಿದೆ.

ಕರ್ನಾಟಕ ಗಡಿ ಭಾಗದಲ್ಲಿ ಕೃಷಿಗೆ ಕೃಷ್ಣಾ ನೀರು ಬಂದ್

ಜೈಪುರ ಮತ್ತು ಕೊಲ್ಹಾಪುರ ಭಾಗಗಳಲ್ಲಿ ಪರಿಸ್ಥಿತಿ ಕೈಮೀರಿದ್ದು, ಕೊಯ್ನಾ ಜಲಾಶಯದಿಂದ ಕರ್ನಾಟಕ ಗಡಿಯ ರಾಜಾಪುರ ಬ್ಯಾರೇಜ್‌ವರೆಗಿನ ಕೃಷ್ಣಾ ನದಿ ಪಾತ್ರದಲ್ಲಿ ಕೃಷಿಗಾಗಿ ನೀರು ಪೂರೈಸುವುದನ್ನು ಅಧಿಕಾರಿಗಳು ಸಂಪೂರ್ಣ ನಿಷೇಧಿಸಿದ್ದು, ಕೇವಲ ಕುಡಿಯುವ ನೀರಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ.

ಕರ್ನಾಟಕದಲ್ಲಿ ಮುಂಗಾರು ಕುಂಠಿತ: ಬಿತ್ತನೆ ಸ್ಥಗಿತ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಳ್ಳದ ಕಾರಣ ಬಿತ್ತನೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಬೀದರ್ ಜಿಲ್ಲೆಯಲ್ಲಿ ಕೇವಲ ಶೇಕಡಾ 5 ರಷ್ಟು ಮಳೆಯಾಗಿದ್ದು, ಶುಂಠಿ ನಾಟಿ ಮಾಡಿದ್ದ ರೈತರು ಬಾವಿ, ಬೋರ್‌ವೆಲ್‌ಗಳ ಅಂತರ್ಜಲ ಕುಸಿತದಿಂದಾಗಿ ಬೆಳೆ ಉಳಿಸಿಕೊಳ್ಳಲು ಹನಿ ನೀರಾವರಿ ಮೊರೆ ಹೋಗಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇತ್ತ ದಾವಣಗೆರೆಯಲ್ಲೂ ಸಾಲ ಸೂಲ ಮಾಡಿ ಭೂಮಿ ಹದಗೊಳಿಸಿದ ರೈತರು ಮಳೆ ಬಾರದೆ ಕಂಗಾಲಾಗಿದ್ದಾರೆ. ತುಂಗಭದ್ರಾ ನದಿಯಲ್ಲೂ ನೀರಿನ ಮಟ್ಟ ತಳ ತಲುಪಿದ್ದು, ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರಾವಳಿ, ದಕ್ಷಿಣ ಒಳನಾಡಲ್ಲಿ 2 ದಿನ ಭಾರಿ ಮಳೆ ನಿರೀಕ್ಷೆ

ಮತ್ತೊಂದೆಡೆ, ಜಾಗತಿಕ ಸಂಘರ್ಷದ ಹಿನ್ನೆಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಮಳೆ ಕೊರತೆಯಿಂದ ರೈತರ ಆದಾಯ ಕುಂಠಿತಗೊಳ್ಳುತ್ತಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *