Headlines

ರೈತರಿಗೆ ಖುಷಿ ಸುದ್ದಿ: ಜೂ 25ಕ್ಕೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ – Kannada News | Tungabhadra Dam’s 33 New Gates to Be Inaugurated on June 25 by Karnataka, Telangana and Andhra Pradesh CMs

ಕೊಪ್ಪಳ, ಜೂನ್​​ 19: ತುಂಗಭದ್ರಾ ಜಲಾಶಯದ (Tungabhadra Dam) ಕ್ರಸ್ಟ್ ಗೇಟ್ ಮುರಿದುಬಿದ್ದು ಮೂರು ರಾಜ್ಯಗಳ ಒಂಬತ್ತು ಜಿಲ್ಲೆಗಳಲ್ಲಿ ಆತಂಕ ಮೂಡಿಸಿದ್ದ ಸಮಸ್ಯೆಗೆ ಇದೀಗ ಶಾಶ್ವತ ಪರಿಹಾರ ಸಿಕ್ಕಿದೆ. ಜಲಾಶಯದ ಒಟ್ಟು 33 ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಲಾಗಿದ್ದು, ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಜೂನ್ 25 ರಂದು ಕರ್ನಾಟಕ (Karnataka), ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಜಂಟಿಯಾಗಿ ಈ ನೂತನ ಗೇಟ್‌ಗಳನ್ನು ಉದ್ಘಾಟಿಸಲಿದ್ದಾರೆ.

ಮುಖ್ಯಾಂಶಗಳು

  • ತುಂಗಭದ್ರಾ ಜಲಾಶಯದ ಕ್ರಷ್ಟ್ ಗೇಟ್​ಗಳ ಉದ್ಘಾಟನೆಗ ಕ್ಷಣಗಣನೆ
  • ಜೂನ್ 25 ರಂದು ಮೂರು ರಾಜ್ಯಗಳ ಸಿಎಂಗಳಿಂದ ಲೋಕಾರ್ಪಣೆ
  • 55 ರಿಂದ 60 ವರ್ಷಗಳವರೆಗೆ ಬಾಳಿಕೆ ಬರಲಿರುವ ಕ್ರಷ್ಟ್ ಗೇಟ್​ಗಳು

51 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: 55 ರಿಂದ 60 ವರ್ಷಗಳವರೆಗೆ ಬಾಳಿಕೆ

ಕರ್ನಾಟಕದ ನಾಲ್ಕು ಜಿಲ್ಲೆಗಳು ಮಾತ್ರವಲ್ಲದೆ, ನೆರೆಯ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೂ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ 2024ರ ಆಗಸ್ಟ್ 10ರಂದು ಕೊಚ್ಚಿಹೋಗಿತ್ತು. ಈ ಘಟನೆಯ ಬಳಿಕ ತಂತ್ರಜ್ಞರ ಸಮಿತಿಯು ಜಲಾಶಯದ ಎಲ್ಲಾ 33 ಗೇಟ್‌ಗಳನ್ನು ಬದಲಾಯಿಸಲು ಸೂಚನೆ ನೀಡಿತ್ತು. ಅದರಂತೆ ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ಈ ಮಹತ್ವದ ಕಾಮಗಾರಿಯನ್ನು ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಹೊಸ ಕ್ರಸ್ಟ್ ಗೇಟ್‌ಗಳು ಮುಂದಿನ 55 ರಿಂದ 60 ವರ್ಷಗಳವರೆಗೆ ಬಾಳಿಕೆ ಬರಲಿವೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಬಗ್ಗೆ ಸರ್ಕಾರದಿಂದ ಬಿಗ್ ಅಪ್​ಡೇಟ್: ರೈತರು ಫುಲ್ ಖುಷ್

ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ಜಲಾಶಯಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗಾರೆಡ್ಡಿ, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ತದನಂತರ ಮುನಿರಾಬಾದ್‌ನ ಹೈಸ್ಕೂಲ್ ಮೈದಾನದಲ್ಲಿ ಸಿದ್ಧಗೊಳ್ಳುತ್ತಿರುವ ಬೃಹತ್ ವೇದಿಕೆ, ವಾಹನ ಸಂಚಾರ ವ್ಯವಸ್ಥೆ, ಬ್ಯಾರಿಕೇಡ್ ಅಳವಡಿಕೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಳ್ಳಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ವೀಕ್ಷಿಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.

ವೇಗವಾಗಿ ಕಾಮಗಾರಿ ಮುಗಿಸಿರುವುದು ನಮ್ಮ ಸರ್ಕಾರದ ಬದ್ಧತೆ: ಶಾಸಕ ರಾಘವೇಂದ್ರ ಹಿಟ್ನಾಳ್

ಈ ಐತಿಹಾಸಿಕ ಸಮಾರಂಭದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉದ್ಘಾಟನೆಯ ಜೊತೆಗೆ, ಮೂರು ರಾಜ್ಯಗಳ ನಡುವಿನ ನೀರಿನ ಹಂಚಿಕೆ, ನೀರಾವರಿ ಯೋಜನೆಗಳು ಹಾಗೂ ಅಂತಾರಾಜ್ಯ ನದಿ ವಿವಾದಗಳ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ. ವಿಶೇಷವಾಗಿ ಮೇಕೆದಾಟು, ಮಹಾದಾಯಿ ಹಾಗೂ ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಕುರಿತು ಕೇಂದ್ರ ಸರ್ಕಾರದೊಂದಿಗೆ ನಡೆಸಬೇಕಾದ ಮಾತುಕತೆಗಳ ಬಗ್ಗೆಯೂ ಈ ವೇದಿಕೆಯಲ್ಲಿ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿದೆ. ವಿರೋಧ ಪಕ್ಷವಾದ ಬಿಜೆಪಿ ಈ ವಿಷಯದಲ್ಲಿ ಸಾಲು ಸಾಲು ಆರೋಪಗಳನ್ನು ಮಾಡಿದರೂ, ಅತ್ಯಂತ ವೇಗವಾಗಿ ಕಾಮಗಾರಿ ಮುಗಿಸಿರುವುದು ನಮ್ಮ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ?

ಒಟ್ಟಾರೆ ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕೇವಲ ಒಂದು ಕಾಮಗಾರಿಯ ಉದ್ಘಾಟನೆ ಮಾತ್ರವಲ್ಲ, ಮೂರು ರಾಜ್ಯಗಳ ನೀರಿನ ಹಂಚಿಕೆ ಮತ್ತು ನೀರಾವರಿ ಭವಿಷ್ಯದ ಕುರಿತ ಮಹತ್ವದ ಚರ್ಚೆಗೆ ವೇದಿಕೆಯಾಗಿದೆ. ಜೊತೆಗೆ ಮೂರು ರಾಜ್ಯದ ಒಂಬತ್ತು ಜಿಲ್ಲೆಯ ಜನರು ಹಾಗೂ ರೈತರಿಗೆ ಖುಷಿಯ ಕ್ಷಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *