ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು, ಇದೀಗ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಗಳಿಸಿದೆ. ಆದರೆ ಸಿನಿಮಾ ಬಿಡುಗಡೆ ಆದಾಗ ಸಿನಿಮಾನಲ್ಲಿ ನಟಿ ಜಾನ್ಹವಿ ಕಪೂರ್ ಅವರನ್ನು ತೋರಿಸಿರುವ ರೀತಿಯ ಬಗ್ಗೆ ತೀವ್ರ ವಿವಾದ ಎದ್ದಿತ್ತು. ಅತಿಯಾದ ಗ್ಲಾಮರಸ್ ಆಗಿ ನಟಿಯನ್ನು ತೆರೆಯ ಮೇಲೆ ತೋರಿಸಲಾಗಿತ್ತು. ಖುದ್ದು ಜಾನ್ಹವಿ ಕಪೂರ್ ಸಹ ಈ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಬಳಿಕ, ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ ಕೇಳಿ, ಜಾನ್ಹವಿಯ ದೃಶ್ಯಗಳನ್ನು ಡಿಲೀಟ್ ಮಾಡಿದರು.
ಆದರೆ ಈ ವಿವಾದದಿಂದ ಜಾನ್ಹವಿ ಕಪೂರ್ ಹಾಗೂ ‘ಪೆದ್ದಿ’ ಚಿತ್ರತಂಡದ ನಡುವೆ ಮನಸ್ತಾಪ ಏರ್ಪಟ್ಟಿದೆ. ನಿನ್ನೆಯಷ್ಟೆ ‘ಪೆದ್ದಿ’ ಸಿನಿಮಾದ ಅದ್ಧೂರಿ ಸಕ್ಸಸ್ ಪಾರ್ಟಿ ನಡೆಯಿತು. ಆದರೆ ಈ ಕಾರ್ಯಕ್ರಮಕ್ಕೆ ನಟಿ ಜಾನ್ಹವಿ ಕಪೂರ್ ಗೈರಾಗಿದ್ದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಬುಚ್ಚಿಬಾಬು, ನಟ ರಾಮ್ ಚರಣ್, ಅತಿಥಿಗಳಾಗಿ ಮೆಗಾಸ್ಟಾರ್ ಚಿರಂಜೀವಿ, ನಿರ್ದೇಶಕ ಸುಕುಮಾರ್ ಅವರುಗಳು ಭಾಗವಹಿಸಿದ್ದರು. ಆದರೆ ಜಾನ್ಹವಿ ಕಪೂರ್ ಗೈರಾಗಿದ್ದರು.
ಇದನ್ನೂ ಓದಿ:ನಿರ್ಮಾಪಕರಿಗೆ ಹೇಳದೆ ‘ಪೆದ್ದಿ’ ಆದಾಯ ಹಂಚಿಕೆ: ದೂರು ದಾಖಲು
ಅದು ಮಾತ್ರವೇ ಅಲ್ಲದೆ, ವೇದಿಕೆ ಮೇಲೆ ಮಾತನಾಡಿದ ಹಲವರು ನಟಿ ಜಾನ್ಹವಿ ಕಪೂರ್ ಅವರ ಹೆಸರನ್ನು ಸಹ ಹೇಳಲಿಲ್ಲ. ಉದ್ದೇಶಪೂರ್ವಕವಾಗಿ ಚಿತ್ರತಂಡ ಸಹ ಜಾನ್ಹವಿ ಕಪೂರ್ ಅವರನ್ನು ಉಪೇಕ್ಷಿಸಿತು. ಜಾನ್ಹವಿ ಕಪೂರ್ ಹಾಗೂ ‘ಪೆದ್ದಿ’ ಚಿತ್ರತಂಡದ ನಡುವೆ ಉಂಟಾಗಿರುವ ಮನಸ್ತಾಪವನ್ನು ನಿನ್ನೆಯ ಕಾರ್ಯಕ್ರಮ ಜಗಜ್ಜಾಹೀರು ಮಾಡಿದೆ.
ಜಾನ್ಹವಿ ಕಪೂರ್ ಅವರು ‘ಪೆದ್ದಿ’ ಸಿನಿಮಾನಲ್ಲಿ ಅಚ್ಚಿಯಮ್ಮ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ನಿರ್ದೇಶಕರು ಜಾನ್ಹವಿಯ ಪಾತ್ರವನ್ನು ಕೇವಲ ಗ್ಲಾಮರ್ಗಾಗಿ ಮಾತ್ರ ಬಳಸಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಜಾನ್ಹವಿ ಕಪೂರ್ ಪರದೆಯ ಮೇಲೆ ಕಾಣಿಸಿಕೊಂಡಾಗೆಲ್ಲ, ನಿರ್ದೇಶಕರು ಕ್ಯಾಮೆರಾ ಅನ್ನು ನಟಿಯ ಎದೆ ಮತ್ತು ಸೊಂಟದ ಕಡೆಗೆ ತಿರುಗಿಸಿದ್ದರು. ಜಾನ್ಹವಿಯ ಪಾತ್ರಕ್ಕೆ ಧರಿಸಿರುವ ಬಟ್ಟೆಗಳು ಸಹ ಅತ್ಯಂತ ರಿವೀಲಿಂಗ್ ಆಗಿದ್ದವು. ವಿವಾದ ಉಂಟಾದ ಬಳಿಕ ನಿರ್ದೇಶಕ ಬುಚ್ಚಿಬಾಬು ಸನಾ, ಕ್ಷಮೆ ಕೇಳಿ, ಜಾನ್ಹವಿಯ ಗ್ಲಾಮರಸ್ ದೃಶ್ಯಗಳನ್ನು ಡಿಲೀಟ್ ಮಾಡಿ, ಸಿನಿಮಾ ಮರು ಬಿಡುಗಡೆ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ