ಬೆಂಗಳೂರು, ಜೂನ್ 16: 66 ನಟೋರಿಯಸ್ ರೌಡಿಶೀಟರ್ಗಳಿಗೆ ಪಟ್ಟಿಯಿಂದ ಮುಕ್ತಿ ನೀಡುವ ವಿಚಾರ ಗಮನಕ್ಕೆ ಬಂದಿದ್ದು, ಅದಕ್ಕೆ ತಡೆ ನೀಡಿದ್ದೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ವಿಷಯ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿ, ಎಡವಟ್ಟು ಹೇಗೆ ಸಂಭವಿಸಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಸೂಚಿಸಿದ್ದೇನೆ ಎಂದಿರುವ ಖರ್ಗೆ, ಲೋಪವನ್ನು ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ 66 ರೌಡಿಶೀಟರ್ಗಳ ಪಟ್ಟಿಯಲ್ಲಿ 8 ಜನರು ಬಿಜೆಪಿ ಕಾರ್ಯಕರ್ತರು ಎಂದು ಗೃಹ ಸಚಿವರು ಉಲ್ಲೇಖಿಸಿದ್ದಾರೆ. ಸೈಲೆಂಟ್ ಸುನೀಲ ಎಂಬ ರೌಡಿಶೀಟರ್ನ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಅವರು, ಪೊಲೀಸ್ ಇಲಾಖೆಯ ಕಾರ್ಯವೈಖರಿಯಲ್ಲಿನ ಈ ಲೋಪವನ್ನು ಸರಿಪಡಿಸಲು ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ಕೈಬಿಟ್ಟಿರುವ ಪೈಕಿ ಬೆಂಗಳೂರಿನ 7 ರೌಡಿಶೀಟರ್ಗಳಿದ್ದಾರೆ. ಉಳಿದವರು ಬೇರೆ ಬೇರೆ ಜಿಲ್ಲೆಯ ರೌಡಿಶೀಟರ್ಗಳು. ಕಾನೂನು ರೀತ್ಯಾ ಹಿನ್ನೆಲೆಯನ್ನು ಪರಿಶೀಲನೆ ಮಾಡುತ್ತೇವೆ. ಮತ್ತೊಮ್ಮೆ ಪರಿಶೀಲನೆ ಮಾಡಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ