Headlines

ಉದ್ಧವ್ ಬಣಕ್ಕೆ ‘ಬಂಡಾಯ’ ಭೀತಿ: ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದ ಯುಬಿಟಿ – Kannada News | Maharashtra Political Crisis: Uddhav Thackeray Writes to Speaker to Halt Rebel MPs

ಮುಂಬೈ, ಜೂನ್ 17: ಮಹಾರಾಷ್ಟ್ರ ರಾಜಕೀಯದಲ್ಲಿ ಆಂತರಿಕ ಭಿನ್ನಾಭಿಪ್ರಾಯ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಪಕ್ಷವು ತನ್ನ ಸಂಸದರು ಪಕ್ಷಾಂತರ ಮಾಡದಂತೆ ತಡೆಯಲು ದೆಹಲಿಯಲ್ಲಿ ದೊಡ್ಡ ರಾಜಕೀಯ ಹೆಜ್ಜೆ ಇಟ್ಟಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಶಿವಸೇನೆ (UBT) ಔಪಚಾರಿಕ ಪತ್ರ ಬರೆದಿದ್ದು, ಸಂಸತ್ತಿನಲ್ಲಿ ತಮ್ಮನ್ನು ಮಾತ್ರ ಅಧಿಕೃತ ರಾಜಕೀಯ ಪಕ್ಷವೆಂದು ಗುರುತಿಸಬೇಕೆಂದು ಕಟ್ಟುನಿಟ್ಟಿನ ಒತ್ತಾಯ ಮಾಡಿದೆ.

ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಏನಿದೆ?
ಪಕ್ಷದ ಹಿರಿಯ ಸಂಸದ ಹಾಗೂ ಸಂಸದೀಯ ನಾಯಕ ಅರವಿಂದ್ ಸಾವಂತ್ ಅವರು ಸ್ಪೀಕರ್‌ಗೆ ಈ ಅಧಿಕೃತ ಪತ್ರವನ್ನು ಸಲ್ಲಿಸಿದ್ದಾರೆ. ಶಿವಸೇನೆ (UBT) ಇಂದ ಒಡೆದು ಹೋಗುವ ಯಾವುದೇ ಬಂಡಾಯ ಗುಂಪು ಅಥವಾ ಸ್ವತಂತ್ರ ಬಣಕ್ಕೆ ಲೋಕಸಭೆಯಲ್ಲಿ ಯಾವುದೇ ಪ್ರತ್ಯೇಕ ಗುರುತು, ಸ್ಥಾನಮಾನ ಅಥವಾ ಸೌಲತ್ತುಗಳನ್ನು ನೀಡಬಾರದು ಎಂದು ಪತ್ರದಲ್ಲಿ ಕೋರಲಾಗಿದೆ.

ಒಂದು ವೇಳೆ ಬಂಡಾಯ ಸಂಸದರು ವಿಶೇಷ ಸ್ಥಾನಮಾನ ಕೋರಿ ಸ್ಪೀಕರ್ ಅವರನ್ನು ಸಂಪರ್ಕಿಸಿದರೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮೂಲ ಶಿವಸೇನೆ (UBT) ಪಕ್ಷಕ್ಕೆ ತನ್ನ ವಾದ ಮಂಡಿಸಲು ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಸಂವಿಧಾನದ ಹತ್ತನೇ ವೇಳಾಪಟ್ಟಿಯಡಿ (ಪಕ್ಷಾಂತರ ವಿರೋಧಿ ಕಾಯ್ದೆ) ಕಾನೂನು ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿಕೊಳ್ಳಲಾಗಿದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಓದಿ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಿರುಗಾಳಿ, ಉದ್ಧವ್ ಬಣದ ಸಂಸದರ ಫೋನ್ ಆಫ್, ದೆಹಲಿಯತ್ತ ಎಲ್ಲರ ಚಿತ್ತ

ಜೂನ್ 19ರ ಶಿವಸೇನೆ ಸಂಸ್ಥಾಪನಾ ದಿನದಂದೇ ಪಕ್ಷಾಂತರ?
ಮೂಲಗಳ ಪ್ರಕಾರ, ಉದ್ಧವ್ ಬಣದ ಒಟ್ಟು ಏಳು ಸಂಸದರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜೊತೆ ಸಂಪರ್ಕದಲ್ಲಿದ್ದಾರೆ. ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ ಮತ್ತು ಸಂಜಯ್ ಜಾಧವ್ ಅವರು ಬುಧವಾರ ದೆಹಲಿಯಲ್ಲಿ ಸಂಸದ ಶ್ರೀಕಾಂತ್ ಶಿಂಧೆ ನಿವಾಸದಲ್ಲಿ ಸಭೆ ಸೇರಲಿದ್ದಾರೆ.

ಈ ಬಂಡಾಯ ಗುಂಪು ಮೊದಲು ಲೋಕಸಭೆಯಲ್ಲಿ ಪ್ರತ್ಯೇಕ ಬಣ ರಚಿಸಿಕೊಂಡು, ನಂತರ ಜೂನ್ 19 ರಂದು (ಶಿವಸೇನೆಯ ಸಂಸ್ಥಾಪನಾ ದಿನ) ಅಧಿಕೃತವಾಗಿ ಶಿಂಧೆ ಬಣದೊಂದಿಗೆ ವಿಲೀನಗೊಳ್ಳುವ ಸಾಧ್ಯತೆಯಿದೆ.

ಮಹಾರಾಷ್ಟ್ರದಲ್ಲಿ ಬಿರುಸಾದ ಆಪರೇಷನ್ ಟೈಗರ್
ಕೇವಲ ಸಂಸದರಷ್ಟೇ ಅಲ್ಲದೆ, ಉದ್ಧವ್ ಬಣದ ಹಲವಾರು ಶಾಸಕರು ಕೂಡ ಪ್ರತಿಸ್ಪರ್ಧಿ ಶಿಬಿರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆಡಳಿತಾರೂಢ ಮೈತ್ರಿಕೂಟವು ಇದಕ್ಕೆ ಆಪರೇಷನ್ ಟೈಗರ್ ಎಂಬ ಸಂಕೇತನಾಮ ನೀಡಿದ್ದು, ಇದು ಇಡೀ ಮಹಾರಾಷ್ಟ್ರ ರಾಜಕೀಯದ ಚಿತ್ರಣವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ.

ಶಾಸಕರು ಕೈಕೊಡುವುದನ್ನು ತಡೆಯಲು ಅಲರ್ಟ್ ಆಗಿರುವ ಉದ್ಧವ್ ಠಾಕ್ರೆ, ಜೂನ್ 22 ರಂದು ಸಂಜೆ 4 ಗಂಟೆಗೆ ಮುಂಬೈನ ಪಕ್ಷದ ಕಚೇರಿ ‘ಶಿವಾಲಯ’ದಲ್ಲಿ ತಮ್ಮ ಎಲ್ಲಾ ಶಾಸಕರ ತುರ್ತು ಸಭೆ ಕರೆದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *