ಕುಮಾರಸ್ವಾಮಿ ಮತ್ತು ಸುರೇಶ್ ಕುಮಾರ್Image Credit source: Tv9 Kannada
ಬೆಂಗಳೂರು, ಜೂನ್ 22: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ರಾಜ್ಯ ಬಿಜೆಪಿ ನಿರ್ಧರಿಸಿದೆ. ಪಕ್ಷಕ್ಕೆ ದ್ರೋಹ ಬಗೆದವರು ಯಾರೆಂಬುದು ದೇವರ ಎದುರೇ ಬಯಲಾಗಲಿ ಎಂದು ನಿನ್ನೆಯಷ್ಟೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದರು. ಪಕ್ಷದ ಈ ನಿರ್ಧಾರಕ್ಕೆ ಕೆಲ ಹಿರಿಯ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಕೀಯ ಅಪಚಾರಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಬೇಕು. ಬದಲಾಗಿ ಪವಿತ್ರ ಕ್ಷೇತ್ರಗಳನ್ನು ಎಳೆದು ತರುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೂಡ ರಾಜ್ಯ ಬಿಜೆಪಿಗೆ ಕೆಲ ಸಲಹೆ ನೀಡಿದ್ದಾರೆ.
ಕುಮಾರಸ್ವಾಮಿ ಹೇಳಿದ್ದೇನು?
ನ್ನ ಅಭಿಪ್ರಾಯದಲ್ಲಿ ಆಣೆ ಪ್ರಮಾಣದ ವಿಚಾರವನ್ನು ಇಲ್ಲಿಗೆ ನಿಲ್ಲಿಸಿ. ಈ ಸರ್ಕಾರದಲ್ಲಿ ಯಾರನ್ನ ಬೇಕಾದರೂ ಬ್ಲಾಕ್ಮೇಲ್, ಬದಲಾವಣೆ ಮಾಡುತ್ತಾರೆ. ಕ್ರಾಸ್ ವೋಟಿಂಗ್ ಹೊಸದೇನಲ್ಲ. ಹೀಗಾಗಿ ಬಿಜೆಪಿಯವ್ರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬೇಡಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ, ಈಗಿನ ಸಿಎಂ ದಾರಾಳವಾಗಿದ್ದಾರೆ.ಆ ಕಾರಣಕ್ಕೆಅಭಿವೃದ್ಧಿ ಹೆಸರಲ್ಲಿ ಕ್ಷೇತ್ರದ ಜನರ ಮುಂದೆ ಹೋಗಲು ಕ್ರಾಸ್ ವೋಟ್ ಮಾಡಿರಬಹುದು. ಇದನ್ನ ಇಲ್ಲಿಗೆ ಬಿಟ್ಟುಬಿಡಿ ಎಂದು ಹೆಚ್ಡಿಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್; ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿ
ಶಾಸಕ ಸುರೇಶ್ ಕುಮಾರ್ರಿಂದಲೂ ಸಲಹೆ
ರಾಜಕೀಯದಲ್ಲಿ ಆಗಿರುವ ಅಪಚಾರಗಳಿಗೆ ರಾಜಕೀಯ ಉತ್ತರ ಕಂಡುಕೊಳ್ಳಬೇಕು. ಧರ್ಮಸ್ಥಳವು ನಾಡಿನ ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ಅದರ ಪಾವಿತ್ರ್ಯತೆಯನ್ನು ಕಾಪಾಡಬೇಕು. ರಾಜಕೀಯದಲ್ಲಿ ನಡೆದಿರುವ ಅಡ್ಡಮತದಾನದಂತಹ ಅಪಸವ್ಯಗಳಿಗೆ ಪವಿತ್ರ ಕ್ಷೇತ್ರವನ್ನು ಎಳೆದು ತರುವುದು ಸರಿಯಲ್ಲ. ರಾಜಕೀಯ ಸಮಸ್ಯೆಗಳಿಗೆ ರಾಜಕೀಯ ಪರಿಹಾರವೇ ಉತ್ತಮ ಎಂದು ಬಿಜೆಪಿಯ ಹಿರಿಯ ಸುರೇಶ್ ಕುಮಾರ್ ಕೂಡ ಅಭಿಪ್ರಾಯಪಟ್ಟಿದ್ದಾರೆ. ವಿಜಯೇಂದ್ರ ಅವರು ನೋವಿನಿಂದ ಈ ಮಾತುಗಳನ್ನು ಹೇಳಿದ್ದಾರೆ. ಆದರೆ, ಅಡ್ಡಮತದಾನ ಮಾಡಿದವರನ್ನು ಗುರುತಿಸಲು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವುದು ಪರಿಹಾರವಲ್ಲ. ಹಾಗೆ ಮಾಡಿದರೂ, ಸುಳ್ಳು ಹೇಳುವವನನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಇದರಿಂದ ಪವಿತ್ರ ಕ್ಷೇತ್ರದ ಶ್ರದ್ಧೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.